ಅಂಬೇಡ್ಕರ್, ಬುದ್ಧ, ಪೆರಿಯಾರ್ ಓದು ಲೇಖಕರಿಗೆ ಗಟ್ಟಿತನ ಕೊಡುತ್ತೆ: ಕನ್ನಡ, ಕೊಂಕಣಿ ಕವಿ ವಿಲ್ಸನ್ ಕಟೀಲ್

Update: 2023-05-31 15:41 GMT

ಕುಂದಾಪುರ, ಮೇ 31: ಹೊಸದಾಗಿ ಬರೆಯುವವರಿಗೆ ಅಂಬೇಡ್ಕರ್ ಬುದ್ಧ, ಪೆರಿಯಾರ್ ಓದಿನ ಪರಂಪರೆ ಮತ್ತಷ್ಟು ಗಟ್ಟಿತನವನ್ನು ಕೊಡುತ್ತದೆ ಎಂದು ಕನ್ನಡ, ಕೊಂಕಣಿ ಕವಿ ವಿಲ್ಸನ್ ಕಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ‘ತಿಂಗಳ ಓದು’ ಸರಣಿಯ ಕಾರ್ಯಕ್ರಮದಲ್ಲಿ ಸಂಘಟಿಸಿದ, ಅವಿಭಜಿತ ಕುಂದಾಪುರ ತಾಲೂಕು ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ, ಕನ್ನಡ ಕಾವ್ಯ ಪರಂಪರೆಯ ಹಿನ್ನೆಲೆಯಲ್ಲಿ ರೇಖಾ ಬನ್ನಾಡಿ ಆಡಿದ ಮಾತುಗಳಿಗೆ ಪೂರಕ ವಾಗಿ ಮಾತಾಡಿದರು.

ಕವಿಗೋಷ್ಠಿಯಲ್ಲಿ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಹುಟ್ಟಿದ, ಇಲ್ಲಿ ಬದುಕು ಕಟ್ಟಿಕೊಂಡ 25 ಕವಿಗಳ ಕವಿತೆಗಳು ವಾಚಿಸಲ್ಪಟ್ಟವು. ಶಶಿಧರ ಹೆಮ್ಮಾಡಿ, ಜಯಲಕ್ಷ್ಮಿ ಸತೀಶ್, ಸಂಪೂರ್ಣಾನಂದ ಬಳ್ಕೂರು, ಮಂಜು ನಾಥ ಮರವಂತೆ, ಶರತ್ ಶೆಟ್ಟಿ ವಂಡ್ಸೆ, ಮಹಾಬಲ ಕೆ.ಮರವಂತೆ, ಸಿಂಧೂ ಎಚ್.ಐತಾಳ, ಅಶೋಕ ತೆಕ್ಕಟ್ಟೆ, ದಿಶಾ ಗುಲ್ವಾಡಿ, ವಿಜಯಕುಮಾರ ಕುಂಭಾಶಿ, ವಿನಯಾ ಕೌಂಜೂರು, ಗಣೇಶ ಭಟ್ ಗುಜ್ಜಾಡಿ, ರಾಘವೇಂದ್ರ ಡಿ.ಆಲೂರು, ಸಚಿನ್ ಅಂಕೋಲ ತಮ್ಮ ಕವಿತೆಗಳನ್ನು ಓದಿದರು.

ರಾಮು ಉಪ್ಪಿನಕುದ್ರು, ಮಂಜುನಾಥ ಚಾಂದ್, ಸುಜಿತ್ ಕಾರ್ಕಳ, ವಿಜಯಶ್ರೀ ಹಾಲಾಡಿ, ರೇವತಿ ರಾಮ್ ಕುಂದನಾಡು, ಸಂತೋಷ ಗುಡ್ಡಿಯಂಗಡಿ, ಶ್ರೀಕಲಾ ಅಮರೇಶ್ ಶೆಟ್ಟಿಗಾರ್, ಲೋಲಾಕ್ಷಿ ಮರವಂತೆ, ಶಂಕರ ಕೆಂಚನೂರು ಅವರ ಕವಿತೆಗಳನ್ನು ಸಮುದಾಯದ ಕಲಾವಿದರು ವಾಚಿಸಿದರು.

ಕವನಗಳ ವಾಚನದ ನಂತರ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ರೇಖಾ ಬನ್ನಾಡಿ, ಕವಿತೆ ಬರೆಯುವ ಯುವ ತಲೆಮಾರಿನಲ್ಲಿ ಕವಿತೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಿಮ್ಮ ಮೆಚ್ಚಿನ ನಾಲ್ಕು ಕವಿತೆಗಳನ್ನು ಹೇಳಿ ಅಂದರೆ ಮುಖಮುಖ ನೋಡುವಂತಹ ಪರಿಸ್ಥಿತಿ ಇದೆ ಎಂದರು.

ಇಂತಹ ಸನ್ನಿವೇಶದಲ್ಲಿ ಭಾಷೆಯ ಬಗ್ಗೆ ಚೆನ್ನಾಗಿ ಹಿಡಿತವಿರುವ, ಬದುಕಿನ ಅನುಭವಗಳನ್ನು ಅರ್ಥವತ್ತಾಗಿ ನಿರೂಪಿಸಬಲ್ಲ  ಜೀವನ ನೋಟ ಮತ್ತು ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಅರಿವಿರುವ, ಮನುಕುಲದ  ಬಗ್ಗೆ ಆದ್ರವಾದ ಮನಸ್ಸು, ತಮ್ಮ ತೀಕ್ಷ್ಣವಾದ ಲೇಖನಿಯ ಮೂಲಕ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಬಹಳ ಪರಿಚಿತರಾದ ವಿಲ್ಸನ್ ಕಟೀಲ್ ಜೊತೆಯ ಈ ಮುಖಾಮುಖಿ ಮತ್ತು ಪರಸ್ಪರ ಸಂವಾದ ಒಂದು ಒಳ್ಳೆಯ ಬೆಳವಣಿಗೆ ಎಂದರು. 

