ಗೋಸಾಕಣೆಯನ್ನು ಬಲಿ ತೆಗೆದುಕೊಂಡು ಚೀತಾಗಳನ್ನು ಸಾಕಲು ಹೊರಟವರು

Update: 2022-09-19 04:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತಲೆತಲಾಂತರಗಳಿಂದ ರೈತರು ಅವಲಂಬಿಸಿದ್ದ ಗೋಸಾಕಣೆಯನ್ನು ತನ್ನ ತಲೆ ಬುಡವಿಲ್ಲದ ನೀತಿ ನಿರ್ಧಾರಗಳಿಂದ ಬಲಿತೆಗೆದುಕೊಳ್ಳುತ್ತಿರುವ ಸರಕಾರ ಇದೀಗ ಭಾರತದಲ್ಲಿ ಚೀತಾ ಸಂತತಿಯ ಪುನರುಜ್ಜೀವನದ ಕುರಿತಂತೆ ಮಾತನಾಡುತ್ತಿದೆ. ಪ್ರಾಜೆಕ್ಟ್ ಚೀತಾ ಅಂಗವಾಗಿ ದೂರದ ಆಫ್ರಿಕಾದಿಂದ ಕೋಟ್ಯಂತರ ವೆಚ್ಚದಲ್ಲಿ ಎಂಟು ಚೀತಾಗಳನ್ನು ತರಿಸಲಾಗಿದ್ದು, ಮೋದಿಯವರು ತಮ್ಮ ಹುಟ್ಟುಹಬ್ಬದ ನಿಮಿತ್ತವಾಗಿ ಮೂರನ್ನು ಮಧ್ಯಪ್ರದೇಶದಲ್ಲಿರುವ ಕುನೋ ಪಾರ್ಕ್‌ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಚೀತಾ ಸಂತತಿಯನ್ನು ಭಾರತದಲ್ಲಿ ಪುನರುಜ್ಜೀವಗೊಳಿಸುವ ಯೋಜನೆ ಇತ್ತೀಚಿನದ್ದಲ್ಲ. ಚೀತಾ ಯೋಜನೆಯ ಪ್ರಸ್ತಾವ ಅನುಮೋದನೆಗೊಂಡಿದ್ದು 2008-09ರಲ್ಲಿ, ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದಾಗ. ಆಗ ದೇಶ ಆರ್ಥಿಕವಾಗಿ ಇಂದಿನ ದೈನೇಸಿ ಸ್ಥಿತಿಯನ್ನು ಹೊಂದಿರಲಿಲ್ಲ. ನೋಟು ನಿಷೇಧ, ಕೊರೋನ, ಲಾಕ್‌ಡೌನ್ ಮೊದಲಾದ ಕಾರಣಗಳಿಂದ ದೇಶ ದಿವಾಳಿಯೆದ್ದಿರುವ ಈ ಸಂದರ್ಭದಲ್ಲಿ ಯುಪಿಎ ಸರಕಾರ ಅನುಮೋದನೆಮಾಡಿದ್ದ ಚೀತಾ ಯೋಜನೆಯನ್ನು ಮಾಧ್ಯಮಗಳ ಮೂಲಕ ಕೇಂದ್ರ ಸರಕಾರ ಒಂದು ಸಾಧನೆಯಾಗಿ ಬಿಂಬಿಸಿಕೊಳ್ಳುತ್ತಿರುವುದು ವಿಷಾದನೀಯವಾಗಿದೆ. ಸದ್ಯದ ಭಾರತದ ಆರ್ಥಿಕ ಸ್ಥಿತಿಗತಿಯ ಮುಂದೆ ಈ 'ಶೋಕಿ'ಯ ಅತಿ ವೈಭವೀಕರಣದ ಅಗತ್ಯವಿತ್ತೆ ಎನ್ನುವ ಪ್ರಶ್ನೆ ಶ್ರೀಸಾಮಾನ್ಯರಲ್ಲಿ ಎದ್ದಿದೆ.

