ಹೂಡಿಕೆದಾರರ ಸಮಾವೇಶ ಕೇವಲ ರಾಜಕೀಯ ಗಿಮಿಕ್: KPCC ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ

''ವರ್ಗಾವಣೆ ದಂಧೆಯಲ್ಲಿ ಪೊಲೀಸ್ ಠಾಣೆಗಳ ಮೂಲಕ 250 ಕೋಟಿ ರೂ.ವಸೂಲಿ ಮಾಡಿದ್ದಾರೆ''

Update: 2022-11-16 12:35 GMT

ಬೆಂಗಳೂರು, ನ. 16: ‘ಹೂಡಿಕೆದಾರರ ಸಮಾವೇಶದಲ್ಲಿ 9.89 ಲಕ್ಷ ಕೋಟಿ ರೂ.ಘೋಷಣೆಯಾಗಿದ್ದು, ಆಪೈಕಿ 2.83 ಲಕ್ಷ ಕೋಟಿ ರೂ.ಗಳಷ್ಟು ಒಪ್ಪಂದ ಆಗಿದೆ. 7ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ಇದೆಲ್ಲವೂ ರಾಜಕೀಯ ಗಿಮಿಕ್ ಆಗಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹೂಡಿಕೆದಾರರ ಕಾರ್ಯಕ್ರಮ ಪ್ರಚಾರಕ್ಕಾಗಿ ಖರ್ಚು ಮಾಡಿರುವ ಹಣ 300 ಕೋಟಿ., ಭೂ ಬ್ಯಾಂಕ್ ಮೂಲಕ 1.5ಲಕ್ಷ ಎಕರೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಭೂ ಬ್ಯಾಂಕ್ ಎಂದು ಮಾಡಿ ಕೈಗಾರಿಕೆಗೂ ನೀಡಲಿಲ್ಲ, ಎಲ್ಲವೂ ರಿಯಲ್ ಎಸ್ಟೇಟ್ ಪಾಲಾಯಿತು. ದೇವನಹಳ್ಳಿ ಸುತ್ತಮುತ್ತ ಸಾವಿರಾರು ಎಕರೆಯನ್ನು ರೈತರಿಂದ ಕಸಿದು ರಿಯಲ್ ಎಸ್ಟೇಟ್‍ಗೆ ನೀಡಿದ್ದಾರೆ’ ಎಂದು ದೂರಿದರು.

‘ಸಚಿವ ಮುರುಗೇಶ್ ನಿರಾಣಿ ಪುತ್ರ ಈ ಕಾರ್ಯಕ್ರಮದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಆ ಸಮಿತಿಯಲ್ಲಿ ಅವರು ಇದ್ದು, ಕಾರ್ಯಕ್ರಮದ ಆಯೋಜನೆಯಲ್ಲೂ ಅವರ ಪಾತ್ರವಿತ್ತು. ಸಚಿವರ ಪುತ್ರ ಎನ್ನುವುದು ಹೊರತಾಗಿ ಉಳಿದ ಯಾವುದೇ ಅರ್ಹತೆ ಅವರಿಗೆ ಇಲ್ಲವಾಗಿದೆ. ಅವರನ್ನು ಯಾಕೆ ಇದರಲ್ಲಿ ಭಾಗವಹಿಸಲು ಅವಕಾಶ ನೀಡಿ ಅವರ ಮೂಲಕ ಯಾರಿಗೆ ಎಷ್ಟು ಎಕರೆ ಜಮೀನು ಕೊಡಿಸಿದ್ದೀರಿ ಎಂದು ಸರಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಹೂಡಿಕೆದಾರರ ಸಮಾವೇಶಕ್ಕೆ ಬಂದ ಅತಿಥಿಗಳ ವಾಸ್ತವ್ಯಕ್ಕೆ ಸ್ಟಾರ್ ಹೋಟೇಲ್‍ಗಳಿಗಾಗಿ 85 ಕೋಟಿ ರೂ.ಗಳಷ್ಟು ಖರ್ಚು ಮಾಡಿದ್ದಾರೆ. ಪ್ರಧಾನಿ ಅವರು 4 ಗಂಟೆ ಆಗಮಿಸಿದ್ದಕ್ಕೆ ಜಾಹೀರಾತು ಹೊರತುಪಡಿಸಿ 48 ಕೋಟಿ ಖರ್ಚು ಮಾಡಲಾಗಿದೆ. ಇದು ಜನಸಾಮಾನ್ಯರ ಹಣವಾಗಿದೆ. ಯಾರದ್ದೋ ದುಡ್ಡಲ್ಲಿ ಸರಕಾರ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ’ ಎಂದು ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.

ವರ್ಗಾವಣೆ ದಂಧೆ: ‘ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರಿನಲ್ಲಿ 144 ಠಾಣೆಗಳಿವೆ. 44 ಸಂಚಾರ ಪೊಲೀಸ್ ಠಾಣೆ ಸೇರಿ ಒಟ್ಟು 188 ಠಾಣೆಗಳಿವೆ. ಇವುಗಳಿಂದ ಭ್ರಷ್ಟಾಚಾರದ ಮೂಲಕ ಬರುತ್ತಿರುವ ಆದಾಯ ವಾರ್ಷಿಕವಾಗಿ 250 ಕೋಟಿ ರೂ., ಇಂದಿರಾನಗರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆಗೆ 1.50 ಕೋಟಿ ರೂ., ಉಪ್ಪಾರಪೇಟೆ ಠಾಣೆಯಲ್ಲಿ 1.25 ಕೋಟಿ ರೂ., ಕೇವಲ ವರ್ಗಾವಣೆ ದಂಧೆಯಲ್ಲಿ  188 ಪೊಲೀಸ್ ಠಾಣೆಗಳ ಮೂಲಕ 250 ಕೋಟಿ ರೂ.ವಸೂಲಿ ಮಾಡಲಾಗಿದೆ. ಈ ವಿಚಾರ ತನಿಖೆ ಮೂಲಕ ಬಹಿರಂಗವಾಗಬೇಕು’ ಎಂದು ಅವರು ಆಗ್ರಹಿಸಿದರು. 

ಮೈಸೂರಿನಲ್ಲಿ ಕಿಡಿ ಹೊತ್ತಿಸಲು ಪ್ರತಾಪ್ ಸಿಂಹ ಎಂಬ ಸಂಸದರಾಗಿದ್ದಾರೆ. 8 ವರ್ಷಗಳಿಂದ ಕೊಡಗನ್ನು 25 ವರ್ಷ ಹಿಂದಕ್ಕೆ ತೆಗೆದುಕೊಂಡಿದ್ದು, ಮೈಸೂರನ್ನು 10ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉಳಿದ 2 ವರ್ಷಗಳಲ್ಲಿ ಇನ್ನು 10ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇವರ ಯೋಗ್ಯತೆಗೆ ಕೇಂದ್ರದಿಂದ ನಯಾ ಪೈಸೆ ತರಲಿಲ್ಲ. ಆದರೆ, ರಾಜ್ಯದಲ್ಲಿ ಕಿಡಿ ಹೊತ್ತಿಸಲು ನಾಲ್ಕೈದು ಜನರಿದ್ದು ಇವರು ಮೊದಲ ಎರಡು ಸ್ಥಾನಗಳಲ್ಲಿ ಬರುತ್ತಾರೆ’ ಎಂದು ಅವರು ದೂರಿದರು. 

Full View

Similar News