ಮಂಗಳೂರು : ಭೂಮಿ ಹಕ್ಕು ಸೇರಿದಂತೆ ಕೊರಗ ಸಮುದಾಯದ ಬೇಡಿಕೆ ಈಡೇರಿಸಲು ಆಗ್ರಹಿಸಿ ಮೌನ ಜಾಥಾ
ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ
ಮಂಗಳೂರು, ಸೆ.7: ಕರಾವಳಿ ಜಿಲ್ಲೆಗಳ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಪ್ರಮುಖ ಬೇಡಿಕೆಯಾದ ಭೂಮಿ ಹಕ್ಕು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಪರಿಹಾರಕ್ಕೆ ನಿಯಮ ರೂಪಿಸುವಂತೆ ಒತ್ತಾಯಿಸಿ ಕೊರಗ ಪ್ರತಿನಿಧಿಗಳು ಸೋಮವಾರ ದ.ಕ. ಜಿಲ್ಲಾ ಪ್ರಜಾಸೌಧಕ್ಕೆ ಮೌನ ಜಾಥಾ ನಡೆಸಿದರು.
ದ.ಕ. ಜಿಲ್ಲಾ ಕೊರಗರ ಸಂಘದ ವತಿಯಿಂದ ಮಂಗಳೂರಿನ ಪಡೀಲ್ ವೃತ್ತದಿಂದ ಪ್ರಜಾಸೌಧದ ಬಾಗಿಲವರೆಗೆ ಬ್ಯಾನರ್ ಹಿಡಿದುಕೊಂಡು ನೂರಾರು ಮಂದಿ ಕೊರಗರು ಮೌನ ಜಾಥಾ ನಡೆಸಿದರಲ್ಲದೆ, ಸಮುದಾಯದ ನಾಯಕರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿ ಕೊರಗರು ಬುಡಕಟ್ಟು ಪಂಗಡಕ್ಕೆ ಸೇರಿದವರು. ಭಾರತದ ಒಟ್ಟು 75 ಪಿವಿಟಿಜಿ ಬುಡಕಟ್ಟು ಸಮುದಾಯಗಳ ಪಟ್ಟಿಯಲ್ಲಿ ಕೊರಗ ಸಮುದಾಯವೂ ಒಂದು. ದುರ್ಬಲ ಸೂಕ್ಷ್ಮ ಬುಡಕಟ್ಟು (ಪಿವಿಟಿಜಿ) ಎಂದು ಗುರುತಿಸುವ ವೇಳೆ ಕೃಷಿ ಪೂರ್ವ ನಾಗರಿಕತೆ ಅಸ್ತಿತ್ವ, ಕಡಿಮೆಯಾಗುತ್ತಿರುವ ಜನಸಂಖ್ಯೆ, ಅತ್ಯಂತ ಕಡಿಮೆ ಸಾಕ್ಷರತೆ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಅಂಶಗಳನ್ನು ಗಮನಿಸಲಾಗಿದೆ. ಕೊರಗರು ಪ್ರಕೃತಿಯ ಆರಾಧಕರು. ಪ್ರಜ್ಞಾವಂತ ನಾಗರಿಕರ ತುಳಿತ, ಅಸ್ಪೃಶ್ಯತೆ, ಶೋಷಣೆಗೆ ಬಲಿಯಾಗಿ ನಲುಗಿ ಹೋದವರು. ಇಂದಿಗೂ ಸಾಮಾಜಿಕವಾಗಿ ಹಿಂಜರಿಕೆಯನ್ನು ಸಮುದಾಯ ಅನುಭವಿಸುತ್ತಿದೆ. ಕರ್ನಾಟಕ ಕರಾವಳಿಯ ಭವ್ಯ ಸಂಸ್ಕೃತಿ, ಇತಿಹಾಸ, ಪರಂಪರೆಯ ಭಾಗದ ವಾರಸುದಾರರು. ನಮ್ಮ ಸಮುದಾಯ ಶಿಕ್ಷಣ, ಆರೋಗ್ಯ ಮಾತ್ರವಲ್ಲದೆ, ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯವಾಗಿಯೂ ಹಿಂದುಳಿದವರು. ಅಳಿವಿನಂಚಿನಲ್ಲಿರುವ ನಮ್ಮ ಸಮುದಾಯದ ಸಮಗ್ರ ಅಧ್ಯಯನ ನಡೆಸಿರುವ ಡಾ. ಮುಹಮ್ಮದ್ ಫೀರ್ ವರದಿಯಲ್ಲಿ ಪ್ರತಿ ಕೊರಗ ಕುಟುಂಬಗಳಿಗೆ ಕನಿಷ್ಠ 2.5 ಎಕರೆ ಕೃಷಿಗೆ ಭೂಮಿಯನ್ನು ಒದಗಿಸಿ ಪುನರ್ವಸತಿಕಲ್ಪಿಸುವಂತೆ ಶಿಫಾರಸು ಮಾಡಿದೆ. 1994 ರಲ್ಲಿ ಡಾ. ಫೀರ್ ವರದಿಯು ಜಿಲ್ಲಾ ಆಡಳಿತಕ್ಕೆ ಸಲ್ಲಿಕೆಯಾಗಿ ಸುಮಾರು 35 ವರ್ಷಗಳು ಕಳೆದಿವೆ. ಆದರೂ ನಮ್ಮ ಅಭಿವೃದ್ಧಿಗೆ ಪೂರಕವಾಗಿ ವರದಿಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಇದೀಗ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಯ ಒಟ್ಟಿಗೆ ನಮ್ಮ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಶಾಶ್ವತ ಪರಿಹಾರದ ನಿಯಮ ರೂಪಿಸಲು ಸೂಕ್ತ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಮುಖ ಬೇಡಿಕೆಗಳು
ಸಮುದಾಯದ ಅಸ್ತಿತ್ವ ಮತ್ತು ಸ್ವಾವಲಂಬನೆಯ ಬದುಕಿಗಾಗಿ ಮತ್ತು ಸರಕಾರದ ಭೂಮಿ ಆಧಾರಿತ ಅಭಿವೃದ್ಧಿ ಯೋಜನೆಗಳ ಸದ್ಬಳಕೆಗಾಗಿ ಕೃಷಿಗೆ ಭೂಮಿ ಹಂಚಿಕೆ ಮಾಡುವುದು, ಪ್ರತಿ ಕೊರಗ ಕುಟುಂಬಗಳಿಗೆ ಕನಿಷ್ಠ 2.5 ಎಕರೆ ಕೃಷಿ ಯೋಗ್ಯ ಭೂಮಿ ವಿತರಿಸಲು ಮತ್ತು ಪುನರ್ವಸತಿ ಕಾರ್ಯವನ್ನು ಏಕಕಾಲದಲ್ಲಿ ನೆರವೇರಿಸಲು ಸೂಕ್ತ ಕ್ರಮ ಜರುಗಿಸುವುದು.
