Gundlupete | ಕಾವೇರಿ ನೀರಿಗಾಗಿ ಕರ್ನಾಟಕ ಕಾವಲು ಪಡೆಯಿಂದ ವಿನೂತನ ಪ್ರತಿಭಟನೆ
ಗುಂಡ್ಲುಪೇಟೆ : ಕರ್ನಾಟಕ ಕಾವಲು ಪಡೆ ವತಿಯಿಂದ ಗುಂಡ್ಲುಪೇಟೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಮುಂಭಾಗ ವಿನೂತನ ಹೋರಾಟ ಮಾಡಲಾಯಿತು. ಕಾವೇರಿ ನೀರಿನ ವಿಚಾರವಾಗಿ ನಿರಂತರವಾಗಿ ಖ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ವಿನೂತನವಾಗಿ ಕೈ ಕಟ್ಟಿ ಬಾಯಿ ಮುಚ್ಚಿ ನಿದ್ರಾವಸ್ಥೆಗೆ ಜಾರುವ ಮುಖಾಂತರ ವಿಭಿನ್ನವಾಗಿ ಪ್ರತಿಭಟನೆ ಮಾಡಿ, ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ, ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರಾಜ್ಯದ ರೈತರು ಹಾಗೂ ಸಾರ್ವಜನಿಕರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಮಾಡ್ರಹಳ್ಳಿ ಸುಭಾಷ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಲುವನ್ನು ಖಂಡಿಸಿದರು.
ಕರವೇ ಜಿಲ್ಲಾ ಕಾರ್ಯದರ್ಶಿ ರಿಯಾಸ್ ಪಾಷ, ಕಾವಲು ಪಡೆಯ ತಾಲ್ಲೂಕು ಕಾರ್ಯದರ್ಶಿ ಎಸ್.ಮುಬಾರಕ್, ವನ್ಯ ಜೀವಿ ಸಂರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಪಿ.ಬಾಲು.ಮಾತನಾಡಿದರು.
ತದನಂತರ ಊಟಿ-ಮೈಸೂರು ಹೆದ್ದಾರಿಯಲ್ಲಿ ಮೌನವಾಗಿ ಮೆರವಣಿಗೆ ಹೋರಟ ಹೋರಾಟಗಾರರು ತಾಲ್ಲೂಕು ಕಚೇರಿಗೆ ತೆರಳಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೋರಾಟದಲ್ಲಿ ಕಾವಲು ಪಡೆ ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಷೀದ್, ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ, ತಾಲ್ಲೂಕು ಉಪಾಧ್ಯಕ್ಷರಾದ ಆರ್.ಮಂಜುನಾಥ್, ಶಿವಕುಮಾರ್, ತಾಲ್ಲೂಕು ಸಂಚಾಲಕರಾದ ಕುಂಜುಟ್ಟಿ, ಟೌನ್ ಅಧ್ಯಕ್ಷರಾದ ಸಾದಿಕ್ ಪಾಷ, ಟೌನ್ ಗೌರವಾಧ್ಯಕ್ಷರಾದ ಶಕೀಲ್, ಟೌನ್ ಸಂಚಾಲಕರಾದ ಮಿಮಿಕ್ರಿರಾಜು, ಜಾಹೀರ್ ಹುಸೇನ್, ಡ್ಯಾನ್ಸರ್ ಪವನ್,ಮಲ್ಲಯ್ಯ ಮಾಸ್ಟರ್, ರಾಚಪ್ಪನಾಯಕ್, ಕರವೇ ಸಂಚಾಲಕರಾದ ನಾಗೇಂದ್ರ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.