ಅವೈಜ್ಞಾನಿಕ ಮೀಸಲಾತಿಯಿಂದ ಬಂಜಾರಾ ಸಮಾಜಕ್ಕೆ ಅನ್ಯಾಯ : ಶಾಸಕ ಪ್ರಭು ಚವ್ಹಾಣ ಆರೋಪ
ಒಳ ಮೀಸಲಾತಿ ಹಂಚಿಕೆ ವಿರುದ್ಧ ಬಂಜಾರಾ ಸಮಾಜದ ಬೃಹತ್ ಪ್ರತಿಭಟನೆ
ಬೀದರ್: ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆಯ ಮೂಲಕ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಬಂಜಾರಾ ಸಮುದಾಯ ಭವನದಿಂದ ಝೀರಾ ಫಂಕ್ಷನ್ ಹಾಲ್ವರೆಗೆ ಸಾವಿರಾರು ಸಂಖ್ಯೆಯ ಬಂಜಾರಾ ಸಮಾಜದ ಮುಖಂಡರು, ಮಹಿಳೆಯರು ಹಾಗೂ ಯುವಕರು ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಝೀರಾ ಫಂಕ್ಷನ್ ಹಾಲ್ನಲ್ಲಿ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ, ಕಾಂಗ್ರೆಸ್ ಸರ್ಕಾರ ಬಂಜಾರಾ ಸಮಾಜಕ್ಕೆ ಮೋಸ ಹಾಗೂ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಒಳ ಮೀಸಲಾತಿಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ಜಾರಿಗೊಳಿಸಲಾಗಿದ್ದು, ಬಂಜಾರಾ ಸಮಾಜದ ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿಲ್ಲ ಎಂದು ಹೇಳಿದರು.
ಈ ಹಿಂದೆ ಬಂಜಾರಾ, ಭೋವಿ, ಕೊರಮ ಹಾಗೂ ಕೊರಚ ಸಮಾಜಗಳಿಗೆ ಶೇ.4.5ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ ಈಗ ಈ ಸಮಾಜಗಳೊಂದಿಗೆ ಇನ್ನೂ 59 ಜಾತಿಗಳನ್ನು ಸೇರಿಸುವ ಮೂಲಕ ಎಲ್ಲ ಸಮಾಜಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಜನಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ಕಲಬುರಗಿಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಬೀದರ್ ಬಳಿಕ ಯಾದಗಿರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಈ ಹೋರಾಟ ರಾಜಕೀಯ ಉದ್ದೇಶಕ್ಕಾಗಿ ಅಲ್ಲ, ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿದೆ. ಸಮಾಜದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾದರೆ ನ್ಯಾಯಯುತ ಮೀಸಲಾತಿ ದೊರೆಯಬೇಕು. ನಾವು ಯಾರ ಬಳಿಯೂ ಭಿಕ್ಷೆ ಕೇಳುತ್ತಿಲ್ಲ; ಸಂವಿಧಾನಬದ್ಧ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಒಳ ಮೀಸಲಾತಿಯನ್ನು ಕೂಡಲೇ ಮರುಪರಿಶೀಲಿಸಿ ಎಲ್ಲ ಸಮಾಜಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಗೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ರಾಜ್ಯಾದ್ಯಂತ ಉಗ್ರ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಲಬುರಗಿಯ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, ಬಂಜಾರಾ ಸಮಾಜ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಕಾಂಗ್ರೆಸ್ ನಾಯಕರು ಸಮಾಜದ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಬಂಜಾರಾ ಸಮಾಜ ಸ್ವಾತಂತ್ರ್ಯ ಪೂರ್ವದಿಂದಲೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿಯೇ ಇದ್ದು, ಅದನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪದೇ ಪದೇ ಬಂಜಾರಾ ಸಮಾಜವನ್ನು ನಿರ್ಲಕ್ಷಿಸುತ್ತಿದ್ದು, ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ವೇಳೆ ಬಸವರಾಜ್ ಪವಾರ್ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಣಿಕಂಠ್ ರಾಠೋಡ್, ಲಿಂಬಾ ನಾಯಕ್ ಅಣ್ಣಾರಾವ್ ರಾಠೋಡ್, ತಾನಾಜಿ ರಾಠೋಡ್, ರಾಮಶೆಟ್ಟಿ ಪನ್ನಾಳೆ, ಗುರುನಾಥ್ ರಾಜಗೀರೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಸಚಿನ್ ರಾಠೋಡ್, ಸುಜಿತ್ ರಾಠೋಡ್, ಪ್ರದೀಪ್ ಪವಾರ್, ಗೋಪಾಲಸಿಂಗ್ ರಾಠೋಡ್, ವೀರಶೆಟ್ಟಿ ರಾಠೋಡ್ ಹಾಗೂ ಮಾಣಿಕ್ ಪವಾರ್ ಸೇರಿದಂತೆ ಸಮಾಜದ ಅನೇಕ ಮಹಿಳೆಯರು ಉಪಸ್ಥಿತರಿದ್ದರು. ಭಗುಸಿಂಗ್ ಜಾಧವ್ ನಿರೂಪಿಸಿದರು. ಶಿವಲೀಲಾ ಚಿದ್ರೆ ದೇಶಭಕ್ತಿ ಗೀತೆ ಹಾಡಿದರು.