ಮೂಡಿಗೆರೆ | ಟ್ರ್ಯಾಕ್ಟರ್ ಗೆ ತಗುಲಿದ ವಿದ್ಯುತ್ ತಂತಿ: ಇಬ್ಬರು ಯುವತಿಯರ ಸಹಿತ ಮೂವರು ಮೃತ್ಯು

Update: 2022-09-07 04:55 GMT

ಚಿಕ್ಕಮಗಳೂರು, ಸೆ.7: ಚೌತಿ ಹಬ್ಬದ ಪ್ರಯುಕ್ತ ಗಣಪತಿ ವಿಸರ್ಜಿಸಿ ಬರುತ್ತಿದ್ದ ಟ್ರ್ಯಾಕ್ಟರ್ ನಲ್ಲಿದ್ದ ಪೆಂಡಾಲ್ (ಅಲಂಕೃತ ಕಮಾನ್)ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ಯುವತಿಯರ ಸಹಿತ ಮೂವರು ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ರಾಜು (47) ರಚನಾ (22) ಮತ್ತು ಪಾರ್ವತಿ (28) ಮೃತಪಟ್ಟವರಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆರು ಮಂದಿಯನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಚಿಂತಾಜನಕ ಸ್ಥಿತಿಯಲ್ಲಿದ್ದ ಸಂಗೀತಾ ಹಾಗೂ ಪಲ್ಲವಿ ಎಂಬವರನ್ನು ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಗಣಪತಿ ವಿಸರ್ಜನೆ ಸಂಭ್ರಮಕ್ಕೆ ಪೆಂಡಾಲ್ ಅಳವಡಿಸಿದ್ದ ಟ್ರ್ಯಾಕ್ಟರ್ ನಲ್ಲಿ ಈ 10 ಮಂದಿ ತೆರಳಿದ್ದರು. ಅಲ್ಲಿಂದ ವಾಪಸ್ ಆಗುತ್ತಿದ್ದ ವೇಳೆ ಬಿ.ಹೊಸಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ನ ಪೆಂಡಾಲ್ ವಿದ್ಯುತ್ ತಂತಿಗೆ ತಗುಲಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ದಿಲ್ಲಿ: 1,200  ಕೋ.ರೂ. ಮೌಲ್ಯದ ಮಾದಕ ವಸ್ತು ವಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News