ಯಕ್ಷಗಾನ ಕಲಾರಂಗದಿಂದ ನಿರ್ಮಿಸಿದ 31ನೇ ಮನೆ ಉದ್ಘಾಟನೆ

Update: 2022-06-21 15:24 GMT

ಉಡುಪಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಫಲಾನುಭವಿ ಬಡ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ೩೧ನೇ ಮನೆಯನ್ನು ಹಿರಿಯಡ್ಕ ಸಮೀಪದ ಕೊಂಡಾಡಿಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಉದ್ಘಾಟಿಸಿದರು.

ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯರಾದ ರಕ್ಷಿತಾ ಪೂಜಾರಿ ಹಾಗೂ ಧನ್ಯ ಪೂಜಾರಿ ಇವರಿಗೆ ಪೇಜಾವರ ಮಠ ಮತ್ತು ಗುರುರಾಜ ಅಮೀನ್‌ರ ಪ್ರಾಯೋಜಕತ್ವದಲ್ಲಿ ‘ಶ್ರೀಗುರುಕೃಪಾ’ ಮನೆ  ನಿರ್ಮಾಣ ಗೊಂಡಿತ್ತು.

ಮನೆಯನ್ನು ಜ್ಯೋತಿ ಬೆಳಹಿಸಿ ಉದ್ಘಾಟಿಸಿದ ಶ್ರೀ ವಿಶ್ವಪ್ರಸನ್ನತೀರ್ಥರು ಮಾತನಾಡಿ, ಯಕ್ಷಗಾನ ಕಲಾರಂದ ಸಾಮಾಜಿಕ ಕಾಳಜಿಯನ್ನು ಮೆಚ್ಚಿಕೊಂಡರು. ಪ್ರಜಾರಾಜ್ಯದಲ್ಲಿ ರಾಮರಾಜ್ಯ ನಿರ್ಮಾಣವಾಗಲು ಆರ್ಥಿಕ ವಾಗಿ ಸಬಲರಾದ ಪ್ರತಿಯೊಬ್ಬರೂ ಇಲ್ಲದವರತ್ತ ಕೃಪಾದೃಷ್ಟಿ ಬೀರಬೇಕು. ಒಳ್ಳೆಯ ಕೆಲಸ ಮಾಡಿ ಅದನ್ನು ದೇವರಲ್ಲಿ ನಿವೇದಿಸಿಕೊಂಡರೆ ಅದುವೇ ದೇವರಿಗೆ ಸಮರ್ಪಿಸುವ ಕಾಣಿಕೆ ಎಂದರು.

ಮನೆಯ ಸಹಪ್ರಾಯೋಜಕರಾದ ಗುರುರಾಜ ಅಮೀನ್ ಹಾಗೂ ಜಯಲಕ್ಷ್ಮೀ ಗುರುರಾಜ ಅಮೀನ್ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪದವಿ ಪಡೆದ ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಡಾ. ರಾಜೇಶ್ ನಾವುಡರಿಗೆ ಶ್ರೀಗಳು ಶಾಲು ಹೊದಿಸಿ ಸಮ್ಮಾನಿಸಿದರು.  

ಪೇಜಾವರ ಮಠದ ಸಂಪರ್ಕಾಧಿಕಾರಿ ಸಗ್ರಿ ಸುಬ್ರಹ್ಮಣ್ಯ ಭಟ್, ಉದ್ಯಮಿ ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೋಶಾಧಿಕಾರಿ  ಮನೋಹರ ಕೆ., ಪ್ರೊ.ಕೆ.ಸದಾಶಿವ ರಾವ್, ಹೆಚ್.ಎನ್ ಶೃಂಗೇಶ್ವರ, ಭುವನ ಪ್ರಸಾದ್ ಹೆಗ್ಡೆ, ವಿಜಯ್ ಕುಮಾರ್ ಮುದ್ರಾಡಿ, ಎ. ನಟರಾಜ ಉಪಾಧ್ಯ, ಗಣರಾಜ ಭಟ್, ವಿದ್ಯಾಪ್ರಸಾದ್, ದಿನೇಶ್ ಪೂಜಾರಿ, ಎಚ್.ಎನ್ ವೆಂಕಟೇಶ್, ಕಿಶೋರ್ ಸಿ. ಉದ್ಯಾವರ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. 

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಸಂಸ್ಥೆಯ ವತಿಯಿಂದ ೧೫ ದಿನಗಳಲ್ಲಿ ಇನ್ನೂ ೪ ನಾಲ್ಕು ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News