ಗೋಸಾಕಣೆ ಭಾರತದ ಜನಜೀವನದಲ್ಲಿ ಅವಿನಾಭಾವವಾಗಿ ಬೆರೆತುಕೊಂಡಿದೆ. ಇತರ ಕೃಷಿ ಚಟುವಟಿಕೆಗಳಿಗೆ ಹೈನೋದ್ಯಮ ಪೂರಕವಾಗಿ ಬೆಳೆದುಕೊಂಡು ಬಂದಿದೆ. ಗೋಸಾಕಣೆ ಹಾಲು, ಬೆಣ್ಣೆ, ತುಪ್ಪಕ್ಕಷ್ಟೇ ಸೀಮಿತವಾಗಿಲ್ಲ, ಗೋವುಗಳ ಚರ್ಮ, ಎಲುಬು ಮತ್ತು ಮಾಂಸಗಳೂ ಈ ಉದ್ಯಮದೊಂದಿಗೆ ಬೆಸೆದುಕೊಂಡು ಅದನ್ನು ಲಾಭದಾಯಕವಾಗಿಸಿತ್ತು. ರೈತರ ಬಳಿಯಿರುವ ಗೋವುಗಳು ಹಾಲು ಕೊಡಲಿ, ಕೊಡದೇ ಇರಲಿ ಅವರಿಗೆ ಬೇರೆ ಬೇರೆ ರೀತಿಯಲ್ಲಿ ಅದು ಆರ್ಥಿಕ ಲಾಭವನ್ನು ತಂದುಕೊಡುತ್ತಿತ್ತು. ಆದರೆ ಯಾವಾಗ ಜಾನುವಾರು ಮಾರಾಟಕ್ಕೆ ಸರಕಾರ ಕಾನೂನನ್ನು ಜಾರಿಗೊಳಿಸಿತೋ ಅಲ್ಲಿಂದ ಅನುಪಯುಕ್ತ ಗೋವುಗಳನ್ನು ಮಾರಲಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ರೈತರ ಹಟ್ಟಿಗಳು ನಷ್ಟಕ್ಕೀಡಾಗಿವೆ. ನಕಲಿ ಗೋರಕ್ಷಕರು ಗೋಶಾಲೆಗಳ ಹೆಸರಿನಲ್ಲಿ ಸರಕಾರದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ. ಇತ್ತ ರೈತರು ರಸ್ತೆಗೆ ಬಿಟ್ಟ ಬೀಡಾಡಿ ಗೋವುಗಳು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿವೆ. ದೇಶಾದ್ಯಂತ ಗೋವುಗಳಿಗೆ ಎದುರಾಗಿರುವ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಲಕ್ಷಕ್ಕೂ ಅಧಿಕ ಗೋವುಗಳು ಮೃತಪಟ್ಟಿವೆ ಎಂದು ಸರಕಾರ ಹೇಳಿಕೆ ನೀಡಿದೆ. ಒಂದೆಡೆ ಸರಕಾರದ ನೀತಿಯಿಂದ ಹೈನೋದ್ಯಮಕ್ಕಾಗಿರುವ ಹಾನಿ, ಇನ್ನೊಂದೆಡೆ ಬೀದಿಪಾಲಾಗಿರುವ ಅನುಪಯುಕ್ತ ಗೋವುಗಳಿಂದ ಎದುರಾಗಿರುವ ಸಮಸ್ಯೆ, ಸಾಂಕ್ರಾಮಿಕ ರೋಗ ಇವೆಲ್ಲವೂ ದೇಶದ ಗೋಸಾಕಣೆಯನ್ನು ಸಂಪೂರ್ಣ ಬಲಿ ತೆಗೆದುಕೊಳ್ಳುತ್ತಿದೆ.

