'ತುಳು ದೈವಭಾಷೆ'ಯೆಂದ ಖಾದರ್ ಹೇಳಿಕೆಗೆ ಕುಹಕವಾಡಿದ ಸಚಿವ ಮಾಧುಸ್ವಾಮಿ ವಿರುದ್ಧ ಸಾಮಾಜಿಕ ತಾಣದಲ್ಲಿ ತೀವ್ರ ಅಸಮಾಧಾನ
ದ.ಕ ಜಿಲ್ಲೆಯ ಸಚಿವರು, ಬಿಜೆಪಿ ಶಾಸಕರಿಗೆ ತರಾಟೆ
ಬೆಂಗಳೂರು: ತುಳು ಭಾಷೆ ನಮ್ಮ ಕಡೆ (ಕರಾವಳಿ ಜಿಲ್ಲೆ) ದೈವ ಮಾತನಾಡುವ ಭಾಷೆ ಎಂಬ ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರ ಹೇಳಿಕೆಗೆ ಕುಹಕವಾಡಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಗುರುವಾರ ವಿಧಾಸಭೆಯಲ್ಲಿ ಯು.ಟಿ ಖಾದರ್ ಅವರು ಮಾತನಾಡುತ್ತಾ ''ತುಳು ಭಾಷೆ ನಮ್ಮ ಕಡೆ (ಕರಾವಳಿ ಜಿಲ್ಲೆ) ದೈವ ಮಾತನಾಡುವ ಭಾಷೆ. ತುಳುವಿನಲ್ಲಿ ಯಕ್ಷಗಾನ ಮತ್ತು ಲಿಪಿಯ ಬಗ್ಗೆ ಅಕಾಡೆಮಿ ಇದೆ. ಇದನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಕಲಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಮಿತಿಯನ್ನು ರಚಿಸುವ ಅಗತ್ಯ ಏನಿತ್ತು?'' ಎಂದು ಪ್ರಶ್ನಿಸಿದ್ದರು.
ಯು.ಟಿ ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಚಿವ ಮಾಧುಸ್ವಾಮಿ ಅವರು, ''ದೇವರು ಮಾತನಾಡುವುದು ನಿಮ್ಮ ಜಿಲ್ಲೆಯಲ್ಲಿ ಮಾತ್ರ, ನಮ್ಮ ಜಿಲ್ಲೆಗಳಲ್ಲಿ ದೇವರು ಮಾತನಾಡುವುದಿಲ್ಲಪ್ಪ'' ಎಂದು ಸಭಾಧ್ಯಕ್ಷರತ್ತ ನೋಡುತ್ತಾ ವ್ಯಂಗ್ಯವಾಡಿದ್ದರು.
ಇದೀಗ ಈ ಸಚಿವ ಮಾಧುಸ್ವಾಮಿ ಅವರ ನಡೆ ಬಗ್ಗೆ ಸಂಘ ಪರಿವಾರ ಹಾಗೂ ದೈವರಾಧಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಾಧುಸ್ವಾಮಿ ಅವರು ಕ್ಷಮೆಯಾಚಿಸಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಅಲ್ಲದೇ, ತುಳುನಾಡಿನ ಶಾಸಕ, ಸಚಿವರ ಮೌನದ ಬಗ್ಗೆಯೂ ತೀವ್ರ ಚರ್ಚೆಯಾಗುತ್ತಿದೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಹೇಳಿಕೆ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್, '' ಸದನದಲ್ಲಿ ಶಾಸಕ ಯು.