ಬೆಂಗಳೂರು | ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಕಾರು: ಓರ್ವ ಮೃತ್ಯು, ಮೂವರಿಗೆ ಗಾಯ

Update: 2022-05-20 13:26 GMT
ಸಿಸಿಟಿವಿ ದೃಶ್ಯ

ಬೆಂಗಳೂರು, ಮೇ 20: ನಿಯಂತ್ರಣ ತಪ್ಪಿದ ಕಾರೊಂದು ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ 7 ಗಂಟೆ ವೇಳೆ ಕತ್ತರಿಗುಪ್ಪೆ ಬಳಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಸುರೇಶ್ ಸಾವಿಗೀಡಾದರೆ, ಸಚಿನ್, ಶಿವರಾಜ್ ಹಾಗೂ ಶೈಲೇಂದ್ರ ಎಂಬುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಗೆ ಕಾರಣರಾದ ಮುಕೇಶ್ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಧಾರಾವಾಹಿಯೊಂದರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮುಕೇಶ್ ಶೂಟಿಂಗ್ ಮುಗಿಸಿಕೊಂಡು ಕತ್ತರಿಗುಪ್ಪೆ ಜಂಕ್ಷನ್‍ನಿಂದ ಇಟ್ಟಮಡು ಜಂಕ್ಷನ್ ಕಡೆ ಕಾರಿನಲ್ಲಿ ವೇಗವಾಗಿ ಬಂದಿದ್ದಾರೆ. 

ಜೊತೆಗೆ ಪಾರ್ಕ್ ಮಾಡಲಾಗಿದ್ದ ಕಾರಿಗೆ ಗುದ್ದಿದ್ದರಿಂದ ಎರಡು ಕಾರುಗಳು ಜಖಂಗೊಂಡಿವೆ. ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಈ ಪೈಕಿ ಸುರೇಶ್ ಸಾವಿಗೀಡಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಬನಶಂಕರಿ ಸಂಚಾರಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News