ಮಂಗಳೂರು: ಬಿಸಿಸಿಐ ವತಿಯಿಂದ ಸೈಬರ್ ಸೆಕ್ಯೂರಿಟಿ ಮತ್ತು ಜಾಗತಿಕ ಉದ್ಯಮ ಅವಕಾಶಗಳ ಕುರಿತು ವಿಶೇಷ ಸಂವಾದ ಕಾರ್ಯಕ್ರಮ
ಮಂಗಳೂರು: ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗಾಗಿ ಹೋಟೆಲ್ ಓಶಿಯನ್ ಪರ್ಲ್ ನಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಜಾಗತಿಕ ಉದ್ಯಮ ಅವಕಾಶಗಳ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅಡ್ವಾನ್ಸ್ಡ್ ಸೈಬರ್ ಸೆಕ್ಯೂರಿಟಿ ತಜ್ಞ ಸೌಮಿತ್ರ ಸೇನ್, ಚೀನಾದ ಕಾಮಚಿ ಗ್ರೂಪ್ ನ ನಿರ್ದೇಶಕ ಮುಹಮ್ಮದ್ ರಬೀ ರುಕ್ನುದ್ದೀನ್ ಭಾಗವಹಿಸಿ ಉಪನ್ಯಾಸ ನೀಡಿದರು.
ʼದೈನಂದಿನ ಬದುಕಿನಲ್ಲಿ ಸೈಬರ್ ಸೆಕ್ಯುರಿಟಿಯ ಮಹತ್ವʼದ ಕುರಿತು ಮಾತನಾಡಿದ ಸೌಮಿತ್ರ ಸೇನ್, ಮುಂದಿನ 15 ವರ್ಷಗಳಲ್ಲಿ ಭಾರತವು ಡಿಜಿಟಲ್ ಯುಗದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಲಿದೆ ಹಾಗೂ ಇನ್ನು ಕೇವಲ ಮೂರು ದಶಕಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆದು ನಿಲ್ಲಲಿದೆ ಎಂದು ಭವಿಷ್ಯ ನುಡಿದರು.
ಗುರುತು ಕಳವು (identity theft) ಹಾಗೂ ಡೀಪ್ ಫೇಕ್ ದುರುಪಯೋಗವನ್ನು ಎತ್ತಿ ತೋರಿಸಿದ ಅವರು, ಕೃತಕ ಬುದ್ಧಿಮತ್ತೆಯ (AI) ಯುಗದಲ್ಲಿ ಇವು ಪ್ರಮುಖ ಬೆದರಿಕೆಗಳಾಗಿವೆ ಎಂದು ಹೇಳಿದರು.
ವಿವಿಧ ಬಗೆಯ ಸೈಬರ್ ದಾಳಿಯ ಕುರಿತು ವಿವರಿಸಿದ ಸೌಮಿತ್ರ ಸೇನ್, ಸುರಕ್ಷಿತವಾಗಿರಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದರು. ‘ಝೀರೋ ಟ್ರಸ್ಟ್ ಸೆಕ್ಯೂರಿಟಿ’ಯನ್ನು ಅಳವಡಿಸಿಕೊಳ್ಳುವಂತೆ ಸಭಿಕರಿಗೆ ಸಲಹೆ ನೀಡಿದ ಅವರು, ಜಾಗತಿಕ ಭೌಗೋಳಿಕ ರಾಜಕಾರಣದಲ್ಲಿ ಸೈಬರ್ ಯುದ್ಧ ಮಹತ್ವದ ಸಾಧನವಾಗಿ ಬದಲಾಗಿದೆ ಎಂಬುದರತ್ತ ಬೊಟ್ಟು ಮಾಡಿದರು.
ಮುಹಮ್ಮದ್ ರಬೀ ರುಕ್ನುದ್ದೀನ್ ಅವರು ‘ಜಾಗತಿಕ ವ್ಯಾಪಾರ ಅವಕಾಶಗಳ’ ಕುರಿತು ಸಭಿಕರಿಗೆ ಉಪನ್ಯಾಸ ನೀಡಿದರು.
ಭಾರತ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಾಗಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಇನ್ನಷ್ಟು ಶಕ್ತಿಯುತ ಅರ್ಪಣಾ ಮನೋಭಾವ ಮತ್ತು ಬ್ರಾಂಡಿಂಗ್ ಕಾರ್ಯತಂತ್ರಗಳ ಅಗತ್ಯತೆ ಇದೆ ಎಂದು ರುಕ್ನುದ್ದೀನ್ ಹೇಳಿದರು.
ಉತ್ಪನ್ನಗಳನ್ನು ಮಾರುಕಟ್ಟೆಯ ಮೌಲ್ಯದೊಂದಿಗೆ ಗುರುತಿಸುವಂತೆ ಉದ್ಯಮಿಗಳಿಗೆ ಸಲಹೆ ನೀಡಿದ ಅವರು, ಬ್ರಾಂಡ್ ಒಂದನ್ನು ನಿರ್ಮಿಸಿ, ಅದನ್ನು ಜಾಗತಿಕ ಖರೀದಿದಾರರ ಬಳಿಗೆ ತೆಗೆದುಕೊಂಡು ಹೋಗಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಬ್ಯಾರಿ ಸಮುದಾಯದ ಉದ್ಯಮಶೀಲತೆಯನ್ನು ಶ್ಲಾಘಿಸಿದರು.
ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಸ್ವಾಗತ ಭಾಷಣ ಮಾಡಿದರು. ಖಜಾಂಚಿ ಮನ್ಸೂರ್ ಅಹ್ಮದ್ ವಂದಿಸಿದರು. ಬಿಸಿಸಿಐ ಕಾರ್ಯದರ್ಶಿ ನಿಸಾರ್ ಮುಹಮ್ಮದ್ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.
ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಬ್ದುಲ್ಲಾ ಮೋನು ಮೊಯಿದ್ದೀನ್ ಹಾಗೂ ಅಬ್ದುಲ್ ರವೂಫ್ ಸುಲ್ತಾನ್ ಈ ವೇಳೆ ಉಪಸ್ಥಿತರಿದ್ದರು.