ಭಾರತಕ್ಕೆ ಗಲ್ಫ್‌ ರಾಷ್ಟ್ರಗಳು ಏಕೆ ಮುಖ್ಯ?

Update: 2022-06-08 08:11 GMT

ಹೊಸದಿಲ್ಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದರ ವಿರುದ್ಧ ನಿಂದನಾತ್ಮಕ ಟೀಕೆ ಮಾಡಿರುವ ಬಗ್ಗೆ ಕೆಂಡಾಮಂಡಲವಾಗಿರುವ ಅರಬ್‌ ರಾಷ್ಟ್ರಗಳು, ಭಾರತ ಸರ್ಕಾರದ ಮೇಲೆ ಒತ್ತಡ ತಂದಿವೆ. ಈ ಒತ್ತಡಕ್ಕೆ ಮಣಿದಿರುವ ಭಾರತ ಸರ್ಕಾರವು ಕತರ್, ಕುವೈತ್, ಇರಾನ್, ಸೌದಿ ಅರೇಬಿಯಾ ಮತ್ತು ಬಹ್ರೇನ್‌ನಂತಹ ದೇಶಗಳ ಅಸಮಾಧಾನವನ್ನು ಹೋಗಲಾಡಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಅರಬ್‌ ರಾಷ್ಟ್ರಗಳನ್ನು ಭಾರತವು ಗಂಭೀರವಾಗಿ ಪರಿಗಣಿಸಲು ಅದರದೇ ಆದ ಕಾರಣಗಳಿವೆ. 


ಗಲ್ಫ್ ಮತ್ತು ಭಾರತವನ್ನು ಬೆಸೆಯುವ ಸಂಬಂಧಗಳು ವ್ಯಾಪಾರ ಮತ್ತು ವಾಣಿಜ್ಯ ಮಾತ್ರವಲ್ಲದೆ ಇತಿಹಾಸ ಮತ್ತು ಸಂಸ್ಕೃತಿಯನ್ನು ಕೂಡಾ ಆಧರಿಸಿವೆ. ಗಲ್ಫ್‌ನಲ್ಲಿ, ಲಕ್ಷಾಂತರ ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಇದರಿಂದಲೇ ಭಾರತಕ್ಕೆ ರವಾನೆ ಮಾಡುವ ದುಡ್ಡಿನ (ರೆಮಿಟೆನ್ಸ್) ದೊಡ್ಡ ಭಾಗ ಬರುತ್ತದೆ.


ಇತ್ತೀಚಿನ ವರ್ಷಗಳಲ್ಲಿ, ಈ ದೇಶಗಳೊಂದಿಗೆ ಭಾರತದ ವ್ಯಾಪಾರ ಸಂಪರ್ಕಗಳು ಗಟ್ಟಿಯಾಗುತ್ತಿವೆ. ತನ್ನ ತೈಲ ಅಗತ್ಯಗಳಿಗಾಗಿ, ಭಾರತವು ಈ ದೇಶಗಳನ್ನು ಹೆಚ್ಚು ಅವಲಂಬಿಸಿದೆ.


ಯುಎಇಯ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಭಾಗ ಭಾರತೀಯರು ಆ ದೇಶದಲ್ಲಿದ್ದಾರೆ. ಒಟ್ಟು ಕೊಲ್ಲಿ ದೇಶಗಳಲ್ಲಿ ಸುಮಾರು 89 ಲಕ್ಷ ಭಾರತೀಯ ನಾಗರಿಕರಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿನ ಕೆಲವು ಪ್ರಮುಖ ಬೃಹತ್ ರಿಟೇಲ್ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಭಾರತೀಯರ ಒಡೆತನದಲ್ಲಿದೆ. ಪ್ರವಾದಿ ಮಹಮ್ಮದರ ನಿಂದನೆಯ ಬಳಿಕ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅರಬ್‌ ನಾಗರಿಕರು ಕೊಡುತ್ತಿರುವ ಕರೆಗಳು ಭಾರತೀಯರ ಒಡೆತನದ ವ್ಯವಹಾರಗಳಿಗೆ ನಕರಾತ್ಮಕ ಪರಿಣಾಮ ಬೀರುತ್ತವೆ. 


ಹಾಗಿದ್ದರೂ, ಕೊಲ್ಲಿ ರಾಷ್ಟ್ರಗಳೂ ಒಂದಿಷ್ಟು ಕ್ಷೇತ್ರಗಳಲ್ಲಿ ಭಾರತವನ್ನು ನೆಚ್ಚಿಕೊಂಡಿವೆ. ಯುನೈಟೆಡ್ ಸ್ಟೇಟ್ಸ್ (ಅಮೇರಿಕಾದ) ನಂತರ, ಯುಎಇ ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವಾಗಿದ್ದು, ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿದೆ.


