ಯಾದಗಿರಿ: ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ನೂರಾರು ಜನ

Update: 2022-10-14 17:38 GMT

ಯಾದಗಿರಿ: ಸುರಪುರ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಹಾಗೂ ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ತ್ಯಜಿಸಿ ದಲಿತ ಸಮುದಾಯದ ನೂರಾರು ಮಂದಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ:ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗಳು ರಮಾತಾಯಿ ಅಂಬೇಡ್ಕರ್,  'ಇಂದು ದೇಶದಲ್ಲಿನ ದೀನ ದಲಿತ ಶೋಷಿತರ ಸ್ಥಿತಿ ಚಿಂತಾಜನಕವಾಗಿದೆ.ದೇಶದಲ್ಲಿ ಸತ್ಯವನ್ನು ಮಾತನಾಡಿದರೆ ಅವರನ್ನು ಜೈಲಿಗೆ ಕಳುಹಿಸುವ ಕಾರ್ಯ ನಡೆದಿದೆ.ಒಬ್ಬ ನಿಷ್ಠಾವಂತ ಲೇಖಕನಾಗಿರುವ ನನ್ನ ಪತಿ ಆನಂದ ತೇಲ್ತುಂಬ್ಡೆ ಅವರನ್ನು ಕಳೆದ ಎರಡು ವರ್ಷಗಳಿಂದ ಜೈಲಲ್ಲಿ ಇಡುವ ಮೂಲಕ ಸರಕಾರ ಅಟ್ಟಹಾಸ ಮೆರೆಯುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.

'ಅಂಬೇಡ್ಕರ್ ಅವರ ಅನುಯಾಯಿಗಳಾದ ನೀವುಗಳು ಇಂದು ಬೌಧ್ಧ ಧಮ್ಮವನ್ನು ಸ್ವೀಕರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ' ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹೋರಾಟಗಾರ ಮಾವಳ್ಳಿ ಶಂಕರ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು. 

ಇದಕ್ಕೂ ಮುನ್ನ ರಮಾತಾತಿ ಅಂಬೇಡ್ಕರ್ ಅವರನ್ನು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಗೋಲ್ಡನ್ ಕೇವ್ ಬುದ್ಧ ವಿಹಾರದ ವರೆಗೆ ಬೈಕ್ ರ್ಯಾಲಿ ಮೂಲಕ ಕರೆ ತರಲಾಯಿತು. ನಂತರ ನಡೆದ ದೀಕ್ಷಾ ಕಾರ್ಯಕ್ರಮದಲ್ಲಿ ವರಜ್ಯೋತಿ ಬಂತೇಜಿಯವರ ಸಾನಿಧ್ಯದಲ್ಲಿ ತ್ರಿಸರಣ,ಪಂಚಶೀಲ ಪಠಣ ನಡೆಸಿದರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಕ್ಕು ಸಂಘದ ಬುಕ್ಕುಗಳು ಎಲ್ಲರಿಗೂ ಬೌಧ್ಧ ಧಮ್ಮ ದೀಕ್ಷೆಯನ್ನು ಹಾಗೂ ಭಾರತೀಯ ಬೌಧ್ಧ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕಿ ಧಮ್ಮ ದೀಕ್ಷೆ ಪಡೆಯುವವರಿಗೆ ಡಾ:ಬಿ.ಅಂಬೇಡ್ಕರರು ತಿಳಿಸಿದ 22 ಉಪದೇಶಗಳನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ,ಉದಯಕುಮಾರ ತೆಲ್ಲೂರ್, ಎಣ್ಣೂರ ಶ್ರೀನಿವಾಸ,ಮಲ್ಲಪ್ಪ ಹೊಸಮನಿಕರ್,ಮರೆಪ್ಪ ಹಳ್ಳಿ,ಜಿಲ್ಲಾ ಸಂಘಟನೆಗಳ ಸಂಚಾಲಕರಾದ ಅಶೋಕ ಹೊಸ್ಮನಿ,ಮರೆಪ್ಪ ಚೆಟ್ಟರಕರ್,ಪಿಎಸ್ಐ ಕೃಷ್ಣಾ ಸುಬೇದಾರ,ಅಬಕಾರಿ ಉಪ ನಿರೀಕ್ಷಕಿ ಪೂಜಾ ಖರ್ಗೆ,ತಾ.ಪಂ ವ್ಯವಸ್ಥಾಪಕ ವೆಂಕೋಬ ಬಾಕ್ಲಿ ವೇದಿಕೆ ಮೇಲಿದ್ದರು. ಚಿಂತಕ ಬುದ್ಧಘೋಸ ದೇವೆಂದ್ರ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು,ನಾಗಣ್ಣ ಕಲ್ಲದೇವನಹಳ್ಳಿ ಸ್ವಾಗತಿಸಿದರು,ರಾಜು ಕುಂಬಾರ ನಿರೂಪಿಸಿದರು,ರಾಹುಲ್ ಹುಲಿಮನಿ ವಂದಿಸಿದರು.ವಿವಿಧ ಮುಖಂಡರು ಹಾಗೂ ಸಾವಿರಾರು ಜನ ಬೌದ್ಧ ಅನುಯಾಯಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಯಾದಗಿರಿ | ಬೌದ್ಧ ಧರ್ಮಕ್ಕೆ ಮತಾಂತರಕ್ಕೆ ನಿರ್ಧಾರ: ಹಿಂದೂ ದೇವರ ಚಿತ್ರ ನದಿಯಲ್ಲಿ ವಿಸರ್ಜನೆ

-----------------------------------

''ಇಂದು ನಡೆದ ಬೌದ್ಧ ಧಮ್ಮ ಸ್ವೀಕಾರ ಸಮಾರಂಭದಲ್ಲಿ 127 ಜನ ಅಂಬೇಡ್ಕರ್ ಅನುಯಾಯಿಗಳ ಕುಟುಂಬಸ್ಥರು ಹಿಂದು ಆಚರಣೆಗಳನ್ನು ಕೈಬಿಟ್ಟು ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ಬೌದ್ಧ ಅನುಯಾಯಿಗಳಾಗಿದ್ದಾರೆ''

- ವರಜ್ಯೋತಿ ಬಂತೇಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News