ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಡಾ. ಕಿಶೋರ್ ಕುಮಾರ್

Update: 2022-08-08 16:04 GMT
ಸಾಂದರ್ಭಿಕ ಚಿತ್ರ

ಮಂಗಳೂರು : ಭವಿಷ್ಯದಲ್ಲಿ ಮಕ್ಕಳು ರೋಗಗಳಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವ ಸಲುವಾಗಿ ಆ.10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಕ್ಕಳ ಸಹಿತ ಎಲ್ಲರಲ್ಲೂ ಜಂತು ಹುಳುವಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಜಂತುಹುಳುಗಳು ಮನುಷ್ಯನ ಕರುಳಿನಿಂದ ಆಹಾರ ಪಡೆದು ಜೀವಿಸುವ ಉಪ ಜೀವಿಗಳು. ಬರಿಗಾಲಲ್ಲಿ ಬಯಲಿನಲ್ಲಿ ತಿರುಗಾಡುವುದು, ಕೈ ತೊಳೆಯದೆ ಆಹಾರ ಸೇವಿಸುವುದು, ಬಯಲು ಮಲ ವಿಸರ್ಜನೆ, ಶೌಚದ ನಂತರ ಕೈ ತೊಳೆಯದಿರುವುದು, ತೊಳೆಯದ ಹಣ್ಣು, ಹಂಪಲು ಸೇವನೆ ಮತ್ತಿತರ ಕಾರಣಗಳಿಂದ ಕ್ರಿಮಿಗಳು ಹೊಟ್ಟೆ ಸೇರಿ ಕರುಳಿನಲ್ಲಿ ಸಂತಾನೋತ್ಪತ್ತಿ ಮಾಡಿ ಜಂತುಹುಳುವಿನ ಸಮಸ್ಯೆ ಎದುರಾಗುತ್ತದೆ. ಇದರಿಂದಾಗಿ ಹೊಟ್ಟೆ ನೋವು, ಭೇದಿ, ಹಸಿವಿಲ್ಲದಿರುವುದು, ಸುಸ್ತಾಗುವಂತಹ ಲಕ್ಷಣಗಳ ಜೊತೆಗೆ ಆಹಾರದ ಪೌಷ್ಟಿಕತೆ ದೇಹವನ್ನು ಸೇರದೆ ರಕ್ತ ಹೀನತೆಯುಂಟಾಗುತ್ತದೆ. ಅಲ್ಲದೆ ಮಕ್ಕಳು ಶಾಲೆಗೆ ಸರಿಯಾಗಿ ಹೋಗಲಾಗದೆ ಶಿಕ್ಷಣ ಕುಂಠಿತವಾಗುವ ಸಂಭವವು ಇರುತ್ತದೆ ಎಂಬ ಮಾಹಿತಿ ನೀಡಿದರು.

ಹಾಗಾಗಿ ಜಂತುಹುಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಆ.10ರಂದು ನಗರದ ಮಣ್ಣಗುಡ್ಡೆಯ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಆಚರಿಸಲಾಗುತ್ತಿದೆ. ಆ ಮೂಲಕ ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ೧ ರಿಂದ ೧೯ ವರ್ಷದ ಸುಮಾರು ಐದು ಲಕ್ಷಕ್ಕೂ ಅಧಿಕ ಮಕ್ಕಳಿಗೆ ೨೦೨೨-೨೩ನೇ ಸಾಲಿನ ಪ್ರಥಮ ಸುತ್ತಿನಲ್ಲಿ ಜಂತುಹುಳ ನಿವಾರಣಾ ಔಷಧಿಯಾದ ವಿಶ್ವ ಸಂಸ್ಥೆ ಪ್ರಮಾಣೀಕರಿಸಿದ ಅಲ್ಬೆಂಡರೆಲ್ ೪೦೦ ಮಿ.ಗ್ರಾಂ. ಮಾತ್ರೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಅಂದು ಮಾತ್ರೆ ಪಡೆಯಲಾಗದ ಮಕ್ಕಳಿಗೆ ಆ.೧೭ರಂದು ವಿತರಿಸಲಾಗುವುದು. ಜೊತೆಗೆ ಶಾಲೆ ಅಥವಾ ಅಂಗನವಾಡಿಗಳಿಂದ ಹೊರಗುಳಿದ ಮಕ್ಕಳಿಗೆ ಆಶಾ/ಕಾರ್ಯಕರ್ತೆ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು ಮನೆಗಳಿಗೆ ಭೇಟಿ ನೀಡಿ ವಿತರಿಸಲಿದ್ದಾರೆ ಎಂದು ಡಾ.ಕಿಶೋರ್ ಕುಮಾರ್ ನುಡಿದರು.

ಇದು ಚೀಪುವ ಮಾತ್ರೆಯಾಗಿದ್ದು, ೧ ರಿಂದ ೨ ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಎದೆಹಾಲಿನಲ್ಲಿ ಬೆರೆಸಿ ನೀಡಬೇಕು. ೨ ರಿಂದ ೧೯ ವರ್ಷದೊಳಗಿನ ಮಕ್ಕಳಿಗೆ ೧ ಮಾತ್ರೆ ನೀಡಲಾಗುತ್ತದೆ. ಪ್ರತೀ ಆರು ತಿಂಗಳಿಗೊಮ್ಮೆ ಈ ಮಾತ್ರೆಗಳನ್ನು ಸೇವಿಸಬಹುದಾಗಿದೆ. ಜಂತುಹುಳ ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪೌಷ್ಟಿಕತೆ ಸುಧಾರಿಸುತ್ತದೆ. ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಬಹುಮುಖ್ಯವಾಗಿ ಜಂತುಹುಳ ಬಾಧೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಡಾ. ರಾಜೇಶ್, ಡಾ. ಸುದರ್ಶನ್, ಡಾ. ಸುಜಯ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ಶುಶ್ರೂಣಾಧಿಕಾರಿ ಲಿಸ್ಸಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News