ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್‌

Update: 2022-09-02 15:24 GMT

 ಹೊಸದಿಲ್ಲಿ,ಸೆ.2: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟ್ಲವಾಡ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 2002ರ ಗುಜರಾತ ಗಲಭೆ ಪ್ರಕರಣಗಳಲ್ಲಿ ‘ಅಮಾಯಕ ಜನರನ್ನು ’ಸಿಲುಕಿಸಲು ಸುಳ್ಳು ಸಾಕ್ಷಾಧಾರಗಳನ್ನು ಸೃಷ್ಟಿಸಿದ್ದ ಆರೋಪದಲ್ಲಿ ಸೆಟ್ಲವಾಡ್ ಅವರನ್ನು ಕಳೆದ ಜೂನ್ನಲ್ಲಿ ಬಂಧಿಸಲಾಗಿತ್ತು. ತನ್ನ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಅವರಿಗೆ ಸೂಚಿಸಲಾಗಿದೆ.

 ಮೇಲ್ಮನವಿದಾರರು ಕಳೆದ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಬಂಧನದಲ್ಲಿದ್ದಾರೆ ಮತ್ತು ಅವರ ಪ್ರಧಾನ ಅರ್ಜಿಯು ಉಚ್ಚ ನ್ಯಾಯಾಲಯದ ಪರಿಗಣನೆಗೆ ಬಾಕಿಯಿರುವಾಗ ಈ ಹಂತದಲ್ಲಿ ಅವರು ಮಧ್ಯಂತರ ಜಾಮೀನು ಪಡೆಯಲು ಖಂಡಿತವಾಗಿಯೂ ಅರ್ಹರಾಗಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಸೆಟ್ಲವಾಡ್ ಅವರಿಗೆ ಜಾಮೀನು ಮಂಜೂರು ಮಾಡುತ್ತ ಹೇಳಿತು.

ಗುರುವಾರವೂ ಈ ವಿಷಯವು ವಿಚಾರಣೆಗೆ ಬಂದಿದ್ದು,ಸೆಟ್ಲವಾಡ್ ವಿರುದ್ಧದ ಆರೋಪಗಳು ಸಾಮಾನ್ಯ ಐಪಿಸಿ ಅಪರಾಧಗಳಾಗಿವೆ ಮತ್ತು ಅವು ಜಾಮೀನು ನೀಡಿಕೆಯನ್ನು ನಿಷೇಧಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ವೌಖಿಕವಾಗಿ ಅಭಿಪ್ರಾಯಿಸಿದ್ದರು.

     ಇವು ಕೊಲೆ ಅಥವಾ ದೈಹಿಕ ಗಾಯದಂತಹ ಅಪರಾಧಗಳಲ್ಲ,ಆದರೆ ಫೋರ್ಜರಿ ಇತ್ಯಾದಿಗಳಂತಹ ದಾಖಲೆಗಳನ್ನು ಆಧರಿಸಿವೆ. ಇಂತಹ ಅಪರಾಧಗಳಲ್ಲಿ ಸಾಮಾನ್ಯ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ಪೊಲೀಸರು ಕಸ್ಟಡಿಗಾಗಿ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಸಾಮಾನ್ಯ ಪರಿಕಲ್ಪನೆಯಾಗಿದೆ ಎಂದು ನ್ಯಾ.ಲಲಿತ್ ಹೇಳಿದ್ದರು.

ಜಾಮೀನು ಅರ್ಜಿಗೆ ಉತ್ತರವಾಗಿ ಗುಜರಾತ ಸರಕಾರವು,ಸೆಟ್ಲವಾಡ್ ಅವರು ಹಿರಿಯ ರಾಜಕೀಯ ನಾಯಕರೋರ್ವರ ಆಣತಿಯ ಮೇರೆಗೆ ಇತರ ಆರೋಪಿಗಳೊಂದಿಗೆ ಸೇರಿಕೊಂಡು ಸಂಚನ್ನು ರೂಪಿಸಿದ್ದರು ಎಂದು ತಿಳಿಸಿತು. ಅಹ್ಮದಾಬಾದ್ನಲ್ಲಿಯ ಸೆಷನ್ಸ್ ನ್ಯಾಯಾಲಯವು ಜು.30ರಂದು ಸೆಟ್ಲವಾಡ್ ರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಆ.22ರಂದು ಸರ್ವೋಚ್ಚ ನ್ಯಾಯಾಲಯವು ಸೆಟ್ಲವಾಡ್ರ ಜಾಮೀನು ಅರ್ಜಿಗೆ ಉತ್ತರಿಸುವಂತೆ ಗುಜರಾತ ಸರಕಾರಕ್ಕೆ ನಿರ್ದೇಶ ನೀಡಿತ್ತು.

ವಿಳಂಬಕ್ಕೆ ಸುಪ್ರೀ ಕೋರ್ಟ್ ಅಸಮಾಧಾನ

ಗುರುವಾರದ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಸೆಟ್ಲವಾಡ್ರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಲ್ಲಿ ಗುಜರಾತ ಉಚ್ಚ ನ್ಯಾಯಾಲಯದಿಂದ ವಿಳಂಬದ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿತ್ತು. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆ.3ರಂದು ರಾಜ್ಯ ಸರಕಾರಕ್ಕೆ ನೋಟಿಸ್ ಹೊರಡಿಸಿದ್ದ ಉಚ್ಚ ನ್ಯಾಯಾಲಯವು ವಿಚಾರಣೆಯನ್ನು ಸೆ.19ಕ್ಕೆ ನಿಗದಿಗೊಳಿಸಿತ್ತು.

‘ಇಂತಹ ಪ್ರಕರಣಗಳಲ್ಲಿ ಮಹಿಳಾ ಆರೋಪಿಯೋರ್ವರಿಗೆ ಉಚ್ಚ ನ್ಯಾಯಾಲಯದಿಂದ ಇಂತಹ ದಿನಾಂಕಗಳನ್ನು ನೀಡಲಾಗಿದ್ದ ಉದಾಹರಣೆಗಳನ್ನು ನಮಗೆ ನೀಡಿ. ಈ ಮಹಿಳೆ ಒಂದು ಅಪವಾದವಾಗಿದ್ದಾರೆಯೇ? ನ್ಯಾಯಾಲಯವು ಈ ದಿನಾಂಕವನ್ನು ನೀಡಲು ಹೇಗೆ ಸಾಧ್ಯ? ಇದು ಗುಜರಾತಿನಲ್ಲಿಯ ಸಾಮಾನ್ಯ ಪದ್ಧತಿಯಾಗಿದೆಯೇ? ’ಎಂದು ನ್ಯಾ.ಯು.ಯು.ಲಲಿತ್ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News