ಮೂಳೂರು ಅಲ್- ಇಹ್ಸಾನ್ ಮಹಿಳಾ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Update: 2022-06-26 11:39 GMT

ಕಾಪು : ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಣ ಅತೀ ಅಗತ್ಯ. ಸಮಾಜದಲ್ಲಿರುವ ಕಡು ಬಡವರ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆಯಬೇಕೆಂಬುದು ಸಂವಿಧಾನದ ಆಶಯವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದಲ್ಲಿ ಮೂಳೂರಿನಲ್ಲಿ ಕಾರ್ಯಾ ಚರಿಸುತ್ತಿರುವ ಅಲ್- ಇಹ್ಸಾನ್ ಮಹಿಳಾ ಕಾಲೇಜಿನ ನೂತನ ಕಟ್ಟಡವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಡವರಿಗೂ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸುನ್ನೀ ಸೆಂಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಗೆ ಸರಕಾರದ ಅನುದಾನ ಒದಗಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜ ಮುಖ್ಯವಾಹಿನಿಗೆ ಕರೆತರಬೇಕು. ಈ ಮೂಲಕ ಸಮಾಜಕ್ಕೆ, ದೇಶಕ್ಕೆ ಆ ಮಕ್ಕಳು ದೊಡ್ಡ  ಆಸ್ತಿ ಆಗಬೇಕು. ಈ ನಿಟ್ಟಿನಲ್ಲಿ ಪೋಷಕರು ಚಿಂತಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು ೪೮ರಿಂದ ೫೦ ಸಾವಿರ ಶಾಲೆಗಳಿವೆ. ೧.೨೫ ಕೋಟಿ ಮಕ್ಕಳು ದಿನನಿತ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುತಿದ್ದಾರೆ. ಅವರೆಲ್ಲರ ಶಿಕ್ಷಣದ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಎಷ್ಟೇ ಶ್ರಮಪಟ್ಟರೂ ಸರಕಾರದ ಆರ್ಥಿಕ ನೆರವು ಅಗತ್ಯತೆ ಇರುತ್ತದೆ. ಆದರೆ ಸರಕಾರದ ಯಾವುದೇ ನೆರವಿಲ್ಲದೆ ೨೦೦೦ಕ್ಕೂ ಅಧಿಕ ಮಕ್ಕಳಿಗೆ ಅಲ್ ಇಹ್ಸಾನ ಸಂಸ್ಥೆಯ ಮೂಲಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ದೇಶವು ಬಲಿಷ್ಠವಾಗಬೇಕಾದರೆ ಶಿಕ್ಷಣದ ಅಗತ್ಯತೆ ಇದೆ. ಜನಪ್ರತಿನಿಧಿಗಳು, ಅಧಿಕಾರಿ ಗಳಿಂದ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ. ಉತ್ತಮ ಜನಾಂಗವನ್ನು ನಿರ್ಮಾಣ ಮಾಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು. ಭವಿಷ್ಯದಲ್ಲಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಶಿಕ್ಷಣ ಪಡೆದು ಸೇವೆ ಸಲ್ಲಿಸುವವರೇ ನಿಜವಾದ ದೇಶಪ್ರೇಮಿ ಗಳಾಗುತ್ತಾರೆ ಎಂದರು.

