×
Ad

ಭದ್ರತಾ ಮೂಲಸೌಕರ್ಯ, ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

Update: 2026-06-12 20:56 IST

ಹೊಸದಿಲ್ಲಿ : ರಾಜ್ಯಕ್ಕೆ ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (ಐಆರ್‍ಬಿಎಸ್) ಸೃಷ್ಟಿ, ಪೊಲೀಸ್ ಇಲಾಖೆ ಚಟುವಟಿಕೆಗಳಿಗೆ ಸಿಎಸ್‍ಆರ್ ನಿಧಿ ಬಳಕೆ, ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮೇಲ್ದೆರ್ಜೆ, ಕಾರಾಗೃಹಗಳ ಆಧುನೀಕರಣ ಸೇರಿದಂತೆ ಕರ್ನಾಟಕದ ಭದ್ರತಾ ಮೂಲಸೌಕರ್ಯ ಮತ್ತು ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.

ಶುಕ್ರವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಿಎಂ ಶಿವಕುಮಾರ್, ‘ಕರ್ನಾಟಕ ರಾಜ್ಯ ಪೊಲೀಸ್‍ಗೆ ‘ಪ್ರೆಸಿಡೆಂಟ್ಸ್ ಕಲರ್' ಪ್ರಶಸ್ತಿಯನ್ನು ನೀಡುವ ಕುರಿತಾದ ಪ್ರಸ್ತಾವನೆಯನ್ನು 2024ರ ಮೇ 8ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಅದು ಪರಿಶೀಲನೆಯಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇನ್ನು ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಬೇಕಾಗಿದೆ. ಈ ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ ‘ಪ್ರೆಸಿಡೆಂಟ್ಸ್ ಕಲರ್' ಪ್ರಶಸ್ತಿ ನೀಡಲು ಅನುಮೋದನೆ ನೀಡಬೇಕು ಎಂದು ಕೋರಿದರು.

ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಇನ್ನೂ 2 ಹೆಚ್ಚುವರಿ ಐಆರ್‍ಬಿ ಬೆಟಾಲಿಯನ್‍ಗಳನ್ನು ಸ್ಥಾಪಿಸಲು ಅಂದಾಜು 243ಕೋಟಿ ರೂ.ಗಳ ವೆಚ್ಚದ ಹೊಸ ಪ್ರಸ್ತಾವನೆಯನ್ನು 2025ರ ಫೆಬ್ರವರಿ 4ರಂದು ಸಚಿವಾಲಯಕ್ಕೆ ಕಳುಹಿಸಲಾಗಿದೆ. ಇದಕ್ಕೆ ಮಂಜೂರಾತಿ ನೀಡಬೇಕು. ನಾಲ್ಕು ಪ್ರಮುಖ ನಗರಗಳಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‍ಗಳು ಹಾಗೂ ಸಂವಹನ ಉಪಕರಣಗಳ ಸ್ಥಾಪನೆಗಾಗಿASUMP ಯೋಜನೆಯಡಿ 280ಕೋಟಿ ರೂ.ಗಳ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರಗತಿಯಲ್ಲಿ ಮಂಜೂರಾತಿ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಧಿಯನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕಂಪೆನಿಗಳ ಕಾಯ್ದೆ, 2013ರ ಶೆಡ್ಯೂಲ್ VII ರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳನ್ನು ಸೇರಿಸುವ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಶೀಘ್ರವಾಗಿ ಅನುಮೋದನೆ ನೀಡಬೇಕು. ಬಿಪಿಆರ್‌ಎನ್‍ಡಿಯ ಗ್ಯಾಪ್ ಅನಾಲಿಸಿಸ್ ಮಾರ್ಗಸೂಚಿಗಳ ಪ್ರಕಾರ ಪೆÇಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು 258ಕೋಟಿ ರೂ.ಗಳ ಪ್ರಸ್ತಾವ ಸಲ್ಲಿಸಲಾಗಿದ್ದು, ಇದಕ್ಕೆ ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾರಾಗೃಹಗಳ ಆಧುನೀಕರಣ: ಕಾರಾಗೃಹಗಳ ಆಧುನೀಕರಣ ಯೋಜನೆಯಡಿ 2025-26ರ ಆರ್ಥಿಕ ವರ್ಷಕ್ಕೆ (ಸಿಸಿಟಿವಿ, ವಾಕಿಟಾಕಿ ಮತ್ತು ಇತರ ಭದ್ರತಾ ಉಪಕರಣಗಳ ಖರೀದಿಗೆ) 20ಕೋಟಿ ರೂ. ಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಈ ಮೊತ್ತವನ್ನು ಶೀಘ್ರ ಮಂಜೂರು ಮಾಡಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಗಡುವು ವಿಸ್ತರಣೆ: ಕರ್ನಾಟಕದಲ್ಲಿ ನಿಯಮ 52-A ಅನ್ನು ಅನುಷ್ಠಾನಗೊಳಿಸಲು ಗಡುವನ್ನು ವಿಸ್ತರಿಸುವಂತೆ ಕೋರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಈ ವಿಷಯವನ್ನು ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಅನುಮೋದನೆ ಕೊಡಿಸಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಮುಂದೆ ನಡೆದ ಚರ್ಚೆಗಳ ಅನುಸಾರ, ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೇರಿಸಲುASUMP ಅಡಿಯಲ್ಲಿ 278ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದನ್ನು ಪರಿಗಣಿಸಬೇಕು. ಸೈಬರ್ ಅಪರಾಧಗಳು ಸಮಾಜ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಹಾಗೂ ನಿರಂತರ ಸವಾಲನ್ನು ಒಡ್ಡುತ್ತಿವೆ.

ಇವುಗಳನ್ನು ನಿಗ್ರಹಿಸಲು ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆ ಅಗತ್ಯವಿದ್ದು, ರಾಜ್ಯ ಸರಕಾರವು ಅಂದಾಜು 360ಕೋಟಿ ರೂ.ಗಳ ವೆಚ್ಚದಲ್ಲಿ ‘ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್' ಅನ್ನು ಸ್ಥಾಪಿಸಲು ಉದ್ದೇಶಿಸಿದೆ. ಇದರ ಯೋಜನಾ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ಈ ಉಪಕ್ರಮವನ್ನು ಪರಿಗಣಿಸಿ, ಯೋಜನೆಗೆ ಅನುಮೋದನೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಕೋರಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News