ಆರ್‌ಟಿಐ ಅರ್ಜಿಗಳ ಸ್ಥಿತಿಗತಿಯನ್ನು ಎಸ್‌ಎಂಎಸ್‌, ಕರೆ ಹಾಗೂ ವಾಟ್ಸಪ್‌ ಮೂಲಕ ಪಡೆಯುವಂತಿಲ್ಲ: ಅರ್ಜಿದಾರರಿಗೆ ನಿರ್ಬಂಧ

Update: 2023-01-12 13:26 GMT

ಹೊಸ ದಿಲ್ಲಿ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರು, ತಮ್ಮ ಅರ್ಜಿಯ ಸ್ಥಿತಿಗತಿಯ ವಿವರವನ್ನು ಎಸ್‌ಎಂಎಸ್, ಫೋನ್ ಕರೆ ಹಾಗೂ ವಾಟ್ಸ್ ಆ್ಯಪ್ ಮೂಲಕ ಪಡೆಯುವುದರಿಂದ ದೂರ ಉಳಿಯಬೇಕು ಎಂದು ಹರ್ಯಾಣ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ ಮಾಹಿತಿ ಆಯುಕ್ತ ವಿಜಯ್ ವರ್ಧನ್ ಸಲಹೆ ನೀಡಿದ್ದಾರೆ ಎಂದು the wire.in ವರದಿ ಮಾಡಿದೆ.

ಡಿಸೆಂಬರ್ 12, 2022ರಂದು ಹೊರಡಿಸಲಾಗಿರುವ ಆದೇಶದಲ್ಲಿ, ರಾಜ್ಯ ಮಾಹಿತಿ ಆಯುಕ್ತರ ಆಪ್ತ ಸಿಬ್ಬಂದಿಗಳಿಗೆ ಈ ಬಗೆಯ ಕರೆ ಮಾಡುವುದನ್ನು "ಆಯೋಗದ ಕೆಲಸಗಳಲ್ಲಿನ ಹಸ್ತಕ್ಷೇಪ' ಎಂದು ಪರಿಗಣಿಸಲಾಗುವುದು ಎಂದೂ ಎಚ್ಚರಿಸಲಾಗಿದೆ. ಈ ನಡೆಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಪಡೆಯಲು ಬಯಸುವ ಅರ್ಜಿದಾರರನ್ನು ಅಧೀರಗೊಳಿಸುವ ಮತ್ತೊಂದು ಹೆಜ್ಜೆ ಎಂದು ಗುರುತಿಸಲಾಗಿದೆ.

ಮುಖ್ಯ ಮಾಹಿತಿ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ, "ಬಾಕಿಯಿರುವ ತಮ್ಮ ಅರ್ಜಿಗಳ ಕುರಿತ ಮಾಹಿತಿಯನ್ನು ರಹಸ್ಯವಾಗಿ ಹಂಚಿಕೊಳ್ಳುವಂತೆ ಮಾಹಿತಿ ಆಯುಕ್ತರ ಆಪ್ತ ಸಿಬ್ಬಂದಿಗಳಿಗೆ ಅರ್ಜಿದಾರರು ಅಥವಾ ಮೇಲ್ಮನವಿದಾರರು ಕರೆ ಮಾಡದಂತೆ ಈ ಮೂಲಕ ಸಲಹೆ ನೀಡಲಾಗಿದ್ದು, ಅಂತಹ ಕರೆಗಳನ್ನು ಆಯೋಗದ ಕೆಲಸಗಳಲ್ಲಿನ ಹಸ್ತಕ್ಷೇಪ ಎಂದು ಪರಿಗಣಿಸಲಾಗುವುದು" ಎಂದು ಹೇಳಲಾಗಿದೆ.

