BBMP ಚುನಾವಣೆ: ಮೀಸಲಾತಿ ನಿಗದಿಪಡಿಸಲು ಮತ್ತೆ 3 ತಿಂಗಳ ಕಾಲಾವಕಾಶ ಕೋರಿದ ಸರ್ಕಾರ

Update: 2022-11-30 17:06 GMT

ಬೆಂಗಳೂರು, ನ.30: ಬಿಬಿಎಂಪಿ ಚುನಾವಣೆಗೆ ಮತ್ತೆ ಮೂರು ತಿಂಗಳ ಕಾಲ ಕಾಲಾವಾಕಾಶ ನೀಡುವಂತೆ ಸರಕಾರವು ಹೈಕೋರ್ಟ್‍ಗೆ ಮನವಿ ಮಾಡಿದೆ. 

ಬಿಬಿಎಂಪಿ ಚುನಾವಣೆಗೆ ಸರಕಾರ ಹೊರಡಿಸಿದ್ದ ಮೀಸಲು ಅಧಿಸೂಚನೆ ಪ್ರಶ್ನಿಸಿ ವಿ.ಶ್ರೀನಿವಾಸ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿದೆ. 

ಈ ವೇಳೆ ಸರಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹಾಜರಾಗಿ, ನಿವೃತ್ತ ನ್ಯಾ. ಭಕ್ತವವತ್ಸಲ ಸಮಿತಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು ಮತ್ತು ರಾಜಕೀಯ ಹಿಂದುಳಿದಿರುವಿಕೆ ಕುರಿತಂತೆ ಮಾಹಿತಿ ಕೇಳಲಾಗಿದೆ. ಈ ಸಂಬಂಧ ಮಾಹಿತಿ ನೀಡಲು ಸಮಿತಿಯು ಸಮಯ ಕೇಳಿದೆ. 

ಈ ನಿಟ್ಟಿನಲ್ಲಿ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಲಾಗಿದೆ. ಈ ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು. ಬಿಬಿಎಂಪಿ ಚುನಾವಣೆಗೆ ಆ.3ರಂದು ಹೊರಡಿಸಿದ್ದ ಮೀಸಲಾತಿ ಪಟ್ಟಿಯನ್ನು ಸೆಪ್ಟಂಬರ್ ನಲ್ಲಿ ರದ್ದುಪಡಿಸಿದ್ದ ಹೈಕೋರ್ಟ್, ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು. ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು. 

Similar News