JDS ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್- ಸಾ.ರಾ.ಮಹೇಶ್ ಭೇಟಿ ವಿಚಾರ: ಕುಮಾರಸ್ವಾಮಿ ಹೇಳಿದ್ದೇನು?

Update: 2022-11-09 10:42 GMT

ಬೆಂಗಳೂರು: ''ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ನಮ್ಮ ಶಾಸಕರು ಭೇಟಿ ಮಾಡಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಸ್ನೆಹಪೂರ್ವಕವಾಗಿ ಭೇಟಿಯಾಗಿದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. 

ಬಸವನಗುಡಿಯಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟನೆ ಮಾಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ''ಇದು ಅವರ ವೈಯುಕ್ತಿಕವಾದ ಭೇಟಿ, ಈ ಮಾತನ್ನು ಅವರೇ ಹೇಳಿದ್ದಾರೆ. ನಾನೇನು ಮಧ್ಯಸ್ಥಿಕೆ‌ ವಹಿಸಿ ಯಾವುದೇ ಸಂದೇಶ ಕಳುಹಿಸಿಲ್ಲ. ಈಗಾಗಲೇ ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ನಾಗರಾಜ್ ಈಗಾಗಲೇ ಪಕ್ಷದ ಕೆಲಸ ಮಾಡುತ್ತಿದ್ದಾರೆ'' ಎಂದು ಹೇಳಿದರು.

''ಸಾ.ರಾ.ಮಹೇಶ್ ಮತ್ತು ಅನ್ನದಾನಿ ಅವರು ಭೇಟಿ ಮಾಡಿರುವ ಬಗ್ಗೆ ಅಪಾರ್ಥ ಬೇಡ. ಅದರ ಬಗ್ಗೆ ಹೆಚ್ಚು ಚರ್ಚೆಯೂ ಅಗತ್ಯ ಇಲ್ಲ'' ಎಂದು ಸ್ಪಷ್ಟಪಡಿಸಿದರು. 

ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ, ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್, ಪಕ್ಷದ ಹಿರಿಯ ಮುಖಂಡ ಬಾಗೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Similar News