ಅಧ್ಯಕ್ಷ ಗೊಟಬಯ ಪದಚ್ಯುತಿಗೆ ಆಗ್ರಹಿಸಿ ದೇಶವ್ಯಾಪಿ ರ್ಯಾಲಿ: ಶ್ರೀಲಂಕಾದಲ್ಲಿ ಕರ್ಫ್ಯೂ
ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಪದಚ್ಯುತಿಗೆ ಆಗ್ರಹಿಸಿ ದೇಶವ್ಯಾಪಿ ರ್ಯಾಲಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸೇನೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಮಧ್ಯಾಹ್ನ 3.30ರಿಂದ ಕರ್ಫ್ಯೂ ಜಾರಿಯಾಗಲಿದ್ದು, ನಾಗರಿಕರು ಮನೆಗಳಲ್ಲೇ ಉಳಿಯುವಂತೆ ಪೊಲೀಸ್ ಮುಖ್ಯಸ್ಥ ಚಂದನ ವಿಕ್ರಮರಾಂಟೆ ಸಲಹೆ ಮಾಡಿದ್ದಾರೆ.
ಶನಿವಾರದ ಸರ್ಕಾರಿ ವಿರೋಧಿ ರ್ಯಾಲಿಗಾಗಿ ಶುಕ್ರವಾರವೇ ಸಾವಿರಾರು ಮಂದಿ ಪ್ರತಿಭಟನಾಕಾರರು ರಾಜಧಾನಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ದೇಶದ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಪಕ್ಸ ಅವರ ಪದಚ್ಯುತಿಗೆ ಒತ್ತಡ ಹೆಚ್ಚುತ್ತಿದೆ.
ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ತೀವ್ರ ಅಭಾವ ಪರಿಸ್ಥಿತಿ ತಲೆದೋರಿದ್ದು, ವ್ಯಾಪಕ ಹಣದುಬ್ಬರ ಹಾಗೂ ಬ್ಲಾಕೌಟ್ನಿಂದಾಗಿ ಜನ ಕಂಗೆಟ್ಟಿದ್ದಾರೆ. ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ಹಲವು ತಿಂಗಳುಗಳಿಂದ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.