‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ತಮಿಳು ಬರಹಗಾರ ಇಮಯಮ್ ಆಯ್ಕೆ

Update: 2022-11-24 14:28 GMT

ಬೆಂಗಳೂರು, ನ. 24: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವತಿಯಿಂದ ನೀಡುವ ಪ್ರಸಕ್ತ ವರ್ಷದ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ತಮಿಳು ಭಾಷೆಯ ಪ್ರಸಿದ್ಧ ಬರಹಗಾರ ಇಮಯಮ್ ಆಯ್ಕೆ ಆಗಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಹೇಳಿದರು. 

ಗುರುವಾರ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.19ರಂದು ಪ್ರತಿಷ್ಠಾನದ ಹಂಗಾಮಿ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅಧ್ಯಕ್ಷತೆಯಲ್ಲಿ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿದ್ದು, ಸಭೆಯಲ್ಲಿ ಪುರಸ್ಕಾರಕ್ಕೆ ಇಮಯಮ್ ಎಂದೇ ಖ್ಯಾತಿಯಾದ ವಿ.ಅಣ್ಣಾಮಲೈ ಅವರನ್ನು ಆಯ್ಕೆ ಮಾಡಲಾಗಿದೆ. ಈವರೆಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ತಮಿಳು ಭಾಷೆಗೆ ನೀಡಿರಲಿಲ್ಲ. ಹಾಗಾಗಿ ಈ ವರ್ಷದ ಗೌರವವನ್ನು ತಮಿಳು ಭಾಷೆಯ ಸಾಧಕನಿಗೆ ನೀಡಲಾಗುತ್ತಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಡಿ.29ರಂದು ಕುಪ್ಪಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪುರಸ್ಕೃತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

Similar News