'ಇದೊಂದು ಟೆಸ್ಟ್ ಡೋಸ್, ಸುಮ್ಮನಿದ್ದರೆ ಹಿಂದೂ ರಾಷ್ಟ್ರದ ಡೋಸ್': ಪಠ್ಯ ಪರಿಷ್ಕರಣೆ ವಿರುದ್ಧ ನಿರಂಜನಾರಾಧ್ಯ ಆಕ್ರೋಶ

Update: 2022-05-25 14:50 GMT

ಬೆಂಗಳೂರು, ಮೇ 25: ಪ್ರಸಕ್ತ ಪಠ್ಯ ಪುಸ್ತಕ ಪರಿಷ್ಕರಣೆಯೂ ‘ಟೆಸ್ಟ್ ಡೋಸ್’ ಅಷ್ಟೇ. ಇದಕ್ಕೆ ಸಮಾಜ ಪ್ರತಿರೋಧ ಬರದಿದ್ದರೆ ಸಂವಿಧಾನ ಬುಡಮೇಲು ಮಾಡಿ ಹಿಂದೂರಾಷ್ಟ್ರ ಕಟ್ಟುವ ‘ಫುಲ್‍ಡೋಸ್’ಗೆ ತಯಾರಿಯಷ್ಟೇ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಹೇಳಿದರು.

ಬುಧವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಪಠ್ಯ ಪುಸ್ತಕ ರಚನೆ, ಪರಿಷ್ಕರಣೆ ಮರು ಪರಿಷ್ಕರಣೆ ಕುರಿತು ಶಿಕ್ಷಣ ತಜ್ಞರು ಚಿಂತಕರೊಂದಿಗೆ ನಡೆದ ಸಮಾಲೋಚನೆ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬಿಜೆಪಿ ಕಾರ್ಯಕರ್ತನಂತೆ ಮಾತನಾಡುತ್ತಾರೆ. ಆದರೆ, ಆಳುವ ಪಕ್ಷದ ಬೆಂಬಲಿಗರು ಹೇಳುವಂತೆ ಇದು ಎಡ-ಬಲದ ಪ್ರಶ್ನೆಯಲ್ಲ ಎಂದರು.

ಇದು ವಾಸ್ತವವಾಗಿ ಸಂವಿಧಾನಕ್ಕೆ ಬದ್ಧರಾಗಿರುವವರು ಮತ್ತು ಅದಕ್ಕೆ ವಿರೋಧಿಗಳ ನಡುವೆ ವಿವಾದ. ಇದು ಸ್ವಾತಂತ್ರ್ಯ ಚಳುವಳಿಯ ಕಾಲದಿಂದಲೂ ನಂತರವೂ ನಡೆದುಕೊಂಡು ಬಂದ ವಿವಾದ. ಪಠ್ಯಪುಸ್ತಕಗಳ ಪ್ರಧಾನ ನೆಲೆ ಅಂತರ್‍ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ನಮ್ಮ ಸಂವಿಧಾನದ ಆಶಯಗಳು. ಇವನ್ನು ತಿರಸ್ಕರಿಸುವ ಈ ಪರಿಷ್ಕರಣೆಯನ್ನು ತಿರಸ್ಕರಿಸಬೇಕು ಎಂದು ಅವರು ಹೇಳಿದರು.

ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ನಿರ್ವಾತದಲ್ಲಿ ಆಗುತ್ತಿಲ್ಲ. ಈಗ ಅಸ್ತಿತ್ವಕ್ಕೆ ಬಂದಿರುವ ಬಹುಸಂಖ್ಯಾತವಾದಿ ಪ್ರಭುತ್ವದ ಸಿದ್ಧಾಂತದ ಭಾಗ ಎಂದ ಅವರು, ಸಂವಿಧಾನವನ್ನು ನಿಷ್ಕ್ರಿಯಗೊಳಿಸುವುದು, ತನ್ನ ಸಿದ್ಧಾಂತವನ್ನು ಪ್ರಚಾರ ಮಾಡುವುದು ಅದರ ಸಿದ್ಧಾಂತ ಎಂದು ನುಡಿದರು.

