ಉಡುಪಿ: ಪಿಪಿಸಿಯಲ್ಲಿ ಅಂತರ ಕಾಲೇಜು ಗಣಿತ ಸ್ಪರ್ಧೆ
ಉಡುಪಿ : ನಗರದ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸ್ನಾತಕೋತ್ತರ ವಾಣಿಜ್ಯ ಮತ್ತು ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ವತಿಯಿಂದ ಅಭಿಜ್ಞಾ ಮತ್ತು ಮ್ಯಾಥ್-ಹೆಪ್ಟತ್ಲೋನ್ ಎಂಬ ಅಂತರ ಕಾಲೇಜು ಮಟ್ಟದ ಸ್ಪರ್ಧೆ ನಡೆಯಿತು.
ಸ್ಪರ್ಧೆಯನ್ನು ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಡಾ.ಎ.ಪಿ.ಭಟ್ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಎಚ್.ವಿ. ಸೋಮಯಾಜಿ ಉಪಸ್ಥಿತರಿದ್ದರು.
ಮಂಗಳೂರು ವಿವಿಗೆ ಸೇರಿದ ಒಟ್ಟು ೧೯ ಕಾಲೇಜುಗಳಿಂದ ಸುಮಾರು ೨೦೦ ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಭಿಜ್ಞಾ ವಿಭಾಗದಲ್ಲಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಪ್ರಥಮ ಸ್ಥಾನವನ್ನು ಮತ್ತು ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜು ಕಾರ್ಕಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.
ಮ್ಯಾಥ್-ಹೆಪ್ಟತ್ಲೋನ್ ವಿಭಾಗದಲ್ಲಿ ಸುರತ್ಕಲ್ನ ಗೋವಿಂದದಾಸ ಕಾಲೇಜು ಪ್ರಥಮ ಸ್ಥಾನವನ್ನು ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡವು.