×
Ad

ಕರ್ನಾಟಕಕ್ಕೆ ಬೇಕಿರುವುದು ಕಾಂಗ್ರೆಸ್ ಸರಕಾರದ ಸಂಪೂರ್ಣ ಬದಲಾವಣೆ : ಆರ್.ಅಶೋಕ್

Update: 2026-05-27 22:11 IST

ಬೆಂಗಳೂರು : ಕರ್ನಾಟಕಕ್ಕೆ ಇಂದು ಬೇಕಿರುವುದು ಕೇವಲ ಮುಖ್ಯಮಂತ್ರಿ ಬದಲಾವಣೆ ಅಲ್ಲ. ಈ ಜನವಿರೋಧಿ ಕಾಂಗ್ರೆಸ್ ಸರಕಾರದ ಸಂಪೂರ್ಣ ಬದಲಾವಣೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದಲ್ಲಿ ಆಡಳಿತ ಎನ್ನುವುದು ಸಂಪೂರ್ಣ ಮರೀಚಿಕೆಯಾಗಿದೆ. ಅಭಿವೃದ್ಧಿ, ಜನಸಮಸ್ಯೆ, ರೈತರ ಸಂಕಷ್ಟ, ಯುವಕರ ಭವಿಷ್ಯ, ಇವೆಲ್ಲವೂ ಗೌಣವಾಗಿದೆ, ‘ಕುರ್ಚಿ ಯಾರಿಗೆ?’ ಎನ್ನುವ ಒಂದೇ ಪ್ರಶ್ನೆ ಸರಕಾರವನ್ನು ನುಂಗಿಬಿಟ್ಟಿದೆ ಎಂದು ಟೀಕಿಸಿದ್ದಾರೆ.

‘ಅಧಿಕಾರ ಹಂಚಿಕೆ’ ಎಂಬ ಪ್ರಹಸನ ಈಗ ಬೀದಿ ನಾಟಕದ ಮಟ್ಟಕ್ಕೆ ಇಳಿದಿದೆ. ಎಗ್ಗಿಲ್ಲದೆ ನಡೆಯುತ್ತಿರುವ ಕುರ್ಚಿ ಕದನ ಇಡೀ ಕರ್ನಾಟಕದ ಮಾನವನ್ನು ದೇಶದ ಮುಂದೆ ಹರಾಜು ಹಾಕುತ್ತಿದೆ. ಪ್ರಜಾಸೌಧದಲ್ಲಿ ಆಡಳಿತದ ಚರ್ಚೆ ಇಲ್ಲ… ಬರಿ ಅಧಿಕಾರದ ಲೆಕ್ಕಾಚಾರ ಮಾತ್ರ ಎನ್ನುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಒಂದೇ. ಸಿದ್ದರಾಮಯ್ಯನವರೇ ಮುಂದುವರಿಯಲಿ, ಡಿ.ಕೆ.ಶಿವಕುಮಾರ್ ಬರಲಿ ಅಥವಾ ಮತ್ತೊಬ್ಬರನ್ನು ಕೂರಿಸಲಿ… ಈ ದಿವಾಳಿ ಕಾಂಗ್ರೆಸ್ ಸರಕಾರದಿಂದ ಕನ್ನಡಿಗರಿಗೆ ನಯಾ ಪೈಸೆ ಪ್ರಯೋಜನವಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.

ಏಕೆಂದರೆ ಇವರಿಗೆ: ರಾಜ್ಯದ ಅಭಿವೃದ್ಧಿಯ ಬಗ್ಗೆ ದೃಷ್ಟಿಯಿಲ್ಲ. ರೈತರ ಕಣ್ಣೀರಿನ ಬಗ್ಗೆ ಕಾಳಜಿಯಿಲ್ಲ. ಯುವಕರ ಭವಿಷ್ಯದ ಬಗ್ಗೆ ಚಿಂತೆಯಿಲ್ಲ. ಜನರ ಸಮಸ್ಯೆಗಳ ಬಗ್ಗೆ ಉತ್ತರದಾಯಿತ್ವವೇ ಇಲ್ಲ. ಇವರಿಗೆ ಇರುವುದು ಒಂದೇ ಅಜೆಂಡಾ: ಕುರ್ಚಿ, ಅಧಿಕಾರ, ಲೂಟಿ ಮತ್ತು ಸ್ವಾರ್ಥ ರಾಜಕಾರಣ ಎಂದು ಅವರು ದೂರಿದ್ದಾರೆ.

ಕರ್ನಾಟಕದ ಜನರ ಸಹನೆಯನ್ನು ಕಾಂಗ್ರೆಸ್ ದುರ್ಬಲತೆ ಎಂದು ಭಾವಿಸಬಾರದು. ಕನ್ನಡಿಗರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಒಳಜಗಳದಲ್ಲಿ ಮುಳುಗಿರುವ ಈ ಜನವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News