ಅಲ್ಲದೆ, ಪ್ರಭುತ್ವದ ಪ್ರಕಾರ, ಪಠ್ಯ ಒಂದು ಕಲಿಕೆಯ ಸಾಧನವಲ್ಲ, ಒಂದು ಸೈದ್ಧಾಂತಿಕ ಅಸ್ತ್ರ. ಅದು ವಿಮರ್ಶಾತ್ಮಕ ಯೋಚನಾ ವಿಧಾನ ಮತ್ತು ಜ್ಞಾನ ಸೃಷ್ಟಿಯ ಕಲ್ಪನೆಗಳಿಗೆ ಬದ್ಧ ವೈರಿ. ಜತೆಗೆ, ಮಕ್ಕಳ ತಲೆ ಖಾಲಿ ಡಬ್ಬ, ಅದನ್ನು ತನ್ನ ಸಿದ್ಧಾಂತದಿಂದ ತುಂಬಬೇಕು ಎಂಬುವ ಉದ್ದೇಶ ಹೊಂದಿದೆ ಎಂದು ಟೀಕಿಸಿದರು.

ಪಠ್ಯವನ್ನು ವಿಮರ್ಶಿಸಿ, ಚರ್ಚಿಸಿ ತಮಗೆ ಸ್ವೀಕೃತವಾಗುವ ಪಠ್ಯವನ್ನು ಅಂಗೀಕರಿಸುವ ಪೆÇೀಷಕರಾಗಿ ಎಲ್ಲರು ತಮ್ಮ ನಾಗರಿಕ ಹಕ್ಕನ್ನು ಚಲಾಯಿಸಬೇಕು. ಅದಕ್ಕೂ ಒಪ್ಪದಿದ್ದರೆ ಸಂವಿಧಾನ ಮೌಲ್ಯಗಳು ಇರುವ ನಾಗರಿಕ ಅಪೇಕ್ಷೆಯ ಪರ್ಯಾಯ ಪಠ್ಯಗಳನ್ನು ತಯಾರಿಸಬೇಕು. ಕಲಿಕೆಯನ್ನು ಸಂಸ್ಕೃತಿಯನ್ನು ಪಠ್ಯಗಳಾಚೆಗೆ ವಿಸ್ತರಿಸಬೇಕು ಎಂದು ಚೆನ್ನಿ ಸೂಚಿಸಿದರು.

ಸಭೆಯಲ್ಲಿ ಪ್ರೊ.ಟಿ.ಆರ್.ಚಂದ್ರಶೇಖರ್, ಡಾ.ಪ್ರಜ್ವಲ್ ಶಾಸ್ತ್ರೀ ಇಂದೂಧರ ಹೊನ್ನಾಪುರ, ಎಚ್.ಎಸ್.ರಾಘವೆಂದ್ರ ರಾವ್, ಬಂಜಗೆರೆ ಜಯಪ್ರಕಾಶ್, ಕುಮಾರ್, ಬಿ.ರಾಜಶೇಖರ್ ಮೂರ್ತಿ ಮಾತನಾಡಿದರು.

ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಡಾ.ವಸುಂಧರಾ ಭೂಪತಿ, ಕೆ.ಶರೀಫಾ, ಬಿ.ಟಿ.ಲಲಿತಾ ನಾಯಕ್, ಇಂದಿರಾ ಕೃಷ್ಣಪ್ಪ ಇದ್ದರು. ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಚಿಂತಕ ಬಿ.ಶ್ರೀಪಾದ ಭಟ್ ಮಂಡಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು. ಮಹಿಳಾ ಪರ ಹೋರಾಟಗಾರ್ತಿ ಕೆ.ಎಸ್.ವಿಮಲಾ ಅವರು ಸಮಾಲೋಚನೆಯ ನಿರ್ವಹಣೆ ಮಾಡಿದರು.

ತಜ್ಞರ ಸಮಿತಿ ರಚಿಸಬೇಕು

ಜನತೆಗೆ ನಿಜಾರ್ಥದಲ್ಲಿ ಸಂವಿಧಾನದ ಆಶಯಗಳನ್ನುಳ್ಳ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡ, ಸಾಮಾಜಿಕ ನ್ಯಾಯವನ್ನು ಪಾಲಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕøತಿಯನ್ನು, ಕನ್ನಡದ ಅಸ್ಮಿತೆಯನ್ನು ಒಳಗೊಂಡ ಒಂದು ಮಾದರಿ ಪರ್ಯಾಯ ಪಠ್ಯಕ್ರಮವನ್ನು  ರೂಪಿಸಬೇಕಾಗಿದೆ. ಈ ಕಾರ್ಯ ಯೋಜನೆಗಾಗಿ ಒಂದು ತಜ್ಞರ ಸಮಿತಿ ರಚಿಸಬೇಕು ಎಂದು ಸಭೆಯಲ್ಲಿ ಚಿಂತಕರು ಮಂಡಿಸಿದರು. 

