ಬೆಂಗಳೂರು: ಜೈಲಿನಿಂದ ಹೊರಬಂದ ವ್ಯಕ್ತಿ ಆತ್ಮಹತ್ಯೆ
Update: 2022-11-21 13:02 GMT
ಬೆಂಗಳೂರು, ನ. 21: ಕೊಲೆಯತ್ನ ಆರೋಪ ಪ್ರಕರಣ ಸಂಬಂಧ ಜೈಲಿಗೆ ಹೋಗಿ ಬಂದ ವ್ಯಕ್ತಿಯೋರ್ವ ಮನೆಯ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ರವಿವಾರ ರಾತ್ರಿ ಆನೇಕಲ್ ವ್ಯಾಪ್ತಿಯ ತಿಗಳರ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.
ಕೆಲ ತಿಂಗಳ ಹಿಂದೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆಯ ಪತಿಯ ಕೊಲೆಗೆ ಯತ್ನಿಸಿದ ಆರೋಪದಡಿ ಮಂಜುನಾಥ್ ಅನ್ನು ಅತ್ತಿಬೆಲೆ ಠಾಣಾ ಪೊಲೀಸರು ಬಂಧಿಸಿದ್ದರು. ಆನಂತರ, ಮಂಜುನಾಥ್ ಜೈಲಿಗೆ ಹೋಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಆದರೆ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಂಜು ರವಿವಾರ ರಾತ್ರಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.