ಅ. 2ರಂದು ಕುಡ್ಲದ ಪಿಲಿ ಪರ್ಬ

Update: 2022-09-24 13:46 GMT

ಮಂಗಳೂರು, ಸೆ.24: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಸ್ಪರ್ಧಾಕೂಟ ‘ಕುಡ್ಲದ ಪಿಲಿ ಪರ್ಬ 2022’  ಕಾರ್ಯಕ್ರಮ ಅ.2ರಂದು ಮಂಗಳೂರಿನ ನೆಹರೂ ಮೈದಾನಿನಲ್ಲಿ ನಡೆಯಲಿದೆ.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾಹಿತಿ ನೀಡಿ, ಬೆಳಗ್ಗೆ 9 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದ್ದು, ಮಧ್ಯರಾತ್ರಿಯವರೆಗೆ ನಡೆಯಲಿದೆ. ಹುಲಿವೇಷ ತುಳುನಾಡಿನ ಹೆಮ್ಮೆಯ ಪ್ರತೀಕ. ಈ ಸ್ಪರ್ಧೆಗೆ ಭಾಗವಹಿಸಲು ಈಗಾಗಲೇ 15 ತಂಡಗಳು ನೋಂದಣಿಯಾಗಿದೆ. ಸಾಂಪ್ರದಾಯಿಕ ವ್ಯವಸ್ಥೆಯಡಿ ಸ್ಪರ್ಧೆ ನಡೆಯಲಿದ್ದು, ಅದಕ್ಕೆ ತಕ್ಕಂತೆ ಅಂಕಗಳನ್ನು ನಿಗದಿಪಡಿಸಲಾಗಿದೆ. ಒಂದು ತಂಡಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗಿದೆ. ವಿಜೇತರ ತಂಡಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತೇವೆ ಎಂದರು.

ಸುಮಾರು 5,000 ಮಂದಿಗೆ ಕುಳಿತುಕೊಳ್ಳಲು ಅವಕಾಶ ಇರುವ ಗ್ಯಾಲರಿ ನಿರ್ಮಾಣ ಮಾಡಲಾಗುತ್ತದೆ. ವಿನೂತನ ಕಲ್ಪನೆಯ ಎತ್ತರದ ಸ್ಟೇಜ್ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 15,000 ಮಂದಿ ಭಾಗವಹಿಸಲು ನಿರೀಕ್ಷೆ ಇದೆ. ಮೈದಾನಿನಲ್ಲಿ ತಿಂಡಿ-ತಿನಿಸು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು ಇರಲಿದೆ. ಕಾರ್ಯಕ್ರಮಕ್ಕೆ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಮಂತ್ರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಆನಂದ್ ಸಿಂಗ್ ಸೇರಿದಂತೆ ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ಧಾರ್ಮಿಕ ಮುಖಂಡರು, ಸರಕಾರಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಪ್ರಮುಖರಾದ ಗಿರಿಧರ ಶೆಟ್ಟಿ, ಉದಯ ಬಳ್ಳಾಲ್‌ಬಾಗ್, ಚೇತನ್ ಕಾಮತ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News