ಶಂಕರ ಕೆಂಚನೂರರ ಕವಿತೆಯ, ವಾಸನೆಗೆ ರೂಪವಿಲ್ಲ, ಆದರೆ ಅದು ರೂಪಕವಾಗುತ್ತದೆ ಎಂಬ ಸಾಲನ್ನು ಉಲ್ಲೇಖಿಸುತ್ತ ಒಂದು ಕವಿತೆ ಶಬ್ಧಗಳ ಆಚೆಗೂ ಮಾತಾಡುತ್ತದೆ. ಮೌನದಲ್ಲು, ಆದರ ಓದು ಮುಗಿದ ಮೇಲೂ, ಅದು ಕಾಡಬೇಕು ಎನ್ನುತ್ತ ಕುವೆಂಪು ಅವರ ಕಲ್ಕಿ ಕವಿತೆಯ ಕೊನೆಯ ಸಾಲನ್ನು ಉಲ್ಲೇಖಿಸಿ, ಕಾವ್ಯ ನಮ್ಮನ್ನು ನಿದ್ದೆಯಿಂದ ಎಚ್ಚರಿಸುವ ಹಾಗೆ ಧ್ವನಿಪೂರ್ಣವಾಗಿರಬೇಕಾಗುತ್ತದೆ ಎಂದರು.

ಕನ್ನಡ ಕಾವ್ಯ ಪರಂಪರೆ ಸದಾ ಜನಪರವಾಗಿ, ಪ್ರಭುತ್ವದ ವಿರುದ್ಧದ ಧ್ವನಿಯಾಗಿ  ತನ್ನನ್ನು ತೊಡಗಿಸಿ ಕೊಂಡದ್ದನ್ನು ಅವರು ಕವಿರಾಜಮಾರ್ಗ, ಪಂಪಭಾರತ, ಅಲ್ಲಮ, ಬಸವಣ್ಣನವರ ವಚನಗಳು, ಬೇಂದ್ರೆಯವರ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತ ವಿವರಿಸಿದರು.

ಕವಿಗೋಷ್ಠಿಯಲ್ಲಿ ಹಾಜರಿದ್ದ ಬ್ರಹ್ಮಾವರ ಎಸ್‌ಎಂಎಸ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಹಂದೆ ಮಾತನಾಡಿ, ನಮ್ಮ ಅನುಭವ ಲೋಕದ ಅನುಭವದ ಜೊತೆಗೆ ಒಂದಾದಾಗ ಕವಿತೆ ಸಾರ್ಥಕವಾಗುತ್ತದೆ. ಒತ್ತಡದ ನಿವಾರಣೆಗಾಗಿ ಆಗಾಗ ಬಿಡಿಬಿಡಿಯಾಗಿ ಕವಿತೆಗಳನ್ನು ಓದಿದ್ದಿದೆ, ಇಷ್ಟೊಂದು ಕವಿಗಳನ್ನು ಒಂದೇ ಬಾರಿಗೆ ಕೇಳೋದು, ಕವಿಗೋಷ್ಠಿಗಿಂತ ಮೊದಲಿನ ಮಕ್ಕಳ ರಂಗಪ್ರಯೋಗ ಒಂದು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿದೆ. ಕವಿತೆ ಕೇಳಿದ ನಂತರ ನಮಗೂ ಹೀಗೇ ಅನ್ನಿಸಿದೆ ಅಂತ ಕೇಳುಗರಿಗೆ ಅನ್ನಿಸಿದರೆ ಕವಿತೆ ಸಾರ್ಥಕ. ಕವಿಗಳು ಶಬ್ಧಚಿತ್ರಗಳ ಮೂಲಕ, ಹೆಣ್ಣುಮಕ್ಕಳ ತೊಳಲಾಟದ ಚಿತ್ರಗಳನ್ನು  ಇಲ್ಲಿ ಸೃಷ್ಟಿಸಿದರು ಎಂದು ನುಡಿದರು. 

ಸಭೆಯಲ್ಲಿ ಹಾಜರಿದ್ದ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ, ಕವಿತೆಯ ರಚನೆಯಲ್ಲಿ ಮಾನವಿಕ ಶಾಸ್ತ್ರಗಳ ಓದಿನ ಅಗತ್ಯವನ್ನು ವಿವರಿಸಿದರು. ಶಿಕ್ಷಕರಾದ ಅಬ್ದುಲ್ ರವೂಫ್ ಸಂವಾದದಲ್ಲಿ ಭಾಗವಹಿಸಿದರು. 

ಸಮುದಾಯ ಕುಂದಾಪುರದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವಾಸುದೇವ ಗಂಗೇರ ವಂದಿಸಿದರು. ಕವಿ ಸಚಿನ್ ಅಂಕೋಲ ಕಾರ್ಯಕ್ರಮ ನಿರೂಪಿಸಿದರು.

Similar News