ಟಿ ಖಾದರ್ ಅವರು ತುಳು ಭಾಷೆಯನ್ನ ರಾಜ್ಯದ 2ನೇ ಭಾಷೆಯಾಗಿ ಘೋಷಿಸಬೇಕು ಎಂದು ಮನವಿ ಮಾಡಿದ್ದರಲ್ಲಿ ತಪ್ಪೇನು? ಕಾನೂನು ಸಚಿವರು ಈ ವೇಳೆ ಕುಹಕವಾಡಿದ್ದೇಕೆ? ನಮ್ಮ ಮಾತೃ ಭಾಷೆಯನ್ನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಪದೇ ಪದೇ ಒತ್ತಾಯಿಸಿದ್ದರೂ ಈ ಬಗ್ಗೆ ನಮ್ಮ ಸಂಸದರು (ನಳಿನ್ ಕುಮಾರ್ ಕಟೀಲ್) ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಈಗ ರಾಜ್ಯದಲ್ಲಿ ತುಳು ಭಾಷೆಯನ್ನ 2ನೇ ಭಾಷೆಯಾಗಿ ಘೋಷಿಸಬೇಕು ಎಂದು ಮನವಿ ಮಾಡಿದರೆ, ಸಚಿವರು ಈ ರೀತಿ ವ್ಯಂಗ್ಯವಾಡಿದ್ದಾರೆ. ಮಾಧುಸ್ವಾಮಿ ಅವರ ಮಾತಿಗೆ ದೈವದ ತೀರ್ಮಾನ ಏನೇ ಇರಬಹುದು, ಆದರೆ ನಮಗೆ ಮಾಧುಸ್ವಾಮಿ ಅವರ ಮಾತು ಇಷ್ಟ ಆಗಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ನಮ್ಮ ದೈವಗಳು ತುಳುವಿನಲ್ಲಿ ಮಾತನಾಡುತ್ತವೆ ಎಂಬ ಮಾತಿಗೆ ಸಚಿವ ಮಾಧುಸ್ವಾಮಿ ವ್ಯಂಗ್ಯ ತುಳುನಾಡು ಮತ್ತು ತುಳು ಭಾಷೆಯ ಅಜ್ಞಾನದ ಜತೆಗೆ ಅಹಂಕಾರವೂ ಕಾರಣ. ತುಳುನಾದಡಿನಿಂದಲೇ ಆಯ್ಕೆಯಾಗಿ ಹೋದ ಸಂಸ್ಕೃತಿ ಸಚಿವರು ಹಾಗೂ ಹತ್ತಕ್ಕೂ ಮಿಗಿಲಾದ ಶಾಸಕರೇ ಇಂತಹ ವ್ಯಂಗ್ಯಕ್ಕೆ ನಿಮ್ಮ ಸಮ್ಮತಿಯೂ ಇದೆಯೇ? ಸದನದಲ್ಲಿ ನೀವು ತುಳುನಾಡನ್ನು ಪ್ರತಿನಿಧಿಸುತ್ತಿದ್ದೀರಿ. ಮಾಧುಸ್ವಾಮಿಯವರ ವ್ಯಂಗ್ಯ ನಿಮ್ಮ ತುಳುವಿಗೆ, ನಿಮ್ಮ ದೈವಕ್ಕೆ ಮಾಡಿದ ಅವಮಾನ ಎಂದು ನಿಮಗನಿಸುವುದಿಲ್ಲವೇ?'' ಎಂದು ರೋಹಿಣಾಕ್ಷ ಶಿರ್ಲಾಲು ಎಂಬವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
''ಒಬ್ಬ ತುಳು ಭಾಷಿಕರಾಗಿ , ಬ್ಯಾರಿ ಭಾಷಿಗ ಶಾಸಕ ಯೂ.ಟಿ ಖಾದರ್ , ತುಳುವನ್ನ ದೈವಭಾಷೆ ಅಂದಾಗ ಅದಕ್ಕೆ ಕೊಂಕು ಮಾತಾಡಿದ ಮಾಧುಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಳ್ಳದ ನಿಮ್ಮ ಅಭಿಮಾನ ಸತ್ತು ಹೋಗಿದೆಯಾ ? ಮಾಧುಸ್ವಾಮಿ ಬಿಜೆಪಿಗನೇ ಆಗಿರಲಿ ತನ್ನ ಮಾತೃಭಾಷೆಗೆ ಅವಮಾನ ಆದಾಗ ವಿರೋಧಿಸದ ನೀವುಗಳು ಆ ವ್ಯಕ್ತಿಯಿಂದ ಬಹಿರಂಗ ಕ್ಷಮೆ ಕೇಳಿಸದಿದ್ದರೆ ನೀವು ನಮ್ಮ ತುಳುನಾಡಿನ ಪ್ರತಿನಿಧಿಗಳೇ ಅಲ್ಲ. ಕನ್ನಡ ರಾಜ್ಯಭಾಷೆ ನಮಗೂ ಗೌರವ ಇದೆ ಹಾಗಂತಾ ನಮ್ಮ ಮಾತೃಭಾಷೆಯ ಬಗ್ಗೆ ಕೊಂಕು ನುಡಿಯಲು ಯಾವೊಬ್ಬನಿಗೂ ಅಧಿಕಾರವಿಲ್ಲ''
