ಚಿಕ್ಕಮಗಳೂರು: ಕಾಡಾನೆ ಅನುಮಾನಾಸ್ಪದ ಸಾವು
Update: 2026-07-03 23:15 IST
ಚಿಕ್ಕಮಗಳೂರು: ಆಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಶುಕ್ರವಾರ ವರದಿಯಾಗಿದೆ.
ತಾಲೂಕಿನ ಆಲ್ದೂರು ಅರಣ್ಯ ವಲಯದ ಕುಂದೂರು ಅರಣ್ಯ ಹೆಬ್ಬಾಳಗದ್ದೆಯಲ್ಲಿ ಘಟನೆ ನಡೆದಿದ್ದು, ಹೆಬ್ಬಾಳಗದ್ದೆಯ ಜಮೀನನಲ್ಲಿ ಕಾಡಾನೆ ಮೃತಪಟ್ಟಿರುವುದು ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಲ್ದೂರು ವಲಯದ ಉನ್ನತ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಮೀನಿನ ಸುತ್ತಮುತ್ತ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಸಾವನಪ್ಪಿದೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.