Bidar | ರೈಲ್ವೆ ಹಳಿ ಅತಿಕ್ರಮಿಸಿದರೆ ಕಠಿಣ ಕ್ರಮ : ಸಾರ್ವಜನಿಕರಿಗೆ ರೈಲ್ವೆ ಪೊಲೀಸರ ಎಚ್ಚರಿಕೆ

ಪ್ರಸಕ್ತ ವರ್ಷದ ಜುಲೈ ಅಂತ್ಯದವರೆಗೆ 657 ಜನರ ವಿರುದ್ಧ ಪ್ರಕರಣ ದಾಖಲು, 3,28,500 ರೂ. ದಂಡ

Update: 2026-08-02 23:08 IST

ಬೀದರ್: ರೈಲ್ವೆ ಹಳಿಗಳನ್ನು ಅಕ್ರಮವಾಗಿ ದಾಟುವುದು, ಚಲಿಸುವ ರೈಲುಗಳ ಮೇಲೆ ಕಲ್ಲು ತೂರುವುದು ಹಾಗೂ ರೈಲು ಹಳಿಗಳ ಮೇಲೆ ಕಲ್ಲು ಅಥವಾ ಇತರ ವಸ್ತುಗಳನ್ನು ಇಡುವಂತಹ ಅಪಾಯಕಾರಿ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಕೆಲವರು, ವಿಶೇಷವಾಗಿ ವಿದ್ಯಾರ್ಥಿಗಳು, ಮೋಟಾರ್ ಸೈಕಲ್‌ಗಳೊಂದಿಗೆ ರೈಲ್ವೆ ಹಳಿಗಳನ್ನು ಅತಿಕ್ರಮಿಸಿ ಅಪಘಾತಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಕೃತ್ಯಗಳು ರೈಲ್ವೆ ಕಾಯ್ದೆಯ ಸೆಕ್ಷನ್ 147 ಮತ್ತು 153ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಇಲಾಖೆ ತಿಳಿಸಿದೆ.

ಅದೇ ರೀತಿ, ಚಲಿಸುವ ರೈಲುಗಳ ಮೇಲೆ ಕಲ್ಲು ತೂರುವುದು ಹಾಗೂ ರೈಲು ಹಳಿಗಳ ಮೇಲೆ ಕಲ್ಲು ಅಥವಾ ಇತರ ವಸ್ತುಗಳನ್ನು ಇರಿಸಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವುದು ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ರೈಲ್ವೆ ಕಾಯ್ದೆಯ ಸೆಕ್ಷನ್ 150, 151, 152 ಮತ್ತು 153ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರು ರೈಲ್ವೆ ಹಳಿಗಳನ್ನು ಅತಿಕ್ರಮಿಸದೆ ರಸ್ತೆ ಮೇಲ್ಸೇತುವೆ, ರಸ್ತೆ ಕೆಳಸೇತುವೆ ಹಾಗೂ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಮೂಲಕವೇ ಸಂಚರಿಸುವಂತೆ ಇಲಾಖೆ ಮನವಿ ಮಾಡಿದೆ. ಜೊತೆಗೆ, ಚಲಿಸುವ ರೈಲುಗಳ ಮೇಲೆ ಕಲ್ಲು ಎಸೆಯುವುದು ಹಾಗೂ ರೈಲು ಹಳಿಗಳ ಮೇಲೆ ಯಾವುದೇ ವಸ್ತುಗಳನ್ನು ಇಡುವಂತಹ ಕೃತ್ಯಗಳಿಂದ ದೂರವಿರಬೇಕು ಎಂದು ಸೂಚಿಸಿದೆ.

ಪ್ರಸಕ್ತ ವರ್ಷದ ಜುಲೈ ಅಂತ್ಯದವರೆಗೆ ರೈಲ್ವೆ ಹಳಿಗಳನ್ನು ಅತಿಕ್ರಮಿಸಿದ 657 ಜನರ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 3,28,500 ರೂ. ದಂಡ ವಿಧಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News