ಮುಂದುವರಿದು, "ಮೇಲ್ಮನವಿದಾರರು/ಅರ್ಜಿದಾರರು ತಮ್ಮ ಮೇಲ್ಮನವಿ ಅಥವಾ ದೂರನ್ನು ಆಯುಕ್ತರ ಮೊಬೈಲ್ ಫೋನ್‌ಗಳಿಗೆ ಕಳಿಸಬಾರದು ಎಂದೂ ಸಲಹೆ ನೀಡಲಾಗಿದ್ದು, ಅಂತಹುದನ್ನು ಆಯೋಗಕ್ಕೆ ನೀಡುವ ಕಿರುಕುಳ, ಪೀಡನೆ ಮತ್ತು ಒತ್ತಡ ಎಂದು ಪರಿಗಣಿಸಲಾಗುವುದು" ಎಂದೂ ತಿಳಿಸಲಾಗಿದೆ. ಹೀಗಿದ್ದೂ, ಅವರು ಆಯೋಗವನ್ನು ಇಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಮುಖ್ಯ ಮಾಹಿತಿ ಆಯುಕ್ತರು ಸಲಹೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಹಿತಿ ಹಕ್ಕು ಕಾರ್ಯಕರ್ತರು, ಗ್ರಾಮೀಣ ಭಾಗದ ಅರ್ಜಿದಾರರು ತಮ್ಮ ಅರ್ಜಿಗಳ ಸ್ಥಿತಿಗತಿಯನ್ನು ವಿಚಾರಿಸಲು ಇಮೇಲ್ ಕಳಿಸುವುದಕ್ಕಿಂತ ಫೋನ್ ಕರೆ ಮಾಡುವುದೇ ಸುಲಭ ಮಾರ್ಗ ಎನ್ನುತ್ತಾರೆ. ಹರ್ಯಾಣ ಸೂಚ್ನಾ ಅಧಿಕಾರ್ ಮಂಚ್‌ನ ರಾಜ್ಯ ಸಮನ್ವಯಕಾರ ಸುಭಾಷ್ ಸೇರಿದಂತೆ ಕೆಲವರು, ರಾಜ್ಯ ಮಾಹಿತಿ ಹಕ್ಕು ಆಯೋಗವು ಸಹಾಯ ವಾಣಿ ಪ್ರಾರಂಭಿಸುವುದು ಸೂಕ್ತ ಎಂದು ಅಭಿಪ್ರಾಯ ಪಡುತ್ತಾರೆ.

ಮಾಹಿತಿ ಹಕ್ಕು ಆಯೋಗದ ಕಾರ್ಯವೈಖರಿ ಕುರಿತ ಸತ್ರಾಕ್ ನಾಗರಿಕ್ ಸಂಘಟನ್ ವರದಿಯ ಪ್ರಕಾರ, ಜುಲೈ 1, 2021ರಿಂದ ಜೂನ್ 30, 2022ರ ನಡುವೆ ಹರ್ಯಾಣ ರಾಜ್ಯ ಮಾಹಿತಿ ಆಯೋಗದಲ್ಲಿ 7,632 ಮೇಲ್ಮನವಿ ಮತ್ತು ದೂರುಗಳು ದಾಖಲಾಗಿದ್ದು, 8,044 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹಾಗೆಯೇ ರಾಜ್ಯ ಮಾಹಿತಿ ಆಯೋಗದ ಬಳಿ ಜೂನ್ 30, 2021ರಿಂದ ಜೂನ್ 30, 2022ರವರೆಗೆ ಒಟ್ಟು 4,073 ಮೇಲ್ಮನವಿ ಮತ್ತು ದೂರುಗಳ ವಿಲೇವಾರಿ ಬಾಕಿ ಉಳಿದಿದೆ. ಹರ್ಯಾಣದಲ್ಲಿ ಒಂದು ಅರ್ಜಿ ವಿಲೇವಾರಿಯಾಗಲು ಸರಾಸರಿ ಐದು ತಿಂಗಳು ತಗಲುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಕೆಲವು ಪರಿಸ್ಥಿತಿಗಳಲ್ಲಿ, ವಿಶೇಷವಾಗಿ ಸರಾಸರಿ ಅವಧಿಗಿಂತ ಹೆಚ್ಚು ಕಾಲ ಕಾಯುವಂತಾದಾಗ, ಅರ್ಜಿದಾರರು ತಮ್ಮ ಅರ್ಜಿ ವಿಲೇವಾರಿಯಲ್ಲಿನ ವಿಳಂಬದ ಕುರಿತು ತಿಳಿದುಕೊಳ್ಳಲು ಬಯಸುವುದು ಸಹಜ ಸಂಗತಿಯೇ ಆಗಿದೆ.

Similar News