ಸರಕಾರಿ ಹುದ್ದೆ ಅಧಿಕಾರ ಚಲಾವಣೆಗಲ್ಲ, ಜನಸೇವೆಗೆ : ಈಶ್ವರ ಖಂಡ್ರೆ
ಬೆಂಗಳೂರು : ಸರಕಾರಿ ಅಧಿಕಾರಿಗಳ ಹುದ್ದೆ, ಅಧಿಕಾರ ಇರುವುದು ದರ್ಪ ಚಲಾವಣೆಗಲ್ಲ. ಬದಲಾಗಿ ಅದು ಜನಸೇವೆ ಮಾಡಲು ಸಿಕ್ಕಿರುವ ಅವಕಾಶ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಶನಿವಾರ ಕಲ್ಯಾಣ ಕರ್ನಾಟಕ ವೃಂದದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಹೊಸದಾಗಿ ನೇಮಕಗೊಂಡಿರುವ 66 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ 5927 ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅನ್ನು ಅಲ್ಲಿನ ಅಧಿಕಾರಿಗಳು ಸ್ವಾರ್ಥ ಮರೆತು, ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರತಿ ಗ್ರಾಮವೂ ಆದರ್ಶ ಗ್ರಾಮವಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ನಗರ, ಪಟ್ಟಣಗಳಲ್ಲಿರುವಂತೆ ಗ್ರಾಮಗಳಲ್ಲೂ ಮೂಲಭೂತ ಸೌಕರ್ಯ ನೀಡಿದರೆ ವಲಸೆ ತಡೆಯಲು ಸಾಧ್ಯವಾಗುತ್ತದೆ. ಗ್ರಾಮಗಳ ಅಭಿವೃದ್ಧಿಯೂ ಆಗುತ್ತದೆ, ನಗರಗಳ ಮೇಲಿನ ಒತ್ತಡವೂ ತಗ್ಗುತ್ತದೆ. ಜತೆಗೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಗ್ರಾಮೀಣ ವಸತಿ, ಇ-ಸ್ವತ್ತು ಮೊದಲಾದ ಕಾರ್ಯಗಳನ್ನು ನಿಷ್ಠೆಯಿಂದ, ವಿಳಂಬವಿಲ್ಲದೆ ಮಾಡಬೇಕು ಅವರು ಸೂಚನೆ ನೀಡಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿಯೂ ಪಂಚಾಯತಿ ಅಧಿಕಾರಿಗಳ ಮೇಲಿದೆ. ಶತಮಾನಗಳ ಶಾಪದಿಂದ ಮತ್ತು ದಬ್ಬಾಳಿಕೆಯಿಂದ ತೀವ್ರ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜನರ ನೋವು ನಿಮಗೆ ಅರಿವಿದೆ. ಹೀಗಾಗಿ, ಈ ಭಾಗದ ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದ ಅವರು, ಉಳಿಕೆ ವೃಂದದಲ್ಲಿ 150 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾಗಿದ್ದು, 3 ತಿಂಗಳ ಒಳಗಾಗಿ ವೈದ್ಯಕೀಯ ಪರೀಕ್ಷೆ, ಮೂಲ ಪ್ರಮಾಣ ಪತ್ರಗಳ ಪರಿಶೀಲನೆ ಪ್ರಕ್ರಿಯೆ ಮುಗಿಸಿ ನೇಮಕಾತಿ ಪತ್ರ ನೀಡಲಾಗುವುದು ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಸೇರಿದಂತೆ ಪ್ರಮುಖರಿದ್ದರು.