ಸಂಸದ ಮುನಿಸ್ವಾಮಿಯಿಂದ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ದಲಿತ ಮುಖಂಡ ಆತ್ಮಹತ್ಯೆಗೆ ಯತ್ನ
ಕೋಲಾರ : ''ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ ಎಂಬ ಹೇಳಿಕೆ ನೀಡಿದ ಕಾರಣಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ತಮ್ಮ ಮೇಲೆ ಸುಳ್ಳು ಕೇಸು ದಾಖಲಾಗುವಂತೆ ಮಾಡಿ ಜೈಲಿಗೆ ಕಳುಹಿಸಿದ್ದಾರೆ'' ಎಂದು ಆರೋಪಿಸಿ ಡೆತ್ನೋಟ್ ಬರೆದಿಟ್ಟು ದಲಿತ ಯುವ ಹೋರಾಟಗಾರ ಕೆ.ಎಂ.ಸಂದೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ಸಂದೇಶ್ರನ್ನು ಅವರ ಸಹವರ್ತಿಗಳು ಸಕಾಲದಲ್ಲಿ ಜಾಲಪ್ಪ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಸಿಗುವಂತೆ ಮಾಡಿದ್ದು, ವೈದ್ಯರು ಚಿಕಿತ್ಸೆ ನೀಡಿ 24 ಗಂಟೆಗಳ ಕಾಲ ತುರ್ತು ನಿಗಾ ಕೊಠಡಿಯಲ್ಲಿ ಚಿಕಿತ್ಸೆ ಮುಂದುವರಿಸಲು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ದಲಿತ ಯುವತಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದ ಕೆ.ಎಂ.ಸಂದೇಶ್ರ ಮೇಲೆ ಯುವಕನ ಅಪಹರಣ ಪ್ರಕರಣವನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಇದು ಸಾಲದ್ದಕ್ಕೆ ಸಂದೇಶ್ರ ಮೇಲೆ ವಿವಿಧ ರೋಲ್ಕಾಲ್ ಆರೋಪಗಳನ್ನು ಮಾಡಲಾಗಿತ್ತು. ನ್ಯಾಯಾಲಯ ಜಾಮೀನು ಪಡೆದು ಹೊರ ಬಂದಾದ ಮೇಲೂ ತಾವು ಮಾಡದ ತಪ್ಪಿಗೆ ಆಗಿರುವ ಶಿಕ್ಷೆಯಿಂದ ಅಪಮಾನ ತಾಳಲಾರದೆ ತಾವು ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸುತ್ತಿರುವುದಾಗಿ ಸಂದೇಶ್ ಬರೆದಿರುವ ಎರಡು ಪುಟಗಳ ಡೆತ್ ನೋಟ್ನಲ್ಲಿ ವಿವರಿಸಿದ್ದಾರೆ.
ಎಸ್. ಮುನಿಸ್ವಾಮಿ - ಸಂಸದ
► ಸಂದೇಶ್ ಬರೆದ ಪತ್ರದಲ್ಲಿ ಏನಿದೆ?
'ಬಾಗಲ ಕೋಟೆ ಮೂಲದ ದಲಿತ ಯುವತಿಗೆ ನ್ಯಾಯ ಕೊಡಿಸುವ ಸಲುವಾಗಿ ಮುಂದಾಗಿದ್ದರಿಂದ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಾಲ್ಕು ಜನ ಅಮಾಯಕರಿದ್ದಾರೆ. ಅವರಿಗೆ ತೊಂದರೆಯಾಗುವುದರಿಂದ ಆ ಪ್ರಕರಣದ ಕುರಿತು ಬರೆಯುವುದಿಲ್ಲ. ನ್ಯಾಯಾಲಯದಲ್ಲಿ ಗೆಲುವು ಸಿಗುತ್ತದೆ'.
'ನನ್ನ ವಿಚಾರವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು, ಅದನ್ನು ಪತ್ರಿಕೆಗಳಲ್ಲಿ ಕೆಟ್ಟದ್ದಾಗಿ ಬರೆದಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಯಾವುದೇ ತಪ್ಪು ಮಾಡದೆ ಇದ್ದರೂ ಸಮಾಜ ದಲ್ಲಿ ತಲೆ ಎತ್ತಿ ನಡೆಯಲು ಆಗುತ್ತಿಲ್ಲ. ಕಣ್ಣೂರು ಸ್ಮಶಾನ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಬಂಡಹಳ್ಳಿ ಗ್ರಾಮದಲ್ಲಿ ಬಡವರ ಮನೆಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟದಲ್ಲಿ ಒಂದು ಪ್ರಕರಣ, ಈಗ ಈ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳು ನನ್ನ ಸ್ವಾರ್ಥಕ್ಕಾಗಿ ಆದದ್ದಲ್ಲ''.
