×
Ad

ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್‌ಗೆ ಗೆಲುವು; ಅಮೇರಿಕಾದ ಅಧಿಪತ್ಯ ಅಂತ್ಯ: ಹಿರಿಯ ಚಿಂತಕ ಶಿವಸುಂದರ್

► "ಸಾಮ್ರಾಜ್ಯಶಾಹಿ ವಿರೋಧಿ ಪ್ರತಿರೋಧದ ಯಶಸ್ಸು ಹಾಗೂ ಬದಲಾಗುತ್ತಿರುವ ಜಗತ್ತು?" ವಿಚಾರ ಸಂಕಿರಣ

Update: 2026-07-09 19:49 IST

ಮಂಗಳೂರು, ಜು.9: ಅಮೇರಿಕಾ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ಇತ್ತೀಚೆಗೆ ನಡೆದ ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್ ಗೆಲುವು ಸಾಧಿಸಿದೆ. ಅಮೇರಿಕಾದ ಅಧಿಪತ್ಯವೂ ಅಂತ್ಯಗೊಂಡಿದೆ ಎಂದು ಸಾಮಾಜಿಕ ಹೋರಾಟಗಾರ, ಹಿರಿಯ ಚಿಂತಕ, ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.

ಸಮನ್ವಯ ಮಂಗಳೂರು ಇದರ ವತಿಯಿಂದ "ಸಾಮ್ರಾಜ್ಯಶಾಹಿ ವಿರೋಧಿ ಪ್ರತಿರೋಧದ ಯಶಸ್ಸು ಹಾಗೂ ಬದಲಾಗುತ್ತಿರುವ ಜಗತ್ತು ?" ಎಂಬ ವಿಷಯದ ಕುರಿತು ನಗರದ ಬಲ್ಮಠ ಸಹೋದಯ ಹಾಲ್‌ನಲ್ಲಿ ಗುರುವಾರ ನಡೆದ ವಿಚಾರ ಸಂಕಿರಣ-ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ತೈಲದ ಮೇಲೆ ಕಣ್ಣಿಟ್ಟಿದ್ದ ಅಮೇರಿಕಾ-ಇಸ್ರೇಲ್ ರಾಷ್ಟ್ರವು ಇರಾನನ್ನು ಸುಲಭವಾಗಿ ಮಣಿಸಬಹುದು ಎಂದು ಭಾವಿಸಿ ಯುದ್ಧ ಸಾರಿತು. ಇರಾನ್‌ನ ಭಿನ್ನಮತೀಯ ಗುಂಪನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿತ್ತು. ಆದರೆ ಇರಾನ್, ಚೀನಾ ಮತ್ತು ರಷ್ಯಾದ ಸಹಕಾರದಿಂದ ಅಮೇರಿಕಾ-ಇಸ್ರೇಲ್‌ಗೆ ಸಡ್ಡು ಹೊಡೆದು ನಿಂತಿತು. ಅಂತಿಮವಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಧಾನಕ್ಕೆ ಹಾತೊರೆಯುವ ಮೂಲಕ ವಸ್ತುಶಃ ಸೋಲನ್ನೊಪ್ಪಿಕೊಂಡಿದ್ದಾರೆ. ಅದರ ಅಧಿಪತ್ಯವು ಅವಸಾನದ ಅಂಚಿಗೆ ತಲುಪಿವೆ ಎಂದು ಶಿವಸುಂದರ್ ಹೇಳಿದರು.

ಇರಾನ್‌ನ ಭಿನ್ನಮತೀಯ ಗುಂಪು ಕೂಡ ರಾಷ್ಟ್ರ ಮೊದಲು ಎಂದು ಭಾವಿಸಿ ಜನಚಳುವಳಿಯ ಜೊತೆ ಕೈಜೋಡಿ ಸಿತು. ಇದೀಗ ಸಂಪೂರ್ಣ ಗೆಲುವಿನ ನಿಟ್ಟಿನಲ್ಲಿ ಮತ್ತೆ ಅಮೇರಿಕಾ-ಇಸ್ರೇಲ್‌ನ ದಾಳಿಗೆ ಪ್ರತಿರೋಧ ತೋರುತ್ತಿವೆ. ಈ ಪ್ರತಿರೋಧ ಮತ್ತು ಗೆಲುವು ಕೇವಲ ರಾಜಕೀಯ-ಸೈನಿಕ ಗೆಲುವು ಅಲ್ಲ, ಇದು ನೈತಿಕ ಗೆಲುವೂ ಕೂಡ ಆಗಿದೆ. ಇರಾನ್ ಇಂತಹ ಪ್ರತಿರೋಧ ಒಡ್ಡಬಹುದು ಎಂದು ಅಮೇರಿಕಾ-ಇಸ್ರೇಲ್ ಯಾವತ್ತೂ ಕೂಡ ಭಾವಿಸಿರಲಿಲ್ಲ. ಅಮೇರಿಕಾದ ಎಲ್ಲಾ ಲೆಕ್ಕಾಚಾರಗಳು ಕೂಡ ತಲೆಕೆಳಗಾಗಿವೆ ಎಂದು ಶಿವಸುಂದರ್ ನುಡಿದರು.