ದಮನಿತರೂ ಇದ್ದಾರೆ

ಈಗಷ್ಟೇ ಶಿಕ್ಷಣಕ್ಕೆ ತೆರೆದುಕೊಂಡಿರುವ ಬಹುಸಂಖ್ಯಾತ ದಲಿತರು, ದಮನಿತ ಸಮುದಾಯಗಳವರು ಈ ಎರಡು ವರ್ಷಗಳಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು. 

-ಪ್ರೊ.ಟಿ.ಆರ್.ಚಂದ್ರಶೇಖರ್, ಚಿಂತಕ

------------------------------

ಮನುಷ್ಯ ಕೇಂದ್ರಿತವಲ್ಲ

ಇದು ವೈದಿಕ ಬ್ರಾಹ್ಮಣಶಾಹಿ ಪುನರ್ ಸ್ಥಾಪಿಸುವ ಕುತಂತ್ರ. ಹೆಡ್ಗೆವಾರ್ ಲೇಖನ ಸಿದ್ಧಾಂತ ಕೇಂದ್ರಿತ ಮನುಷ್ಯ ಕೇಂದ್ರಿತವಲ್ಲ. ಈ ಪಠ್ಯಕ್ರಮ ಪರಿಷ್ಕರಣೆ ನಿಲ್ಲಿಸುವ ಧೋರಣೆಯನ್ನು ಜನಸಮೂಹದ ಬಳಿ ತೆಗೆದುಕೊಂಡು ಹೋಗಬೇಕು.

-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ

‘ಬೆಳಕು ಆರಿಸಲಾಗುತ್ತಿದೆ’

ಸಹಸ್ರಾರು ವರ್ಷಗಳಿಂದ ಶಿಕ್ಷಣ ವಂಚಿತವಾದ ಸಮುದಾಯಗಳು 70 ವರ್ಷಗಳ ಅವಧಿಯಲ್ಲಿ ಕಡ್ಡಾಯ ಶಿಕ್ಷಣದಿಂದ ಬೆಳಕು ಕಂಡಿದ್ದವು. ಈಗ ಆ ಬೆಳಕನ್ನು ಆರಿಸಲಾಗುತ್ತಿದೆ. ಸದ್ಯ ವಿವಾದಿತ ಸಮಿತಿಯನ್ನು ರಾಜ್ಯ ಸರಕಾರ ವಜಾಗೊಳಿಸಬೇಕೆಂದು ಸಾಹಿತಿ ಪೆÇ್ರ.ಎಸ್.ಜಿ. ಸಿದ್ಧರಾಮಯ್ಯ ಒತ್ತಾಯಿಸಿದರು.

----------------

ಕೀಳು ವರ್ಣನೆ

ಮಹಿಳಾ ಪ್ರಾತಿನಿಧ್ಯವನ್ನು ಕಡೆಗಣಿಸಲಾಗಿದೆ. ಬನ್ನಂಜೆ ಗೋವಿಂದಾಚಾರ್ಯರ ‘ಸುಖನಾಥನ ಉಪದೇಶ’ ಅಧ್ಯಾಯದಲ್ಲಿ ಲಕ್ಷ್ಮೀ ಬಗ್ಗೆ ಕೆಟ್ಟದಾಗಿ ವರ್ಣಿಸಲಾಗಿದೆ. ಕೀಳು ಮಟ್ಟದಲ್ಲಿ ಹೆಣ್ಣನ್ನು ಬಿಂಬಿಸುವ ಪಠ್ಯ ಅದಾಗಿದೆ. ಅದನ್ನು ರದ್ದುಮಾಡಬೇಕು.

-ವಸುಂಧರಾ ಭೂಪತಿ, ಲೇಖಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News