ಕಾಂಗ್ರೆಸ್ ಗರ್ಭದಲ್ಲಿ ಹುಟ್ಟುವ ಪ್ರತಿ ಕೂಸು ಭ್ರಷ್ಟಾಚಾರಿ: ಹರಿಕೃಷ್ಣ ಬಂಟ್ವಾಳ ಆರೋಪ

ಹಿರಿಯಡ್ಕದಲ್ಲಿ ಬಿಜೆಪಿಯಿಂದ ಸಾರ್ವಜನಿಕ ಸಭೆ

Update: 2023-05-01 15:29 GMT

ಹಿರಿಯಡ್ಕ, ಮೇ 1: ಬ್ರಿಟಿಷರ ಗರ್ಭದಿಂದ ಕಾಂಗ್ರೆಸ್ ಹುಟ್ಟಿದೆ. ಕಾಂಗ್ರೆಸ್‌ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಕೂಸು ಭ್ರಷ್ಟಾಚಾರಿಯಾಗಿರುತ್ತದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.

ಬಿಜೆಪಿಯಿಂದ ಹಿರಿಯಡ್ಕದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಕಾಂಗ್ರೆಸ್ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನು ಕಂಡು ಬೇಸತ್ತು ಜನರು, ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಜನರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

ನೆಹರು ಕಾಲದಿಂದ ಆರಂಭವಾದ ಜೀಪು ಹಗರಣ, ಮನಮೋಹನ್ ಸಿಂಗ್ ಅವಧಿಯಲ್ಲಿ 2 ಜಿ ಹಗರಣ, ಕಲ್ಲಿದ್ದಲು ಹಗರಣ ಹೀಗೆ ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳ ಪಟ್ಟಿಯನ್ನು ಕೊಡಬಲ್ಲೆ. ಆದರೆ ನರೇಂದ್ರ ಮೋದಿ ಈ ದೇಶದ ಚುಕ್ಕಾಣಿ ಹಿಡಿದ ಬಳಿಕ ಯಾವುದೇ ಒಂದು ಹಗರಣ ನಡೆದಿರುವ ಬಗ್ಗೆ ಸಾಕ್ಷ್ಯ ನೀಡಲು ಕಾಂಗ್ರೆಸ್‌ಗೆ ಸಾಧ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ  ಮಾತನಾಡಿದರು.

ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮುಖಂಡ ರಾದ ರವಿ ಅಮೀನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಿಯಾನಂದ ಹೆಗ್ಡೆ, ಸಂದೀಪ್ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

Similar News