"ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದ್ದಾನೆ ತಾನೇ": ಮಹಿಳೆ ಎದುರು ಕೂಗಾಡಿದ ಸಂಸದ ಮುನಿಸ್ವಾಮಿ

ಮಹಿಳಾ ದಿನಾಚರಣೆಯಂದೇ ಮಹಿಳೆಗೆ ಅವಮಾನಿಸಿದ ಬಿಜೆಪಿ ನಾಯಕ

Update: 2023-03-08 15:12 GMT

ಕೋಲಾರ, ಮಾ.8: ಹಣೆಗೆ ಕುಂಕುಮ ಇಟ್ಟಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಅವಮಾನಿಸಿರುವ ಘಟನೆ ನಡೆದಿದೆ. 

ಮಹಿಳಾ ದಿನಾಚರಣೆ ಅಂಗವಾಗಿ ಕೋಲಾರ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಎಕ್ಸ್ಪೋ ಒಂದರಲ್ಲಿ ಮುಳಬಾಗಿಲು ಮೂಲದ ಮಹಿಳೆಯೊಬ್ಬರು ಮಳಿಗೆ ಹಾಕಿದ್ದರು. ಅಲ್ಲಿಗೆ ಶಾಸ ಶ್ರೀನಿವಾಸ ಗೌಡ ಹಾಗೂ ಇತರ ಜನ ಪ್ರತಿನಿಧಿಗಳ ಜೊತೆ ಭೇಟಿ ಕೊಟ್ಟಿದ್ದ ಸಂಸದ ಮುನಿಸ್ವಾಮಿ ''ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಗಂಡ ಬದುಕಿದ್ದಾನೆ ತಾನೇ?, ಕಾಸು ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ವಾ ನಿನಗೆ, ವೈಷ್ಣವಿ ಎಂದು ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ?'' ಎಂದು ಕೂಗಾಡಿದ್ದಾರೆ. 

ಈ ವೇಳೆ ಜೊತೆಯಲ್ಲಿದ್ದ ಶಾಸಕ ಶ್ರೀನಿವಾಸಗೌಡ,  ''ಬೇರೆ ಕಾರಣ ಇರಬಹುದು ಬಿಡಪ್ಪ'' ಎಂದರೂ ಸುಮ್ಮನಾಗದ  ಸಂಸದ, ಯಾರ ಮಾತನ್ನೂ ಕೇಳದೆ ಮಹಿಳೆ ವಿರುದ್ದ ಹರಿಹಾಯ್ದಿದ್ದಾರೆ.  

ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿರೋಧ ಪಕ್ಷ ಕಾಂಗ್ರೆಸ್ ''ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ'' ಎಂದು ಕಿಡಿಕಾರಿದೆ. 

"ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದಾನೆ ತಾನೇ" ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಮಹಿಳೆಗೆ ಅವಮಾನಿಸಿದ್ದು ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ. ಮಹಿಳೆಯರ ಸ್ವತಂತ್ರ ಕಸಿಯಲು, ಅವರ ಉಡುಗೆ ತೊಡುಗೆ ನಿರ್ಧರಿಸಲು ಬಿಜೆಪಿಗೆ ಯಾವ ಹಕ್ಕಿದೆ? ಮಹಿಳಾ ದಿನದಂದೇ ಮಹಿಳೆಗೆ ಅವಮಾನಿಸಿ ವಿಕೃತಿ ಮೆರೆದಿದೆ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

''ತೆವಲು ಮಾತುಗಳಿಗೆ ಪದೇ ಪದೇ ಸುದ್ದಿಯಾಗುವ ಕೋಲಾರ ಸಂಸದ ಮಹಿಳಾ ದಿನಾಚರಣೆ ದಿನದಂದೇ ಹಣೆಯಲ್ಲಿ ತಿಲಕ ಇಲ್ಲವೆಂದು ಹಂಗಿಸಿ ಗಂಡ ಸತ್ತಿರುವನೇ ಎಂದು ಸಾರ್ವಜನಿಕವಾಗಿ ಹೀಯಾಳಿಸಿ ತನ್ನ ಮತ್ತು ಬಿಜೆಪಿ ಮನಸ್ಥಿತಿ ತೆರೆದು ಇಟ್ಟಿದ್ದಾರೆ! ಮನುವಾದಿ ಮನಸ್ಥಿತಿ ಬಿಂಬಿಸುವ ಸಂಸದ ಮುನಿಸ್ವಾಮಿ ಇದಕ್ಕಿಂತ ಬೇರೆ ಏನು ಹೇಳುವರು''  ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: ಸಂಸದ ಮುನಿಸ್ವಾಮಿಯಿಂದ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ದಲಿತ ಮುಖಂಡ ಆತ್ಮಹತ್ಯೆಗೆ ಯತ್ನ

Similar News