ಔರಾದ್ ತಾಲೂಕಿನಲ್ಲಿ 7.5 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಭು ಚವ್ಹಾಣ್ ಚಾಲನೆ
ಔರಾದ್ : ಕಮಲನಗರ ಹಾಗೂ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 7.5 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಭು ಚೌವ್ಹಾಣ್ ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲಾ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
“ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನಿಗಾ ವಹಿಸಬೇಕು. ಕೆಲಸದಲ್ಲಿ ಯಾವುದೇ ದೋಷ ಕಂಡುಬಂದರೆ ನನ್ನ ಗಮನಕ್ಕೆ ತರಬೇಕು” ಎಂದು ಭರವಸೆ ನೀಡಿದರು.
ಸಾವರಗಾಂವ್ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಬಾವಲಗಾಂವ್ನಲ್ಲಿ 70 ಲಕ್ಷ ರೂ. ವೆಚ್ಚದ ಕೆರೆ ದುರಸ್ತಿ, ಹೊಕ್ರಾಣಾದಲ್ಲಿ 50 ಲಕ್ಷ ರೂ. ವೆಚ್ಚದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಕಟ್ಟಡ, ನಂದಿ ಬಿಜಲಗಾಂವ್ನಲ್ಲಿ 40 ಲಕ್ಷ ರೂ. ವೆಚ್ಚದ ಬ್ರಿಜ್ ಕಂ ಬ್ಯಾರೇಜ್, 32 ಲಕ್ಷ ರೂ. ವೆಚ್ಚದ ಗ್ರಾಮ ವಿಕಾಸ ಯೋಜನೆ ಹಾಗೂ ನಾರಾಯಣಪೂರದಿಂದ ಅಲ್ಲಾಪೂರವರೆಗೆ 5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಇದೇ ವೇಳೆ ಬೋಂತಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೂ ಚಾಲನೆ ನೀಡಲಾಯಿತು.
ರಸ್ತೆ ಕಾಮಗಾರಿ ಪರಿಶೀಲನೆ :
ಯನಗುಂದಾ ಗ್ರಾಮದಿಂದ ಕರಂಜಿ(ಕೆ)–ಸೋಪೂರ್ ಗಡಿವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಶಾಸಕ ಪ್ರಭು ಚೌವ್ಹಾಣ್ ಪರಿಶೀಲಿಸಿದರು. ಕಾಮಗಾರಿಯ ಗುಣಮಟ್ಟ, ಬಳಸುತ್ತಿರುವ ಸಾಮಗ್ರಿಗಳು ಹಾಗೂ ಪ್ರಗತಿ ಕುರಿತು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಮಾಹಿತಿ ಪಡೆದರು.
ಯನಗುಂದಾ, ಕರಂಜಿ(ಬಿ), ರಾಯಪಳ್ಳಿ, ನಾಗಮಾರಪಳ್ಳಿ ಕ್ರಾಸ್, ಚಿಂತಾಕಿ ಕ್ರಾಸ್ ಹಾಗೂ ಕರಂಜಿ(ಕೆ) ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮಹತ್ವದ್ದಾಗಿದೆ. ಗುಣಮಟ್ಟದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರ ಹಣದಲ್ಲಿ ನಡೆಯುವ ಕಾಮಗಾರಿಗಳನ್ನು ನಿಯಮಾನುಸಾರ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಯಾವುದೇ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಮಾರುತಿ ಚವ್ಹಾಣ, ಸತೀಷ್ ಪಾಟೀಲ್, ಶಿವರಾಜ್ ಅಲ್ಮಾಜೆ, ಮೃತ್ಯುಂಜಯ ಬಿರಾದಾರ್, ರವೀಂದ್ರ ರೆಡ್ಡಿ, ರಾಮ್ ರೆಡ್ಡಿ, ಸುರೇಶ್ ಭೋಸ್ಲೆ, ಅರಹಂತ್ ಸಾವಳೆ, ಸುನೀಲ್ ಮೋರ್ಗೆ, ಉದಯ್ ಸೋಲಾಪೂರೆ, ಸಂಜು ಮುರ್ಕೆ, ವಿಲಾಸ್ ರಾಠೋಡ್, ಜಗದೀಶ್ ಪಾಟೀಲ್, ಅನೀಲ್ ಬಿರಾದಾರ್, ವೀರಾ ರೆಡ್ಡಿ ಹಾಗೂ ಬಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.