'ಶಿವದೂತೆ ಗುಳಿಗೆ' ನಾಟಕಕ್ಕೆ ಅವಮಾನ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತುಳುನಾಡಿಗರ ಆಕ್ರೋಶ

Update: 2023-03-16 14:04 GMT

ಶಿವಮೊಗ್ಗ, ಮಾ.16: ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ "ಶಿವದೂತೆ ಗುಳಿಗೆ" ನಾಟಕ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗುತ್ತಿದೆ.  

ಮಾ. 14ರಂದು 'ಶಿವದೂತೆ ಗುಳಿಗೆ' ಎಂಬ ತುಳುನಾಡಿನ ದೈವ ಆಧಾರಿತ ನಾಟಕವನ್ನು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು ಆಯೋಜಿಸಿದ್ದರು. ಈ ಕುರಿತಾಗಿ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯನ್ನ ಉದ್ಘಾಟಿಸಿ ಮಾತನಾಡುತ್ತಾ, ''ಕಾಂಗ್ರೆಸ್  ಆಯೋಜಿಸಿದ 'ಶಿವದೂತೆ ಗುಳಿಗೆ' ನಾಟಕವನ್ನ ನಂಬಬೇಡಿ. ಕಾಂಗ್ರೆಸ್ ನ ನಾಟಕ  ಅಪಾಯದಲ್ಲಿದೆ.  ಗುಳಿಗೆ ಎಂದು ಹೇಳಿ ಜನರಿಗೆ ಜಾಪಾಳ್ ಮಾತ್ರೆ ಕೊಡುವ ಅಪಾಯವಿದೆ. ಹೊಸ ಹೊಸ ನಾಟಕ ಆರಂಭವಾಗಿದೆ, ಅಧಿಕಾರದಲ್ಲಿ ಇದ್ದಾಗ ದೇಶವನ್ನ ಲೂಟಿ ಮಾಡಿದ್ದಾರೆ. ಮತ್ತೊಮ್ಮೆ ಅಧಿಕಾರ ಕೊಡಿ ಅನುಕೂಲ ಮಾಡ್ತೀವಿ ಎಂದು ಕಾಂಗ್ರೆಸ್ ಹೇಳ್ತಾ ಇದೆ'' ಎಂದು ಹೇಳಿದ್ದರು. 

ಇದೀಗ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯ 'ಶಿವದೂತೆ ಗುಳಿಗೆ' ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿ, ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

''ತೀರ್ಥಹಳ್ಳಿ ಅಂದರೆ ನಮ್ಮ ತುಳುನಾಡಿಗೆ ಹೊಂದಿಕೊಂಡಿರುವ ಊರು. ತುಳುನಾಡಿನ ಮೂಲ ನಿವಾಸಿಗಳಾದ ಆದಿ ದ್ರಾವಿಡರು, ಮುಂಡಾಲರು ಮತ್ತು ಬಿರುವ ಜನಾಂಗದವರು ತೀರ್ಥಹಳ್ಳಿಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. 'ಗುಳಿಗೆ' ದೈವ ಘಟ್ಟ ಪ್ರದೇಶದಲ್ಲೂ ಇದೆ. ಹೀಗಿರುವಾಗ ತೀರ್ಥಹಳ್ಳಿ ಶಾಸಕರಿಗೆ (ಆರಗ ಜ್ಞಾನೇಂದ್ರ) 'ಗುಳಿಗೆ' ಅಂದರೆ ತಮಾಷೆಯ ವಸ್ತುವಾಗಿ ಕಂಡಿದೆ. ಇದು ಅವರ ಸಾಮಾಜಿ ಬದ್ಧತೆಯನ್ನು ತೋರಿಸುತ್ತದೆ'' ಎಂದು ಮಹಿ ಮುಲ್ಕಿ @Mahimulki ಎಂಬವರು ಟ್ವಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

''ಮಾರ್ಚ್ 14 ರಂದು ಆಯೋಜಿಸಿದ್ದ ಜನ ಮೆಚ್ಚಿರುವಂತ "ಶಿವದೂತೆ ಗುಳಿಗೆ" ನಾಟಕ ಕುರಿತು ಆರಗ ಜ್ಞಾನೇಂದ್ರ ನವರು ಅವಮಾನಿಸಿರದು ಅತ್ಯಂತ ದುಃಖಕರ ಸಂಗತಿ. ದೈವವನ್ನು ಕುರಿತು ಇಷ್ಟು ಹಗುರವಾಗಿ ಅಪಹಾಸ್ಯ ಮಾಡಿರುವುದು ಖಂಡನಿಯ'' ಎಂದು ದೀಪು ಗೌಡ್ರು ಎಂಬವರು ಟ್ವೀಟ್ ಮಾಡಿದ್ದಾರೆ. 

ಈ ಹಿಂದೆ ವಿಧಾಸಭೆಯಲ್ಲಿ 'ತುಳು ದೈವಭಾಷೆ'ಯೆಂದ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಅವರ ಹೇಳಿಕೆಗೆ ಕುಹಕವಾಡಿದ ಸಚಿವ ಮಾಧುಸ್ವಾಮಿ ವಿರುದ್ಧ ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತೋರ್ವ ಬಿಜೆಪಿ ನಾಯಕನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಂತೆ ಕರಾವಳಿ ಜಿಲ್ಲೆಯ ಜನಪ್ರತಿನಿಧಿಗಳಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಹಲವರು ಒತ್ತಾಯಿಸಿದ್ದಾರೆ. 

ಇದನ್ನೂ ಓದಿ:  'ತುಳು ದೈವಭಾಷೆ'ಯೆಂದ ಖಾದರ್ ಹೇಳಿಕೆಗೆ ಕುಹಕವಾಡಿದ ಸಚಿವ ಮಾಧುಸ್ವಾಮಿ ವಿರುದ್ಧ ಸಾಮಾಜಿಕ ತಾಣದಲ್ಲಿ ತೀವ್ರ ಅಸಮಾಧಾನ

Similar News