Bengaluru | ಪಾದಚಾರಿ ಮಾರ್ಗ ಅತಿಕ್ರಮಣ ಆರೋಪ: ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೇ ದೂರು
ಶಾಲಿನಿ ರಜನೀಶ್
ಬೆಂಗಳೂರು: ತಮ್ಮ ಮನೆ ಮುಂದೆ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ ಆರೋಪದಡಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಅವರ ಪತಿ ರಜನೀಶ್ ಗೋಯಲ್ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್)ಗೆ ದೂರು ಸಲ್ಲಿಸಲಾಗಿದೆ.
ಇಲ್ಲಿನ ಎಚ್ಎಸ್ಆರ್ ಲೇಔಟ್ನ ಎಂಸಿಎಚ್ಎಸ್ ಬಡಾವಣೆಯ ಆರನೆ ಸೆಕ್ಟರ್ ನಲ್ಲಿ ಶಾಲಿನಿ ರಜನೀಶ್ ದಂಪತಿ ವಾಸವಾಗಿದ್ದು, ಬಿಡಿಎ ಮಂಜೂರು ಮಾಡಿರುವ ಮನೆಯ ಮುಂದಿನ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ದೂರು ನೀಡಿದ್ದಾರೆ.
ಬಿಡಿಎಯಿಂದ ಶಾಲಿನಿ ರಜನೀಶ್ ಅವರಿಗೆ ಮನೆ ಮಂಜೂರಾಗಿತ್ತು. ಆದರೆ, ಬಿಡಿಎ ನಿಯಮಗಳ ಪ್ರಕಾರ, ಮಂಜೂರಾದ ಮನೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿ, ಅವರು ಮನೆಯಿಂದ ಮಾಸಿಕ ಬಾಡಿಗೆ ಪಡೆಯುತ್ತಿದ್ದಾರೆ. ಮಂಜೂರಾದ ಖಾತಾ ಗಡಿಯನ್ನೂ ಮೀರಿ ಅತಿಕ್ರಮಣ ಮಾಡಲಾಗಿದ್ದು, ಒತ್ತುವರಿ ಜಾಗದಲ್ಲಿ ಶಾಶ್ವತವಾದ ಸ್ಟೀಲ್-ಫ್ರೇಮ್ ರಚನೆಯನ್ನು ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಈ ಸಂಬಂಧ ಪರಿಶೀಲಿಸಿ, ರಜನೀಶ್ ಗೋಯಲ್ ಹಾಗೂ ಶಾಲಿನಿ ರಜನೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.