ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆರಿಸಿಯೇ ಪಟ್ಟಿ ಬಿಡುಗಡೆ: ಸಚಿವ ಡಾ.ಕೆ.ಸುಧಾಕರ್

Update: 2023-04-01 16:16 GMT

ಬೆಂಗಳೂರು, ಎ.1: ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ವರಿಷ್ಠರು ಸೂಕ್ತ ಅಭ್ಯರ್ಥಿಗಳನ್ನು ಆರಿಸಿಯೆ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಬೇರೆ ಪಕ್ಷಗಳಂತೆ ಇಲ್ಲಿ ಅವ್ಯವಸ್ಥಿತವಾಗಿ ಏನೂ ನಡೆಯುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.13ರ ತನಕ ಸಮಯ ಇದೆ. ಚುನಾವಣೆಯಲ್ಲಿ ರಣತಂತ್ರ ಮಾಡಬೇಕಾಗುತ್ತದೆ. ಎಲ್ಲರಿಗಿಂತ ಮೊದಲು ಪಟ್ಟಿ ಬಿಡುಗಡೆ ಮಾಡಿದಾಕ್ಷಣ ಗೆಲ್ಲುತ್ತೇವೆ ಎಂದರ್ಥವಲ್ಲ. ಬಿಜೆಪಿಗೆ ತನ್ನದೇ ಆದ ತಂತ್ರವಿದೆ ಎಂದರು. 

ಅಭ್ಯರ್ಥಿಗಳ ನಡುವೆ ಜಗಳ, ಚೇರ್ ಗಳು ಮುರಿದುಹೋಗುವಂತಹ ಘಟನೆಗಳು ಬೇರೆ ಪಕ್ಷಗಳಲ್ಲಿ ನಡೆಯುತ್ತಿದೆ. ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ. ಕಾಂಗ್ರೆಸ್‍ನಲ್ಲಿ ಯಾರೊ ಪ್ರಣಾಳಿಕೆಯನ್ನು ಬರೆದುಕೊಟ್ಟು, ಅದನ್ನು ಒಂದನೆ ಗ್ಯಾರಂಟಿ, ಎರಡನೆ ಗ್ಯಾರಂಟಿ ಎಂದು ಓದುತ್ತಾ ಹೋದರು ಎಂದು ಸುಧಾಕರ್ ಟೀಕಿಸಿದರು.

ಬಿಜೆಪಿ ಈ ರೀತಿ ಮಾಡಿಲ್ಲ. ಪ್ರಣಾಳಿಕೆ ರೂಪಿಸಲು ಬಿಜೆಪಿ ಜನರ ಮುಂದೆ ಹೋಗಿದೆ. ರೈತರು, ಸಣ್ಣ ಕೈಗಾರಿಕಾ ಉದ್ಯಮಿಗಳು, ಕಾರ್ಮಿಕರು ಮೊದಲಾದ ವರ್ಗದ ಜನರ ಕಷ್ಟಗಳನ್ನು ಆಲಿಸಿ, ಅದಕ್ಕೆ ಪೂರಕವಾಗಿ ಪ್ರಣಾಳಿಕೆ ರಚಿಸಲಾಗುತ್ತಿದೆ. ಬಿಜೆಪಿಗೂ ಕಾಂಗ್ರೆಸ್‍ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆಯಲ್ಲಿ ಎಂದೂ ಸೋತಿಲ್ಲ. ಅವರು ಎಲ್ಲಿ ನಿಂತರೂ ಗೆಲ್ಲುತ್ತಾರೆ. ಶಿಗ್ಗಾಂವಿಯಲ್ಲಿ ಪೂರಕವಾದ ವಾತಾವರಣ ಇದೆಯೇ, ಇಲ್ಲವೇ ಎಂದು ಯಾರೂ ಹೇಳಿಲ್ಲ. ಶಿಗ್ಗಾಂವಿಯಲ್ಲಿ ಸ್ಪರ್ಧಿಸಿದರೆ ಅತಿ ಹೆಚ್ಚು ಮತಗಳು ಬೊಮ್ಮಾಯಿಗೆ ದೊರೆಯುತ್ತದೆ. ಬೊಮ್ಮಾಯಿ ವಿರುದ್ಧ ನಿಂತುಕೊಂಡರೆ ವಿನಯ್ ಕುಲಕರ್ಣಿ ದೊಡ್ಡ ಅಂತರದಲ್ಲೆ ಸೋಲುತ್ತಾರೆ ಎಂದು ಸುಧಾಕರ್ ತಿಳಿಸಿದರು.

ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರವೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನಲ್ಲಿ ಯಾವುದೆ ಚಟುವಟಿಕೆ ನಡೆಯುತ್ತಿಲ್ಲ. ಬಿಜೆಪಿಯ ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾವಾಗಲೂ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಈ ಬಾರಿ ಅದನ್ನು ಮೀರಿ ಪಕ್ಷಕ್ಕೆ ಬೆಂಬಲ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Similar News