ಶೋಷಣೆ ಮತ್ತು ಅಸಮಾನತೆಯ ನಡುವೆಯೂ ಶಿಕ್ಷಣ ಪಡೆದಿರುವ ಸಮುದಾಯದ ಯುವ ಜನತೆ ಉದ್ಯೋಗ ಅಭದ್ರತೆಯಿಂದ ಭವಿಷ್ಯದ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸರಕಾರ ಬುಡಕಟ್ಟು ಸಮುದಾಯಗಳಿಗೆ ಶೇ.100 ನೇರ ನೇಮಕಾತಿಯ ಅಡಿಯಲ್ಲಿ ಸರಕಾರಿ ಉದ್ಯೋಗ ಕಲ್ಪಿಸಿಕೊಡುವ ಘೋಷಣೆಯನ್ನು ಈಡೇರಿಸಲು ಸೂಕ್ತ ನಿಯಮ ಜಾರಿಗೊಳಿಸುವುದು.
ಆಹಾರದ ಕೊರತೆಯಿಂದ ಅಪೌಷ್ಠಿಕತೆ, ರಕ್ತ ಹೀನತೆ ಮುಂತಾದ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾವಿನ ಪ್ರಮಾಣ ಹೆಚ್ಚುತ್ತಿರುವ ಅಂಶವನ್ನು ಗಂಭೀರವಾಗಿ ಗಮನಿಸಿದ ಘನ ಸರ್ಕಾರ ಉಚಿತ ಪೌಷ್ಠಿಕ ಆಹಾರವನ್ನು ಜಾರಿಗೊಳಿಸಿದೆ. ಪ್ರಸ್ತುತ ಈ ಯೋಜನೆಯನ್ನು ಆರು ತಿಂಗಳಿನಿಂದ ಹನ್ನೆರಡು ತಿಂಗಳಿಗೆ ವಿಸ್ತರಿಸಿದ್ದು, ಕಳೆದ ಆರು ತಿಂಗಳಿನಿಂದ ವಿತರಣೆಗೆ ಬಾಕಿ ಉಳಿದಿರುವ ಪೌಷ್ಠಿಕ ಆಹಾರವನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ಪ್ರಮುಖರಲ್ಲಿ ದ.ಕ.ಜಿಲ್ಲಾ ಸಂಘದ ಅಧ್ಯಕ್ಷ ಸುಂದರ ಕೊರಗ, ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಬಾಬು ಪಾಂಗಳ, ದ.ಕ. ಜಿಲ್ಲಾ ಸಂಘದ ಕಾರ್ಯದರ್ಶಿ ಶಶಿಕಲಾ ಕೋಡಿಕಲ್, ಉಪಾಧ್ಯಕ್ಷ ಕೊಗ್ಗ ರಮೇಶ್, ಬೆಳ್ತಂಗಡಿ ತಾಲೂಕು ಘಟಕದ ಸಂತೋಷ್, ಸುಳ್ಯದ ರಾಮಚಂದ್ರ, ಉಳ್ಳಾಲದ ಕಮಲ, ಪುತ್ತೂರಿನ ಕುಂಬ್ರ ಬಾಬು, ಕಮಲ ಉಪ್ಪಿನಂಗಡಿ, ಬಂಟ್ವಾಳದ ಮಾಂಕು ಪಚ್ಚನಡ್ಕ, ಕಾರ್ಕಳ ತಾಲೂಕು ಘಟಕದ ಕುಡುಪ ಸಚ್ಚರಿಪೇಟೆ, ಮಂಗಳೂರು ನಗರ ವಲಯ ಘಟಕದ ಬೇಬಿ ಮೊದಲಾದವರು ಉಪಸ್ಥಿತರಿದ್ದರು.
ಪಡೀಲ್ನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧಕ್ಕೆ ಸಭೆಗೆ ಆಗಮಿಸುವ ಸಂದರ್ಭ ಪ್ರವೇಶ ದ್ವಾರದಲ್ಲಿ ಕೊರಗರು ಜಾಥಾ ಮೂಲಕ ಆಗಮಿಸಿದ್ದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು, ಕಾರಿನಿಂದ ಇಳಿದು ಕೊರಗರ ಬಳಿ ತೆರಳಿ ಅವರ ಅಹವಾಲು ಆಲಿಸಿದರು. ಸಮುದಾಯದ ಬೇಡಿಕೆಗಳ ಬಗ್ಗೆ ಸಭೆಯ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಅವರು ಈ ಸಂದರ್ಭ ತಿಳಿಸಿದರು.