ಯಾದಗಿರಿ | ಬೌದ್ಧ ಧರ್ಮಕ್ಕೆ ಮತಾಂತರಕ್ಕೆ ನಿರ್ಧಾರ: ಹಿಂದೂ ದೇವರ ಚಿತ್ರ ನದಿಯಲ್ಲಿ ವಿಸರ್ಜನೆ
ಯಾದಗಿರಿ: ಹಿಂದೂ ಧರ್ಮ ತ್ಯಜಿಸಿ, ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಮಂದಾಗಿರುವ ಸುರಪುರದ ನಿವಾಸಿಗಳು ಸೋಮವಾರ ಹಿಂದೂ ದೇವರ ಪೊಟೋ ಹಾಗೂ ಮೂರ್ತಿಗಳನ್ನು ಕೃಷ್ಣಾ ನದಿಯಲ್ಲಿ ವಿಸರ್ಜಿಸಿದ್ದಾರೆ.
ಸುರಪುರದ ತಾಲೂಕು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಹೊಸಮನಿ ನೇತೃತ್ವದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಮತಾಂತರದ ನಿರ್ಧಾರ ಕೈಗೊಂಡಿದ್ದು, ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಅಕ್ಟೋಬರ್ 14ರಂದು ನಡೆಯುವ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ಮಾತನಾಡಿದ ಟ್ರಸ್ಟ್ ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ, ''ವೆಂಕಟೇಶ್ ಹೊಸಮನಿಯವರು ಬೌದ್ಧ ಧರ್ಮಕ್ಕೆ ಮತಾಂತರ ಅಗಲಿದ್ದಾರೆ. ಹಾಗಾಗಿ ತಮ್ಮ ಮನೆಯಲ್ಲಿದ್ದ ಎಲ್ಲ ದೇವ- ದೇವತೆಗಳ ಮೂರ್ತಿಯನ್ನು ತಂದು ನಮ್ಮೆಲ್ಲರ ಸಮಕ್ಷಮದಲ್ಲಿ ಕೃಷ್ಣಾ ನದಿಗೆ ಸಮರ್ಪಣೆ ಮಾಡಿದ್ದಾರೆ. ಇನ್ನು ಮುಂದೆ ಹಿಂದೂ ಧರ್ಮ ಮರೆತು, ಬೌದ್ಧ ದರ್ಮಕ್ಕೆ ಕಾಲಿಡುತ್ತಿದ್ದೇವೆ'' ಎಂದು ಹೇಳಿದ್ದಾರೆ.