ಪರಿಸರ ಉಳಿವಿಗಾಗಿ ಎಲ್ಲರೂ ಕೈಜೋಡಿಸಿ: ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ
ಬಳ್ಳಾರಿ/ಕಂಪ್ಲಿ: ಪರಿಸರವನ್ನು ಅರ್ಥ ಮಾಡಿಕೊಂಡು ಅದರ ಉಳಿವಿಗಾಗಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಪರಿಸರ ಜೊತೆಗೆ ನೆಲ, ಜಲ ಸಂರಕ್ಷಣೆ ಮಾಡಲು ಸಾಧ್ಯ ಎಂದು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಎಸ್ಪಿ ಚಾರಿಟೇಬಲ್ ಫೌಂಡೇಶನ್ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳ ವಿತರಣೆ ಮತ್ತು ಎಸ್ಪಿ ಕೋಚಿಂಗ್ ಸೆಂಟರ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವ ಜೊತೆಗೆ ದಿವ್ಯ ಸಾನಿಧ್ಯದೊಂದಿಗೆ ಆರ್ಶೀವಚನ ನೀಡಿ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ಗುಣಮಟ್ಟದ ಪರಿಸರ ನಾಶವಾಗುತ್ತಿದೆ. ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಮನುಷ್ಯ ಬದುಕು ನಶ್ವರವಾಗುವ ಜೊತೆಗೆ ಪ್ರಾಣಿ, ಪಕ್ಷಿಗಳ ಜೀವಕ್ಕೂ ಕಂಟಕ ಎದುರಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು, ಹೆಮ್ಮರವಾಗಿ ಬೆಳೆಸಿ, ಉತ್ತಮ ಪರಿಸರಕ್ಕೆ ಮುನ್ನುಡಿ ಬರೆಯಬೇಕಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಪರಿಸರ ಉಳಿವಿಗೆ ಮುಂದಾಗಬೇಕು. ಬಡ ವಿದ್ಯಾರ್ಥಿಗಳಿಗೆ ಫೌಂಡೇಶನ್ ಉಚಿತ ತರಬೇತಿ ನೀಡುವ ಜೊತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಧೈರ್ಯ ತುಂಬುವ ಕೆಲಸವನ್ನ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಫೌಂಡೇಶನ್ ಸಂಸ್ಥಾಪಕ ಎಚ್ ಪೀರಾವಲಿ ಮಾತನಾಡಿ, ಇಂದಿನ ಜಾಗತಿಕ ತಾಪಮಾನ ಹೆಚ್ಚಳದಿಂದ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ಪರಿಸರ ಉಳಿಸಿ ಬೆಳೆಸಬೇಕಾಗ ಅಗತ್ಯತೆ ಇದೆ. ಪರಿಸರವನ್ನ ರಕ್ಷಿಸಬೇಕು. ಪರಿಸರವನ್ನ ನಾವೆಲ್ಲರೂ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೀರಾಪುರದ ಜಡೇಶತಾತ, ಮುಖಂಡರಾದ ಎಂ.ಶೇಖಣ್ಣ, ಯಳ್ಳಾರ್ತಿ ರಾಘವೇಂದ್ರರೆಡ್ಡಿ, ನಾಗರೆಡ್ಡಿ, ಯಮನೂರಪ್ಪ, ಹುಸೇನ್ ಭಾಷಾ, ವೀರೇಶ್ ಸೇರಿದಂತೆ ಅನೇಕರಿದ್ದರು.