''ನಾನು ಇಲ್ಲಿಯ ತನಕ 129 ಅಂತರ್ಜಾತಿ ವಿವಾಹಗಳನ್ನು ನಡೆಸಿದ್ದು, ಯಾವುದೇ ದಂಪತಿಯಿಂದ ಒಂದು ಪೈಸೆ ಹಣ ಪಡೆದಿಲ್ಲ. ನನ್ನ ಜೀವನದಲ್ಲಿ ಯಾವುದೇ ಕಚೇರಿ, ಅಧಿಕಾರಿಯ ಬಳಿ ರೋಲ್ಕಾಲ್ ಮಾಡಿಲ್ಲ. ನನ್ನ ವಿರುದ್ಧವಾಗಿ ಯಾವುದೇ ಆಧಾರವಿಲ್ಲದೆ ಪತ್ರಿಕಾಗೋಷ್ಠಿ ನಡೆಸಿರುವುದರಿಂದ ನೋವಾಗಿದೆ. ನಾನು ಜೀವನಪೂರ್ತಿ ಬಾಡಿಗೆ ಮನೆಯಲ್ಲಿಯೇ ವಾಸವಿದ್ದೇನೆ. ಇಲ್ಲಿಯತನಕ ಸ್ವಃತ ಮನೆಯನ್ನೂ ಕಟ್ಟಿಕೊಂಡಿಲ್ಲ. ಒಂದೇ ಒಂದು ಗುಂಟೆ ಜಮೀನಿಲ್ಲ. ಒಂದೇ ಒಂದು ನಿವೇಶನ ಇಲ್ಲ. ನನಗೆ ಕೆಟ್ಟ ಹವ್ಯಾಸಗಳೂ ಇಲ್ಲ. ನನ್ನ ಜನರು ಫೋನ್ ಮಾಡಿದರೆ ತಕ್ಷಣ ಅಲ್ಲಿಗೆ ಹೋಗಿ ಅವರಿಗೆ ನ್ಯಾಯ ಕೊಡಿಸುವ ಹವ್ಯಾಸವೊಂದು ನನಗಿದೆ''
''ನನ್ನನ್ನು ಮುಗಿಸಲು ಕೋಲಾರ ಜಿಲ್ಲೆಯ ಮಾನ್ಯ ಸಂಸದರು ಷಡ್ಯಂತ್ರ ನಡೆಸಿ, ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇಷ್ಟು ವರ್ಷ ಮನೆಮನೆಗೆ ಪತ್ರಿಕೆ ಹಾಕಿಕೊಂಡು, ಕಾಲಿಗೆ ಚಪ್ಪಲಿ ಇಲ್ಲದೆ, ಹರಿದ ಬಟ್ಟೆಹಾಕಿಕೊಂಡು ಕೂಡಿಟ್ಟುಕೊಂಡಿದ್ದ ಗೌರವವನ್ನು ಮಾನ್ಯ ಸಂಸದರು ಹಾಳು ಮಾಡಿದ್ದಾರೆ. ನಾನು ಮೊದಲೇ ಹೇಳಿದ್ದೆ. ನನಗೆ ಯಾವತ್ತೂ ಅವಮಾನ ಆಗುತ್ತೋ ಅವತ್ತು ನನ್ನ ಸಾವು ಎಂದು. ಆದರೆ ನಾನು ಯಾವ ತಪ್ಪು ಮಾಡದೆ ನನಗೆ ಸಾಕಷ್ಟು ಅವಮಾನ ಆಗುತ್ತಿದ್ದು ಇದನ್ನು ನನ್ನಿಂದ ಸಹಿಸಲು ಆಗುತ್ತಿಲ್ಲ''
''ಸಿದ್ದರಾಮಯ್ಯನರು ದಲಿತ ವಿರೋಧಿ ಅಲ್ಲ ಎಂದು ನಾನು ಕೊಟ್ಟ ಒಂದೇ ಒಂದು ಹೇಳಿಕೆಯಿಂದ ನನಗೆ ಈ ಪರಿಸ್ಥಿತಿ ಬಂದಿದೆ. ನಾನು ಕಷ್ಟದಲ್ಲಿದ್ದ ಸಮಯದಲ್ಲಿ ನನಗೆ ಯಾರು ಸಹಾಯ ಮಾಡಿಲ್ಲ. ಈ ಸಮಾಜದಲ್ಲಿ ನಾನು ಯಾವತ್ತೂ ತಲೆ ಬಾಗಿಲ್ಲ. ಆದರೆ ನಾನು ಮಾಡದ ತಪ್ಪಿಂದ ಈ ತೀರ್ಮಾನ ತೆಗೆದುಕೊಂಡಿದ್ದೇನೆ.'' ಎಂದು ಸಂದೇಶ್ ಡೆತ್ ನೋಟ್ನಲ್ಲಿ ವಿವರಿಸಿದ್ದಾರೆ.
ಸಂದೇಶ್ ಅವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಬಳಿಕ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಗಳನ್ನು ಮಾಡಿದ್ದು, ಸಂದೇಶ ಪರ ನಿಂತಿದ್ದಾರೆ. ದಲಿತ ಹಿರಿಯ ಹೋರಾಟಗಾರರು ಈ ಕುರಿತು ಮಾತನಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.