ಮತಾಂತರಕ್ಕೆ ಮುನ್ನ ಜಿಲ್ಲಾಧಿಕಾರಕ್ಕೆ ಮಾಹಿತಿ ನೀಡುವುದು ಸಂವಿಧಾನಬಾಹಿರ: ಮಧ್ಯಪ್ರದೇಶ ಹೈಕೋರ್ಟ್

Update: 2022-11-18 12:31 GMT

ಭೋಪಾಲ: ಮತಾಂತರಗೊಳ್ಳುವ ಮುನ್ನ ವ್ಯಕ್ತಿಯು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದನ್ನು ಅಗತ್ಯವಾಗಿಸಿರುವ ಮತಾಂತರ ನಿಗ್ರಹ ಕಾನೂನಿನಡಿಯ (anti-conversion law) ನಿಬಂಧನೆಯು ಮೇಲ್ನೋಟಕ್ಕೆ ಸಂವಿಧಾನಬಾಹಿರವಾಗಿದೆ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು (MP High Court) ಎತ್ತಿ ಹಿಡಿದಿದೆ. ಈ ನಿಬಂಧನೆಯನ್ನು ಉಲ್ಲಂಘಿಸುವವರ ವಿರುದ್ಧ ರಾಜ್ಯದ ಅಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ನ್ಯಾಯಾಲಯವು ನಿರ್ಬಂಧಿಸಿದೆ.

ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಬದಲಿಸಲು ಬಯಸಿದರೆ ಆತ/ಆಕೆ ಯಾವುದೇ ಬಲವಂತ, ಅನಗತ್ಯ ಪ್ರಭಾವ ಅಥವಾ ಆಮಿಷದಿಂದಾಗಿ ತಾನು ಹಾಗೆ ಮಾಡುತ್ತಿಲ್ಲ ಎಂಬ ಘೋಷಣೆಯನ್ನು 60 ದಿನಗಳಿಗೆ ಮೊದಲು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದನ್ನು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ ಕಾಯ್ದೆ,2011ರ ಕಲಂ 10 ಅಗತ್ಯವಾಗಿಸಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ವ್ಯಕ್ತಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 50,000 ರೂ.ಗಳ ದಂಡವನ್ನು ವಿಧಿಸಬಹುದಾಗಿದೆ.

ಕಳೆದ ವರ್ಷ ಅಧಿಸೂಚಿಸಲಾಗಿರುವ ಕಾಯ್ದೆಯಲ್ಲಿ ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಮತಾಂತರಗೊಳ್ಳುವಂತೆ ಬಲವಂತಗೊಳಿಸಲು ಮದುವೆಯನ್ನು ಸಾಧನವನ್ನಾಗಿ ಬಳಸಿದರೆ ಅಂತಹ ವ್ಯಕ್ತಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲೂ ಕಾಯ್ದೆಯಲ್ಲಿ ಅವಕಾಶವಿದೆ.

ಮತಾಂತರ ನಿಗ್ರಹ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಸುಜಯ ಪಾಲ್ ಮತ್ತು ಪ್ರಕಾಶಚಂದ್ರ ಗುಪ್ತಾ ಅವರ ಪೀಠವು ಬಲವಂತದ ಮತಾಂತರದ ನಂತರವಲ್ಲ,ಆದರೆ ತಮ್ಮ ಆಯ್ಕೆಯ ಮೇರೆಗೆ ಮದುವೆಯಾಗಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರುಗಿಸದಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

ಪ್ರಕರಣದ ವಿಚಾರಣೆಯವರೆಗೆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಂತೆ ಸರಕಾರವನ್ನು ನಿರ್ಬಂಧಿಸುವಂತೆ ಈ ಅರ್ಜಿಗಳು ನ್ಯಾಯಾಲಯವನ್ನು ಆಗ್ರಹಿಸಿದ್ದವು.
ಕಾನೂನು ನಾಗರಿಕರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅನಿಯಂತ್ರಿತ ಅಧಿಕಾರವನ್ನು ನೀಡಿದೆ ಎಂದು ವಾದಿಸಿದ್ದ ಅರ್ಜಿದಾರರು, ಯಾವುದೇ ಧರ್ಮವನ್ನು ಆಚರಿಸುವ ಮತ್ತು ತಮ್ಮ ಸಂಗಾತಿಯ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಮದುವೆಯಾಗುವ ನಾಗರಿಕರ ಮೂಲಭೂತ ಹಕ್ಕುಗಳಿಗೆ ಕಾನೂನು ಅಡ್ಡಿಯನ್ನುಂಟು ಮಾಡುತ್ತದೆ ಎಂದು ಬೆಟ್ಟು ಮಾಡಿದ್ದರು.

ಯಾವುದೇ ನಾಗರಿಕ ತನ್ನ ಧರ್ಮವನ್ನು ಅಥವಾ ಬೇರೊಂದು ಧರ್ಮಕ್ಕೆ ಮತಾಂತರಗೊಳ್ಳುವ ತನ್ನ ಉದ್ದೇಶವನ್ನು ಬಹಿರಂಗಗೊಳಿಸುವ ಬದ್ಧತೆಯನ್ನು ಹೊಂದಿಲ್ಲ ಎಂದೂ ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು. ಇನ್ನೊಂದೆಡೆ, ಉಚ್ಚ ನ್ಯಾಯಾಲಯವು ನೀಡುವ ಯಾವುದೇ ಮಧ್ಯಂತರ ಪರಿಹಾರವು ಈ ವಿಷಯದಲ್ಲಿ ಅಂತಿಮ ತೀರ್ಪಿಗೆ ಸಮವಾಗಬಹುದು ಎಂದು ವಾದಿಸಿದ್ದ ಸರಕಾರವು,ಕಾನೂನಿನ ಸಾಂವಿಧಾನಿಕತೆಯನ್ನು ಎತ್ತಿ ಹಿಡಿಯುವಂತೆ ನ್ಯಾಯಾಲಯವನ್ನು ಆಗ್ರಹಿಸಿತ್ತು.

ಇದನ್ನೂ ಓದಿ: ಭಯೋತ್ಪಾದನೆಯನ್ನು ಎಂದಿಗೂ ಯಾವ ಧರ್ಮ, ಗುಂಪುಗಳಿಗೆ ಜೋಡಿಸಬಾರದು: ಅಮಿತ್‌ ಶಾ

Similar News