ಕಂಪ್ಲಿಯಲ್ಲಿ ಖ್ವಾಜಾಮೀನ್ ಸಾಹೇಬ್ ಉರೂಸ್ ಸಂಭ್ರಮ
ಬಳ್ಳಾರಿ/ಕಂಪ್ಲಿ: ಸ್ಥಳೀಯ 2ನೇ ವಾರ್ಡಿನ ಲಕ್ಷ್ಮೀ ಟಾಕೀಸ್ ಬಳಿಯಲ್ಲಿರುವ ಹಝರತ್ ಸೈಯದ್ ಷಾ ಖ್ವಾಜಾ ಪಿರ್ ಮುಹಮ್ಮದ್ ಹುಸೇನಿ (ಅಲ್ ಮಾರುಫ್) ದರ್ಗಾದಲ್ಲಿ ಖ್ವಾಜಾಮೀನ್ ಸಾಹೇಬ್ ಉರೂಸ್ ಸಡಗರ-ಸಂಭ್ರಮದೊಂದಿಗೆ ಜರುಗಿತು.
ಈ ಹಿನ್ನೆಲೆಯಲ್ಲಿ ದರ್ಗಾವನ್ನು ಹೂವುಗಳು ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಭಾನುವಾರ ಗಂಧ ಕಾರ್ಯಕ್ರಮವೂ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಶಾಸಕ ಜೆ.ಎನ್.ಗಣೇಶ್ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಾಡಿನಲ್ಲಿ ಮಳೆ, ಬೆಳೆ ಉತ್ತಮವಾಗಲು ಸಹಕಾರಿಯಾಗುತ್ತವೆ. ಅನ್ನದಾತರು ಸೇರಿದಂತೆ ಎಲ್ಲಾ ಸಮುದಾಯದ ಜನರಿಗೆ ಕಲ್ಯಾಣವಾಗಲಿ ಎಂದು ಹಾರೈಸಿದರು. ಧಾರ್ಮಿಕ ಆಚರಣೆಗಳಲ್ಲಿ ತೊಡಗುವುದರಿಂದ ಮಾನಸಿಕ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂದರು.
ಭಕ್ತರಿಗಾಗಿ ಅನ್ನಸಂತರ್ಪಣೆ ವ್ಯವಸ್ಥೆಯೂ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸೈಯದ್ ಷಾ ಖಾಜಾ ಮೈನುದ್ದೀನ್ ಖಾದ್ರಿ, ದರ್ಗಾ ಸಮಿತಿ ಅಧ್ಯಕ್ಷ ಹುಸೇನ್ ಬಾಷಾ, ಗೌರವಾಧ್ಯಕ್ಷ ನ್ಯಾಮತ್ ಸಾಬ್, ಅಂಜುಮನ್ ಸಮಿತಿ ಅಧ್ಯಕ್ಷ ಅಬ್ದುಲ್ ಕರೀಮ್ ಲಡ್ಡು, ಕಾರ್ಯದರ್ಶಿ ಯು. ಜಹಿರುದ್ದೀನ್, ಖಜಾಂಚಿ ಎ. ಮೌಲಾಹುಸೇನ್, ಸದಸ್ಯರಾದ ಮಸ್ತಾನ್ ವಲಿ ಹಾಗೂ ಮುಖಂಡರಾದ ಹೊಸಕೋಟೆ ಜಗದೀಶ, ವಾಸೀಂ, ಅಕ್ಕಿ ಜಿಲಾನ್ ಸೇರಿದಂತೆ ವಿವಿಧ ಸಮುದಾಯದ ಭಕ್ತರು ಭಾಗವಹಿಸಿದ್ದರು.