ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ವಿಶ್ವಾಸ ಪುನಃ ಸ್ಥಾಪಿಸಬೇಕು: ಪ್ರಧಾನಿ ಮೋದಿ

Update: 2023-02-24 16:49 GMT

ಬೆಂಗಳೂರು, ಫೆ. 24: ‘ಹಲವು ದೇಶಗಳು ಇಂದಿಗೂ ಹಣಕಾಸು ವ್ಯವಸ್ಥೆಯಲ್ಲಿನ ಅಸ್ಥಿರತೆಯಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿವೆ. ಇದರಿಂದಾಗಿ, ಅಂತರ್‍ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ವಿಶ್ವಾಸ ಕುಸಿಯುತ್ತಿದ್ದು, ಸ್ಥಿರತೆ ಮತ್ತು ಭರವಸೆ ಪುನಃ ಸ್ಥಾಪಿಸುವಲ್ಲಿ ಕೇಂದ್ರ ಬ್ಯಾಂಕ್‍ಗಳ ಮುಖ್ಯಸ್ಥರ ಪಾತ್ರ ಪ್ರಮುಖವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶುಕ್ರವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಹಣಕಾಸು ಮಂತ್ರಿಗಳು ಹಾಗೂ ಕೇಂದ್ರೀಯ ಬ್ಯಾಂಕುಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ವಿಡಿಯೋ ಸಂದೇಶ ನೀಡಿರುವ ಅವರು, ಜಗತ್ತು ಭಾರತದ ಆರ್ಥಿಕತೆಯಿಂದ ಸ್ಫೂರ್ತಿ ಪಡೆಯಬೇಕಾಗಿದೆ. ಭಾರತದ ಉತ್ಪಾದಕರು ಮತ್ತು ಗ್ರಾಹಕರು ಆಶಾವಾದಿಗಳಾಗಿದ್ದು, ಜಾಗತಿಕ ಆರ್ಥಿಕತೆಗೆ ಧನಾತ್ಮಕ ಸ್ಫೂರ್ತಿಯಾಗಬಲ್ಲರು ಎಂದರು.

ಜಾಗತಿಕ ಆರ್ಥಿಕ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಪುನಃಸ್ಥಾಪಿಸಲು ಈ ಸಭೆಯಲ್ಲಿ ವಿಶ್ವದ ಪ್ರಮುಖ ಆರ್ಥಿಕ ಮತ್ತು ಹಣಕಾಸು ತಜ್ಞರು ಅಮೂಲ್ಯ ಸಲಹೆಗಳನ್ನು ನೀಡಬೇಕು. ಕೊರೋನ ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಆರ್ಥಿಕ ಬಿಕ್ಕಟ್ಟು ಎದುರಿಸಿದಾಗ ಕೇಂದ್ರ ಬ್ಯಾಂಕ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕೋವಿಡ್ ಸಾಂಕ್ರಮಿಕದಿಂದ ಎದುರಾದಂತಹ ಸಮಸ್ಯೆಯ ಪರಿಣಾಮಗಳನ್ನು ಇಂದಿಗೂ ಅನುಭವಿಸುತ್ತಿವೆ. ಭೌಗೋಳಿಕ ರಾಜಕೀಯ ಒತ್ತಡ ಹೆಚ್ಚಿದೆ, ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಏರುಪೇರಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಇಂಧನ ಭದ್ರತೆಯ ಕೊರತೆ ಎದುರಾಗಿದೆ. ಈ ಸಮಸ್ಯೆಗಳ ಬಗ್ಗೆ ಜಾಗತಿಕ ವಲಯ ಕಾಳಜಿ ವ್ಯಕ್ತಪಡಿಸುತ್ತಿದೆ ಎಂದು ಅವರು ಹೇಳಿದರು.

ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆಗೆ ಒತ್ತು ನೀಡುವ ಮೂಲಕ ಜಾಗತಿಕ ಆರ್ಥಿಕತೆಯ ಮೇಲೆ ಜನರ ವಿಶ್ವಾಸವನ್ನು ಪುನಃ ಸ್ಥಾಪಿಸಬಹುದಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಸಭೆಗಳ ಆಶಯವು ಇದೇ ಆಗಿದ್ದು, ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ ಎನ್ನುವ ಘೋಷವಾಕ್ಯದ ಮೇಲೆ ರೂಪುಗೊಂಡಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಮಾಡುವ ಮೂಲಕ ಪರಿವರ್ತನೆ ತರಲಾಗಿದೆ. ಇತ್ತೀಚೆಗೆ ಡಿಜಿಟಲ್ ವಲಯ ಅಸ್ಥಿರತೆ ಮತ್ತು ದುರುಪಯೋಗವಾಗುತ್ತಿರುವ ಅಪಾಯ ಎದುರಾಗಿದ್ದು, ಇದನ್ನು ತಂತ್ರಜ್ಞಾನದ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸಬೇಕಾಗಿದೆ. ಭಾರತ ಸುಭದ್ರ ಹಾಗೂ ಸುರಕ್ಷಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಸರ್ವರನ್ನೂ ಹಣಕಾಸು ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ‘ಜಿ-20 ರಾಷ್ಟ್ರಗಳ ವೇದಿಕೆಯು ಜಾಗತಿಕವಾದ ಹಲವಾರು ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಆದ್ಯತೆ ನೀಡಲಿದೆ. ಇದಕ್ಕೆ ಪೂರಕವಾಗಿ ತಜ್ಞರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ, ಹವಾಮಾನ, ಪರಿಸರ ರಕ್ಷಣೆ, ಇಂಧನ ಕ್ಷಮತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ’ ಎಂದರು.

‘ಈ ಸಭೆಯಲ್ಲಿ ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಮಂತ್ರಿಗಳು, ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳು, ಆಹ್ವಾನಿತ ಸದಸ್ಯರು ಮತ್ತು ಅಂತರ್‍ರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸುಮಾರು 500 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಪಡಿಸುವುದು, ಡಿಜಿಟಲ್ ಸಾರ್ವಜನಿಕ ಮೂಲಸೌಲಭ್ಯಗಳ ಮೇಲೆ ಪ್ರಭಾವ ಬೀರುವುದು ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಅವರು ಹೇಳಿದರು.

Similar News