ಸಮಸ್ಯೆಯನ್ನು ಸೃಷ್ಟಿಸುವವರ ಬದಲು ಸಮಸ್ಯೆಯನ್ನು ಬಗೆಹರಿಸುವ ವ್ಯಕ್ತಿತ್ವ ರೂಪಿಸಿಕೊಳ್ಳುವವರಾಗಬೇಕು. ತಾಳ್ಮೆ, ಪ್ರೀತಿ, ವಿಶ್ವಾಸ, ಸಹೋದರತ್ವ, ಸಕಾರಾತ್ಮಕ ಚಿಂತನೆ ಮಾಡಬೇಕು. ಹೆಸರು ಮತ್ತು ಗೌರವ ತಂದು ಕೊಡುವವರು ಆಗಬೇಕು. ಸಮಾಜದಲ್ಲಿ ಎಲ್ಲರನ್ನು ಪ್ರೀತಿಸುವ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸರ್ವರಿಗೂ ಗೌರವಕೊಡುವಂತಾಗಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮಾತನಾಡಿ, ಹಿಜಾಬ್ ಬಳಿಕ ಒಂದು ಆತಂಕದ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಅಲ್ ಇಹ್ಸಾನ್ ಮಹಿಳಾ ಕಾಲೇಜು ತೆರೆಯುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದೆ. ರಾಜ್ಯದ ೧೦ ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಸ್ಥಾಪನೆಗೆ ವಕ್ಫ್ ಇಲಾಖೆ ತೀರ್ಮಾನಿಸಿದೆ. ಇದಕ್ಕೆ  ೨೫ ಕೋಟಿ ರೂ. ಅನುದಾನ ಮೀಸಲಿಡ ಲಾಗಿದೆ. ಮಂಗಳೂರು, ಹೈದರಬಾದ್-ಕರ್ನಾಟಕ ಹಾಗೂ ಮುಂಬೈ- ಕರ್ನಾಟಕದಲ್ಲೂ ಮಹಿಳಾ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗುವುದೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ ಅಧ್ಯಕ್ಷ ಅಲ್‌ಹಾಜ್ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಳ್ ಕುಂಬೋಳ್ ವಹಿಸಿ ದುವಾ ನೆರವೇರಿಸಿದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಯುಎಇ ಇಂಟರ್ ಶಿಫಿಂಗ್ ಸರ್ವಿಸ್‌ನ ಆಡಳಿತ ನಿರ್ದೇಶಕ ಅಕ್ರಮ್ ಮಹ್ಮೂದ್ ಶೇಖ್, ಅಲ್‌ ಇಹ್ಸಾನ್ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು, ಅಬ್ದುಲ್ ರಝಾಕ್ ಯುಎಇ, ಅಬೂಸಾಲಿಹ್ ಯುಎಇ, ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಬೆಳಗಾವಿ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಮುಸ್ತಾಕ್ ಫಾರೂಕಿ, ಮುಹಮ್ಮದ್ ಇಜುಜಾದ್ದೀನ್, ಮೀಫ್ ಅಧ್ಯಕ್ಷ ಮೂಸಬ್ಬ, ಸಯ್ಯದ್ ತ್ವಾಹಾ ಬಾಫಕೀ ತಂಙಳ್, ಅಲ್ ಇಹ್ಸಾನ್ ಸಂಸ್ಥೆಯ ಕಾರ್ಯಾಧ್ಯಕ್ಷ ಸಯ್ಯದ್ ಅಹಮದ್,  ಮುಕ್ತಾರ್ ತಂಳ್ ಕುಂಬೋಳ್, ಶರೀಫ್ ಹಾಜಿ ನ್ಯಾಷನಲ್ ಗೋಲ್ಡ್, ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷ ಶಭಿ ಅಹ್ಮದ್ ಕಾಝಿ, ಮೂಳೂರು ಜುಮಾ ಮಸೀದಿ ಅಧ್ಯಕ್ಷ ಮುರಾದ್ ಅಲಿ, ಸೆಂಟ್ರಲ್ ಕಮಿಟಿ ಕಾರ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ಉಚ್ಚಿಲ, ಚಂದ್ರನಗರ ಕ್ರೆಸೆಂಟ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮುಖ್ಯಸ್ಥ ಶಂಶುದ್ದೀನ್, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ವಲವೂರು ಸಅದಿ, ನ್ಯಾಯವಾದಿ ಮುಹಮ್ಮದ್ ಅಲಿ ಕಾಪು, ಮಿಸ್ಬಾಹ್ ಮಹಿಳಾ ಕಾಲೇಜು ಅಧ್ಯಕ್ಷ ಮುಮ್ತಾಝ್ ಆಲಿ, ದ.ಕ. ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಸ್ಥಳದಾನಿ ಮೊಹಿದಿನ್ ಹಾಜಿ ಮೂಳೂರು, ಸುಲ್ತಾನ್ ಗೋಲ್ಡ್‌ನ ಅಬ್ದುಲ್ ರವೂಫ್, ಕುತ್ಯಾರು ನವೀನ್ ಶೆಟ್ಟಿ, ಮುಹಮ್ಮದ್ ಅಲಿ ಕುಂಞಿ ತಂಳ್, ತ್ವಾಹಾ ಬಾಫಕಿ ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಅಲ್‌ಇಹ್ಸಾನ್ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಅಲ್ ಕಾಸಿಮಿ ಅಳಕೆಮಜಲು, ಅಲ್‌ಇಹ್ಸಾನ್ ಹಾಫಿಝ್ ಕುರ್‌ಆನ್ ಪ್ರಾಂಶುಪಾಲ ಹಾಫಿಝ್ ಹಾರಿಸ್ ಸಅದಿ, ಅಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ, ಅಲ್‌ಇಹ್ಸಾನ್ ಸಂಸ್ಥೆಯ ಪ್ರಾಂಶುಪಾಲ ಹಬೀಬ್ ರಹ್ಮಾನ್, ಮಾಜಿ ಶಾಸಕ ಮೊಯ್ದಿನ್‌ ಬಾವಾ ಉಪಸ್ಥಿತರಿದ್ದರು.

ಅಲ್‌ ಇಹ್ಸಾನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಬೊಳ್ಳಾಯಿ ಸ್ವಾಗತಿಸಿದರು. ವೈ.ಬಿ.ಸಿ. ಮೂಳೂರು ವಂದಿಸಿದರು. ರಕೀಬ್ ಕನ್ನಂಗಾರ್ ಹಾಗೂ ಕಲಂದರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News