ಗ್ರಾಮೀಣ ಹೈನೋದ್ಯಮ ನಾಶವಾಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ದೇಶದ ಜನಜೀವನದ ಜೊತೆಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ 'ಚೀತಾ ಯೋಜನೆ'ಯನ್ನು ಸರಕಾರ ವೈಭವೀಕರಿಸುತ್ತಿರುವುದು ಭಾರತೀಯ ರೈತರ ದೈನೇಸಿ ಬದುಕಿನ ಕ್ರೂರ ಅಣಕವಾಗಿದೆ. ಈ ದೇಶದ ಜನಸಾಮಾನ್ಯರ ಸ್ಥಿತಿ ಪಕ್ಕಕ್ಕಿರಲಿ, ಈ ಚೀತಾಗಳು ಪ್ರವೇಶ ಪಡೆದಿರುವ ರಾಷ್ಟ್ರೀಯ ಉದ್ಯಾನವನದ ಆಸುಪಾಸಿನ ನಿವಾಸಿಗಳು ಕೂಡ ಈ ಬಗ್ಗೆ ಸಂತಸಪಟ್ಟು ಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಬದಲಿಗೆ ಅವರು ಆತಂಕದಲ್ಲಿದ್ದಾರೆ. ನಮೀಬಿಯಾದಿಂದ ತರಿಸಲಾದ ಚಿರತೆಗಳು ವಾಸವಾಗಲಿರುವ ಕುನೋ ರಾಷ್ಟ್ರೀಯ ಉದ್ಯಾನವನದ ಆಸುಪಾಸಿನ ಗ್ರಾಮಗಳು ತೀವ್ರವಾದ ಅಪೌಷ್ಟಿಕತೆ ಹಾಗೂ ಬಡತನ ಕಾರಣಗಳಿಗಾಗಿ ಸುದ್ದಿಯಲ್ಲಿವೆ. ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ನಿರುದ್ಯೋಗ ಸಮಸ್ಯೆಯೂ ಗ್ರಾಮಸ್ಥರನ್ನು ಕಾಡುತ್ತಿದೆ. ಇಲ್ಲಿನ ಶಿವಪುರಿ ಹಾಗೂ ಶಿಯೋಪುರ ಪಟ್ಟಣಗಳ ನಡುವೆ ಇರುವ ಕಾಕ್ರಾ ಗ್ರಾಮದಲ್ಲಿ ವ್ಯಾಪಕವಾಗಿರುವ ಬಡತನ, ಅಪೌಷ್ಟಿಕತೆ, ಮೂಲಭೂತ ಸೌಕರ್ಯಗಳ ಕೊರತೆಗಳು ಈತನಕ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಚೀತಾಗಳ ಆಗಮನದಿಂದಾಗಿ ಈ ಪ್ರದೇಶದಲ್ಲಿ ಭಾರೀ ದೊಡ್ಡ ಬದಲಾವಣೆಗಳಾಗಲಿವೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಶಿಯೋಪುರ ಜಿಲ್ಲೆಯಲ್ಲಿ 21 ಸಾವಿರಕ್ಕೂ ಅಧಿಕ ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆಂದು ಮಧ್ಯಪ್ರದೇಶ ಸರಕಾರವು ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.

ಎರಡು ವಾರಗಳ ಹಿಂದೆ, ಇದೇ ಗ್ರಾಮದಲ್ಲಿ ಹೆಣ್ಣು ಮಗುವೊಂದು ಅಪೌಷ್ಟಿಕತೆಯಿಂದ ಸಾವನ್ನಪ್ಪಿತ್ತು. ಸರಕಾರದ ದಾಖಲೆಪತ್ರಗಳಲ್ಲಿ ಈ ಗ್ರಾಮಗಳಲ್ಲಿ ಅಪೌಷ್ಟಿಕತೆಯನ್ನು ನಿರ್ಮೂಲಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆಯಾದರೂ, ಹಸಿವಿನಿಂದ ತತ್ತರಿಸುವ ಮಕ್ಕಳಿಗೆ ಐದು ವರ್ಷವಾಗುತ್ತಿದ್ದಂತೆಯೇ ಅಧಿಕಾರಿಗಳು ಅವರ ಹೆಸರನ್ನು ಅಪೌಷ್ಟಿಕ ಮಕ್ಕಳ ಪಟ್ಟಿಯಿಂದ ತೆಗೆದುಹಾಕುತ್ತಿರುವುದೇ ಈ ಅಭಾಸಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಚೀತಾ ಆಗಮನದ ಹಿನ್ನೆಲೆಯಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನವನ್ನು ವಿಸ್ತರಿಸುವ ಸಾಧ್ಯತೆಯಿರುವುದರಿಂದ ಸರಕಾರ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಆತಂಕವೂ ಗ್ರಾಮಸ್ಥರನ್ನು ಕಾಡುತ್ತದೆ. ಅಲ್ಲದೆ ಚಿರತೆಗಳ ಹಾವಳಿಗೂ ತಾವು ತುತ್ತಾಗಬಹುದೆಂಬ ಭೀತಿ ಅವರಲ್ಲಿ ಮೂಡಿದೆ.ಈ ಹಳ್ಳಿಗಳಲ್ಲಿ ಸಣ್ಣಪುಟ್ಟ ಹೊಟೇಲುಗಳು, ಅಂಗಡಿಗಳನ್ನು ಇಟ್ಟುಕೊಂಡವರಿಗೂ ಈಗ ಅಭದ್ರತೆಯಂಟಾಗಿದೆ. ರಾಷ್ಟ್ರೀಯ ಉದ್ಯಾನವನ ವಿಸ್ತರಣೆಗಾಗಿ ನಾಲ್ಕೈದು ಗ್ರಾಮಗಳನ್ನು ತೆರವುಗೊಳಿಸಿದರೆ ನಮ್ಮ ಜೀವನೋಪಾಯದ ಗತಿ ಏನು ಎಂದವರು ಆತಂಕದಿಂದ ಪ್ರಶ್ನಿಸತೊಡಗಿದ್ದಾರೆ. ಕಳೆದ 15 ವರ್ಷಗಳಿಂದ ಕುನೋ ರಾಷ್ಟ್ರೀಯ ಉದ್ಯಾನವನ ವಿಸ್ತರಣೆಗಾಗಿ ಸುಮಾರು 25 ಗ್ರಾಮಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ಅಣೆಕಟ್ಟು ಯೋಜನೆಗಾಗಿ ಸೆಸಾಯಿಪುರ್‌ನ ನಿವಾಸಿಗಳ ಜಮೀನುಗಳನ್ನು ಸರಕಾರವು ಕಸಿದುಕೊಂಡಿದೆ. ಇದೀಗ ಚಿರತೆಗಳ ಹೆಸರಿನಲ್ಲಿ, ಈ ಗ್ರಾಮದ ಬದುಕನ್ನು ಬಲಿ ಹಾಕಲು ಹಲವು ಹಿತಾಸಕ್ತಿಗಳು ಹೊಂಚು ಹಾಕಿ ಕೂತಿವೆ.

ಸದ್ಯಕ್ಕೆ ಭಾರತ ಸರಕಾರ ಈ ದೇಶದ ಜನರ ಹಸಿವು, ಪೌಷ್ಟಿಕತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಅದಕ್ಕೆ ಪೂರಕವಾಗಿರುವ ಗೋಸಾಕಣೆಗೆ ಉತ್ತೇಜನ ನೀಡಬೇಕಾಗಿದೆ ಮತ್ತು ಗೋಸಾಕಣೆಗೆ ಅಡ್ಡಿಯಾಗುವ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕ ಒಂದೆಡೆ ಗೋಸಾಕಣೆಯಲ್ಲಿ ಜನರು ಹೆಚ್ಚು ಹೆಚ್ಚು ತೊಡಗಿಕೊಂಡು ಗೋವುಗಳ ಸಂಖ್ಯೆಯನ್ನು ಹೆಚ್ಚಿಸುತ್ತಾರೆ. ಜೊತೆ ಜೊತೆಗೆ ಅನುಪಯುಕ್ತ ಗೋವುಗಳು ಚರ್ಮೋದ್ಯಮ, ಆಹಾರ ಇತ್ಯಾದಿಗಳಿಗೆ ಬಳಕೆಯಾಗುವ ಮೂಲಕ ದೇಶದ ಅಪೌಷ್ಟಿಕತೆಯನ್ನು, ಆರ್ಥಿಕ ಹಿಂಜರಿಕೆಯನ್ನು ಹೋಗಲಾಡಿಸಬಹುದು. ಜನಸಾಮಾನ್ಯರ ಬದುಕು ಸರಕಾರದ ಚೀತಾ ಸಾಕುವ ಶೋಕಿಗೆ ಯಾವ ಕಾರಣಕ್ಕೂ ಆಹಾರವಾಗದಿರಲಿ ಎನ್ನುವುದು ದೇಶದ ಪ್ರಜ್ಞಾವಂತರ ಆಶಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News