ಬೀದರ್| ಕರ್ನಾಟಕ ಆರ್ ಟಿಐ ಕಾರ್ಯಕರ್ತರ ಸಂಘದ ಪ್ರಥಮ ಜಿಲ್ಲಾ ಸಮ್ಮೇಳನ; ಪದಾಧಿಕಾರಿಗಳ ಆಯ್ಕೆ
ಬೀದರ್ : 2005ರಲ್ಲಿ ಜಾರಿಯಾದ ಮಾಹಿತಿ ಹಕ್ಕು ಕಾಯ್ದೆಯಿಂದ ಸಾಮಾನ್ಯ ನಾಗರಿಕರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕು ದೊರೆತಿದೆ. ಆದರೆ, ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ಮಾಹಿತಿ ನೀಡದೆ ಜನರಿಗೆ ತೊಂದರೆ ಉಂಟು ಮಾಡಲಾಗುತ್ತಿದೆ ಎಂದು ಕರ್ನಾಟಕ ಆರ್ ಟಿಐ ಕಾರ್ಯಕರ್ತರ ಸಂಘದ ರಾಜ್ಯಾಧ್ಯಕ್ಷ ಬಾಬುರಾವ್ ಹೊನ್ನಾ ಆರೋಪಿಸಿದರು.
ನಗರದ ಸ್ಟಾರ್ ಲಾಡ್ಜ್ ಆವರಣದಲ್ಲಿ ರವಿವಾರ ಕರ್ನಾಟಕ ಆರ್ ಟಿಐ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿಯ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾಹಿತಿ ಕೇಳುವ ನಾಗರಿಕರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸಂಫದ ರಾಜ್ಯ ಪ್ರಧಾನ ಕಾರ್ಯದರ್ಶಿ ಘಾಳೆಪ್ಪ ಸೋರಳ್ಳಿ ಮಾತನಾಡಿ, ಬ್ರೀಮ್ಸ್ ಆಸ್ಪತ್ರೆ ಹಾಗೂ ರೈಲ್ವೆ ಇಲಾಖೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಪನಸಾಲೆ ಜನವಾಡ ಅವರು ಮಾತನಾಡಿ, ಆರ್ ಟಿ ಐ ಕಾರ್ಯಕರ್ತರು ಸಂಘಟಿತರಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿ, ಅರಣ್ಯ ಇಲಾಖೆ ಹಾಗೂ ಅಂಚೆ ಇಲಾಖೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಮ್ಮೇಳನದಲ್ಲಿ ಕರ್ನಾಟಕ ಆರ್ ಟಿ ಐ ಕಾರ್ಯಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಜೈಶೀಲಕುಮಾರ್, ಉಪಾಧ್ಯಕ್ಷರಾಗಿ ಪಪ್ಪುರಾಜ್ ಮೇತ್ರೆ, ಸಲ್ಮಾನ್ ಇಜಾಜ್ ಖಾನ್ ಹಾಗೂ ಶಾಹ್ ಮುಬಾಶೀರ್ ಇಸ್ಲಾಂ, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಶಾಹ್, ಜಂಟಿ ಕಾರ್ಯದರ್ಶಿಗಳಾಗಿ ಅಬ್ದುಲ್ ಖಾಲೀದ್ ಹಾಗೂ ಶೇಖ್ ಅಮ್ಜದ್ ಪಾಶಾ, ಖಜಾಂಚಿಯಾಗಿ ಶಫಾಯತ್ ಅಲಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿಣಿ ಸದಸ್ಯರಾಗಿ ಅಬ್ದುಲ್ ಶಮಿ ಅಲ್ಲಿಮೋದ್ದೀನ್, ಗುಂಡಪ್ಪ ಜ್ಯೋತಿ, ಅರುಣಕುಮಾರ್, ರವಿ ಬನಸುಡೆ ಚಿದ್ರಿ, ಸೂರ್ಯಕಾಂತ್, ಚಂದ್ರಕಾಂತ್, ಚಾಂದೋಬಾ ಹಾಗೂ ಸೋನಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಪನಸಾಲೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಘಾಳೆಪ್ಪ ಸೋರಳ್ಳಿ, ರಾಜ್ಯ ಸಮಿತಿ ಸದಸ್ಯ ಪ್ರಭು ಹೊಚ್ಚಕನಳ್ಳಿ ಸೇರಿದಂತೆ ಇತರರು ಇದ್ದರು. ನಜೀರ್ ಅಹ್ಮದ್ ಚೊಂಡಿ ನಿರೂಪಿಸಿ ವಂದಿಸಿದರು.