ಮಂಗಳೂರು | ಕಾಲೇಜು ವಿದ್ಯಾರ್ಥಿಗೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2022-11-27 07:51 GMT

ಮಂಗಳೂರು, ನ.27: ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಮುತ್ತು(18), ಪ್ರಕಾಶ್‌(21) ಮತ್ತು ರಾಕೇಶ್‌(23) ಎಂಬವರು ಬಂಧಿತ (Arrest) ಆರೋಪಿಗಳಾಗಿದ್ದಾರೆ.

ಕಾರ್ಕಳದ ಖಾಸಗಿ ಕಾಲೇಜು ವಿದ್ಯಾರ್ಥಿ ಸೈಯದ್ ರಶೀಮ್ ಉಮರ್(20) ಎಂಬವರ ಮೇಲೆ ನ.24ರಂದು ಬಸ್ಸಿನಲ್ಲಿ ಹಲ್ಲೆ ನಡೆದಿತ್ತು. ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸೈಯದ್ ರಶೀಮ್ ಉಮರ್‌ಗೆ ಅಂದು ಸಂಜೆ ನಗರದ ನಂತೂರು ಜಂಕ್ಷನ್ ಬಳಿ ತಂಡವೊಂದು ಹಲ್ಲೆ ನಡೆಸಿತ್ತು. ಬಸ್ಸಿನೊಳಗೆ ನುಗ್ಗಿದ ತಂಡ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ನಡೆಸಿರುವುದಾಗಿ ರಶೀಮ್ ಉಮರ್ ಕದ್ರಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.

 ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಯೊಡ್ಡಿದೆ ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ಆರೋಪಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Similar News