16ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ

ಎಫ್‍ಆರ್ ಪಿ ದರಕ್ಕೆ ಹೆಚ್ಚುವರಿ 150 ರೂ.ಕೊಡಿಸುವಂತೆ ಕಬ್ಬು ಬೆಳೆಗಾರರ ಆಗ್ರಹ

Update: 2022-12-07 15:50 GMT

ಬೆಂಗಳೂರು, ಡಿ.7: ಕೇಂದ್ರ ಸರಕಾರ ನಿಗದಿ ಮಾಡಿರುವ ಪ್ರಸಕ್ತ ಸಾಲಿನ ಎಫ್‍ಆರ್‍ಪಿ ದರ ಟನ್ ಗೆ 3050 ರೂ.ಗಳಂತೆ ಕಳೆದ ವರ್ಷಕ್ಕಿಂತ 150 ರೂ.ಏರಿಕೆಯಾಗಿರುವ ಈ ಹಣ ಎಲ್ಲ ಕಾರ್ಖಾನೆಗಳಿಂದ ಹೆಚ್ಚುವರಿಗಾಗಿ ಕಬ್ಬು ಬೆಳೆಗಾರರಿಗೆ ಕೊಡಿಸಲಿ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ ಟನ್‍ಗೆ 2824 ರೂ.ನೀಡುತ್ತಿತ್ತು, ಈ ವರ್ಷ ಕೇಂದ್ರ ಸರಕಾರ ಹೆಚ್ಚುವರಿ ಎಫ್‍ಆರ್‍ಪಿ ನಿಗದಿ ಮಾಡಿರುವ 150 ರೂ.ಸೇರಿಸಿ, 2974 ರೂ. ರೈತರಿಗೆ ಕೊಡಿಸಲಿ. ಹಳಿಯಾಳದಲ್ಲಿ ಇಐಡಿ ಪ್ಯಾರಿ ಕಾರ್ಖಾನೆ ಕಳೆದ ವರ್ಷ 2590 ರೂ.ನೀಡುತ್ತಿತ್ತು ಈ ವರ್ಷ ಎಫ್‍ಆರ್‍ಪಿ ಹೆಚ್ಚುವರಿ 150 ರೂ.ಸೇರಿಸಿ 2740ರೂ. ರೈತರಿಗೆ ಕೊಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಆದರೆ, ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಣ ಕೊಡುತ್ತಿರುವುದು ಯಾಕೆ ಎಂದು ತಿಳಿಸಲಿ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಟನ್‍ಗೆ 200 ರಿಂದ 300 ರೂ.ರೈತರ  ಹಣದಲ್ಲಿ ಮುರಿದು ಕೊಳ್ಳುತ್ತಿದ್ದಾರೆ, ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಂಡು ಬಾಕಿ ಸರಕಾರ ನಿಗದಿಪಡಿಸಿರುವ ಹಣ ರೈತರಿಗೆ ಕೂಡಿಸಲಿ ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ನಿಗದಿ ಮಾಡುವ ಎಫ್‍ಆರ್‍ಪಿ ದರ ಪ್ರತಿ ಶೇಕಡ ಒಂದು ಇಳುವರಿಗೆ 300 ರೂ., ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ ಸಕ್ಕರೆ ಕಾರ್ಖಾನೆ ಮಾಲಕರೆ ವರದಿ ಕೊಡುವ ಕಾರಣ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ವಂಚಿಸಲಾಗುತ್ತಿದೆ. ಇದು ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ ಇದನ್ನು ತಪ್ಪಿಸಲಿ ಎಂದು ಅವರು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ಸಕ್ಕರೆ ತೂಕ ಮಾಡಲು ಒಂದು ತೂಕದ ಯಂತ್ರ, ರೈತರ ಕಬ್ಬು ತೂಕ ಮಾಡಲು ಮತ್ತೊಂದು ತೂಕ ಯಂತ್ರ ಯಾಕೆ ಇಟ್ಟುಕೊಂಡಿದ್ದಾರೆ, ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಲಿ. ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭಾಂಶ ಕೆಲವೇ ಕಾರ್ಖಾನೆಗಳು ರೈತರಿಗೆ ಹಂಚಿಕೆ ಮಾಡುತ್ತಿವೆ, ಎಫ್‍ಆರ್‍ಪಿ ಗಿಂತ ಹೆಚ್ಚುವರಿ ಹಣ ನೀಡುತ್ತಿದ್ದಾರೆ, ಬೇರೆ ಕಾರ್ಖಾನೆಗಳಿಗೆ ಯಾಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಎಥನಾಲ್ ಲಾಭಾಂಶದಲ್ಲಿ ಹೆಚ್ಚುವರಿ 50 ರೂ.ಕೊಡುತ್ತೇವೆ ಎಂದರೆ ರೈತರಿಗೆ ಕೊಡುವುದು ಭಿಕ್ಷೆಯಲ್ಲ, ಸರಿಯಾದ ಮಾರ್ಗದಲ್ಲಿ ಕ್ರಮ ಕೈಗೊಂಡು ನ್ಯಾಯ ಕೊಡಲಿ. ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ ಹಿಂದಿನ ವರ್ಷದ ಇಳುವರಿ ಆದರಿಸಿ ಪ್ರಸಕ್ತ ಸಾಲಿನ ಕಬ್ಬು ಸರಬರಾಜು ಮಾಡಿದ ರೈತರಿಗೆ ಎಫ್‍ಆರ್‍ಪಿ ದರ ಲೆಕ್ಕಾಚಾರ ಮಾಡಿ ಪಾವತಿಸುವುದು ನ್ಯಾಯವೇ, ಆಯಾ ವರ್ಷ ಕಬ್ಬು ಸರಬರಾಜು ಮಾಡಿದ ರೈತರಿಗೆ ಆಯಾ ರೈತರಿಂದ ಬರುವ ಸಕ್ಕರೆ ಇಳುವರಿ ಆದಾರದಂತೆ ದರ ನೀಡುವುದು ಎಲ್ಲರಿಗೂ ಒಳ್ಳೆಯದಲ್ಲವೆ ಈ ಬಗ್ಗೆ ಸರಕಾರ ಯಾಕೆ ಚಿಂತಿಸುತ್ತಿಲ್ಲ ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದ್ದಾರೆ.

ವೈಜ್ಞಾನಿಕ ಪದ್ಧತಿಯಲ್ಲಿ ನೀರು ಕಡಿಮೆ ಮಾಡಿ, ಒಂಟಿ ಕಣ್ಣು ನಾಟಿ ಪದ್ಧತಿಯಲ್ಲಿ ಕಬ್ಬು ಬೆಳೆಯುವ ರೈತರಿಗೆ ಸರಕಾರದ ಎನ್‍ಆರ್‍ಇಜಿ ಯೋಜನೆ ಸಹಾಯಧನ ಸವಲತ್ತು ಲಿಂಕ್ ಮಾಡಿದರೆ ರೈತರಿಗೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದಿಲ್ಲವೆ? ಸರಕಾರ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಲಿ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Similar News