ಭಾರತ ಮತ್ತು ಯುಎಇಯ ದ್ವಿಪಕ್ಷೀಯ ವ್ಯಾಪಾರವು 2021-22ರಲ್ಲಿ 72.9 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದರೆ, ಭಾರತದ ಆ ವರ್ಷದ ಕೇವಲ ರಫ್ತು 28.4 ಡಾಲರ್ ಶತಕೋಟಿಯಷ್ಟಿದೆ.


ಹೊಸದಾಗಿ ಮುಕ್ತಾಯಗೊಂಡ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ, 2026 ರ ವೇಳೆಗೆ ಒಟ್ಟು ವ್ಯಾಪಾರವು 100 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಗಲ್ಫ್ ಪ್ರದೇಶವು ಆಹಾರ ಮತ್ತು ಏಕದಳ ಆಮದುಗಳ ಮೇಲೆ ಭಾರತಕ್ಕೆ ಅವಲಂಬಿತವಾಗಿದೆ; ಅವರ ಆಹಾರದ 85% ಕ್ಕಿಂತ ಹೆಚ್ಚು ಮತ್ತು ಅವರ 93% ಸಿರಿಧಾನ್ಯಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಕ್ಕಿ, ಎಮ್ಮೆ ಮಾಂಸ, ಮಸಾಲೆಗಳು, ಸಮುದ್ರ ಉತ್ಪನ್ನಗಳು (ಮೀನುಗಳು ಇತ್ಯಾದಿ), ಹಣ್ಣುಗಳು, ತರಕಾರಿಗಳು ಮತ್ತು ಸಕ್ಕರೆ ಭಾರತದಿಂದ ಗಲ್ಫ್‌ ರಾಷ್ಟ್ರಗಳಿಗೆ ರಫ್ತಾಗುತ್ತಿರುವ ಪ್ರಮುಖ ಸಾಮಾಗ್ರಿಗಳು. 


ಗಲ್ಫ್ ರಾಷ್ಟ್ರಗಳ ವಾಯುಯಾನ ಉದ್ಯಮವು ಭಾರತೀಯ ಪ್ರಯಾಣಿಕರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸ್ಥಳೀಯ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್, ಇತಿಹಾದ್ ಏರ್‌ವೇಸ್ ಮತ್ತು ಕತರ್ ಏರ್‌ವೇಸ್‌ ಮೊದಲಾದ ಜಾಗತಿಕ ಸಾರಿಗೆ ಕೇಂದ್ರಗಳ ಆಗಮನವು ಅಮೇರಿಕಾ ಮತ್ತು ಭಾರತ ಮೂಲದ ವಿಮಾನಯಾನ ಸಂಸ್ಥೆಗಳು ಹೊಂದಿರುವ ಮಾರುಕಟ್ಟೆಯ ಪಾಲನ್ನು ಕಡಿಮೆ ಮಾಡಿದೆ.

ಭಾರತಕ್ಕೆ ಬರುವ ದುಡ್ಡಿನ (ರೆಮಿಟೆನ್ಸ್‌) ಅರ್ಧದಷ್ಟು ಹಣವು ಕೇವಲ ಐದು ಗಲ್ಫ್ ದೇಶಗಳಿಂದ ಬರುತ್ತದೆ. ಕೇರಳವು ಹೆಚ್ಚಿನ ಶೇಕಡಾವಾರು ರೆಮಿಟನ್ಸ್‌ ಅನ್ನು ಹೊಂದಿದೆ. ಈಗ ಇದರಲ್ಲಿ ಯುಪಿ ಮತ್ತು ಬಿಹಾರ ಗಣನೀಯ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ವರ್ಷಗಳಲ್ಲಿ ದೆಹಲಿಯ ಪಾಲು ಕೂಡಾ ಹೆಚ್ಚಾಗಿದೆ. 


ಭಾರತವು ತನ್ನ ಶಕ್ತಿಯ ಅಗತ್ಯಗಳನ್ನು ಪೂರೈಸಲು ಮಾತ್ರವಲ್ಲದೆ ಕಾರ್ಯತಂತ್ರ ಮತ್ತು ಭದ್ರತಾ ಕಾರಣಗಳಿಗಾಗಿ ಗಲ್ಫ್ ರಾಷ್ಟ್ರಗಳಿಂದ ಗಮನಾರ್ಹ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ದೇಶವು ದಿನಕ್ಕೆ 5 ಮಿಲಿಯನ್ ಬ್ಯಾರೆಲ್ ತೈಲವನ್ನು ಬಳಸುತ್ತಿದ್ದು, ಅದರಲ್ಲಿ 60 ಪ್ರತಿಶತ ಗಲ್ಫ್‌ನಿಂದ ಬರುತ್ತದೆ ಎಂದು ಭಾರತದ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಮಾರ್ಚ್‌ನಲ್ಲಿ ಸಂಸತ್ತಿಗೆ ತಿಳಿಸಿದ್ದಾರೆ.

ಮೂಲ: ಇಕಾನಮಿಕ್ ಟೈಮ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News