''ಖಾದರ್ ಅವರು ರಾಜಕೀಯ ಕಾರಣಕ್ಕೇ ಉಲ್ಲೇಖಿಸಿರಬಹುದು ಆದರೆ ವಿಷಯ ನಿಜ ಅಲ್ವಾ ?ಸಾವಿರಾರು ವರ್ಷ ಇತಿಹಾಸ ಇರೋ ಪಾರ್ದನಗಳು ತುಳುವಲ್ಲೇ ಇರೋದು ಕನ್ನಡದಲ್ಲಿ ಇಲ್ಲ ತಾನೇ ? ದೈವದ ನುಡಿ ಮದಿಪುಗಳೆಲ್ಲಾ ತುಳುವಲ್ಲೇ ನಡೆಯೋದು ಇಷ್ಟೆಲ್ಲಾ ಅರಿವಿರುವ ನೀವು ಆದಷ್ಟು ಬೇಗ ಮಾಧುಸ್ವಾಮಿಯಿಂದ ಕ್ಷಮೆ ಕೇಳಿಸಲೇಬೇಕು ಇದು ಒಬ್ಬ ತುಳುವನಾಗಿ ಆಗ್ರಹ.'' ಎಂದು Deekshith Shettigar Konaje ಎಂಬವರು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರನ್ನು ಟ್ಯಾಗ್ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯು.ಟಿ ಖಾದರ್ ಹೇಳಿದ್ದೇನು?
ತುಳು ಭಾಷೆ ನಮ್ಮ ಕಡೆ (ಕರಾವಳಿ ಜಿಲ್ಲೆ) ದೈವ ಮಾತನಾಡುವ ಭಾಷೆ. ತುಳುವಿನಲ್ಲಿ ಯಕ್ಷಗಾನ ಮತ್ತು ಲಿಪಿಯ ಬಗ್ಗೆ ಅಕಾಡೆಮಿ ಇದೆ. ಇದನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಕಲಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಮಿತಿಯನ್ನು ರಚಿಸುವ ಅಗತ್ಯ ಏನಿತ್ತು? 2500 ವರ್ಷಗಳ ಇತಿಹಾಸವಿರುವ ತುಳು ಅಧ್ಯಯನಕ್ಕೆ ಸಮಿತಿ ರಚಿಸುವ ಅಗತ್ಯವಿರಲಿಲ್ಲ, ಇದು ಜನರಿಗೆ ಮೋಸ ಮಾಡುವ ತಂತ್ರ. ಬಿಜೆಪಿ ಶಾಸಕರು ತುಳುನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಕರಾವಳಿಯಲ್ಲಿ ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಎರಡನೇ ರಾಜ್ಯ ಭಾಷೆಯನ್ನಾಗಿ ಮಾಡಲಿಲ್ಲ. ಈಗ ಚುನಾವಣೆ ಹತ್ತಿರ ಬರೋವಾಗ ಜನರ ಆಕ್ರೋಶ ತಪ್ಪಿಸಲು ಮೋಸ ಮಾಡುತ್ತಿದ್ದಾರೆ. ಸರ್ಕಾರ ಅಧ್ಯಯನ ಸಮಿತಿ ಮಾಡಿರೋದೇ ತುಳು ಭಾಷೆಗೆ ಮಾಡಿರುವ ಅವಮಾನ ಎಂದು ಹೇಳಿದ್ದರು.
https://t.co/hQvAIPVyvD
— surya shetty (@suryashetty5) February 17, 2023
ತುಳು ಭಾಷೆಯ ಅಧ್ಯಯನ ಸಮಿತಿಯ ಯಶಸ್ಸು ನಿಜವಾಗಿಯೂ ಮಂಗಳೂರಿನ ಶಾಸಕರಾದ ಸನ್ಮಾನ್ಯ ಯು. ಟಿ ಖಾದರ್ ರವರಿಗೆ ಸಲ್ಲಬೇಕೇ ವಿನಹ: ಸುನಿಲ್ ಕುಮಾರ್ ಗಲ್ಲ