ವೆನಿಝುವೆಲಾ ದೇಶದ ಚುನಾಯಿತ ಅಧ್ಯಕ್ಷರನ್ನು ರಾತ್ರೋರಾತ್ರಿ ಬಂಧಿಸಿದ್ದ ಡೊನಾಲ್ಡ್ ಟ್ರಂಪ್ ಇರಾನನ್ನು ಕೂಡ ಸುಲಭದಲ್ಲಿ ಮಣಿಸಬಹುದು ಎಂದು ಭಾವಿಸಿತ್ತು. ಆದರೆ ಇರಾನ್ ತೀವ್ರ ಪ್ರತಿರೋಧ ಒಡ್ಡುವ ಮೂಲಕ ಅಮೇರಿಕಾ ದಂತಹ ದೈತ್ಯ ರಾಷ್ಟ್ರಕ್ಕೆ ಸವಾಲು ಹಾಕುವುದು ಸುಲಭ ಸಾಧ್ಯ ಎಂದು ತೋರಿಸಿಕೊಟ್ಟಿತ್ತು. ಯಾವ ಸಾಮ್ರಾಜ್ಯ ಶಾಹಿಯೂ ಶಾಶ್ವತವಲ್ಲ. ಅದಕ್ಕೊಂದು ಅಂತ್ಯ ಇದ್ದೇ ಇದೆ. ಜಗ್ಗತಿನ ಪ್ರಭಾವಿ ರಾಷ್ಟ್ರ ಎಂದೇ ಬಿಂಬಿಸಿಕೊಂಡಿರುವ ಅಮೇರಿಕಾದಲ್ಲೇ ಅದು ಆರಂಭಗೊಂಡಿರುವುದನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿವೆ ಎಂದು ಶಿವ ಸುಂದರ್ ಹೇಳಿದರು.

ವಿಶ್ವಸಂಸ್ಥೆ, ನ್ಯಾಟೋವನ್ನು ತನ್ನ ಕೈಮುಷ್ಠಿಯಲ್ಲಿಟ್ಟುಕೊಂಡಿರುವ ಅಮೇರಿಕಾ 1945ರಿಂದ 1994ರ ಮಧ್ಯೆ ಸುಮಾರು 83 ರಾಷ್ಟ್ರಗಳ ಚುನಾಯಿತ ಸರಕಾರವನ್ನು ಬದಲಾಯಿಸಿದೆ. ಬಡರಾಷ್ಟ್ರಗಳ ಮೇಲೆ ನಿರಂತರ ಒತ್ತಡ ಹಾಕಿವೆ, ಯುದ್ಧ ಸಾರಿದೆ. ಇರಾನ್ ಅಣ್ವಸ್ತ್ರ ಹೊಂದಿದೆ ಎಂಬ ನೆಪವೊಡ್ಡಿ ಯುದ್ಧ ಹೂಡಿ ಬಳಿಕ ಸಂಧಾನಕ್ಕೆ ಆತುರತೆ ತೋರಿದೆ. ಅದರಲ್ಲೂ ಟ್ರಂಪ್ 6 ಬಾರಿ ಮಾತುಕತೆಗೆ ಸಿದ್ಧ ಎಂದು ಹೇಳಿಕೊಂಡಿರುವುದು ಅಮೇರಿಕಾ-ಇಸ್ರೇಲ್‌ನ ಸೋಲಿಗೆ ಸಾಕ್ಷಿಯಾಗಿದೆ. ಯುದ್ಧದಲ್ಲಿ ತನ್ನ ಸೇನಾ ನಾಯಕ ಕೊಲ್ಪಟ್ಟರೂ ದೃತಿಗೆಡದ ಇರಾನ್ ಒಂದೇ ದಿನದದಲ್ಲಿ ಹೊಸ ಸೇನಾ ನಾಯಕನ್ನು ನೇಮಿಸಿಕೊಂಡು ಯುದ್ಧ ಮುಂದುವರಿಸಿರುವುದು ಕೂಡ ಇರಾನ್‌ನ ಪರಾಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಿವಸುಂದರ್ ಹೇಳಿದರು.

*ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ಪ್ರಧಾನಿಯನ್ನು ಆಲಿಂಗಿಸಿದ ಒಂದೆರೆಡು ದಿನದಲ್ಲೇ ಮಧ್ಯಪ್ರಾಚ್ಯ ಯುದ್ಧ ಆರಂಭಗೊಂಡಿದೆ. ಅಂದರೆ ನರೇಂದ್ರ ಮೋದಿಗೆ ಯುದ್ಧದ ಮುನ್ಸೂಚನೆ ಸ್ಪಷ್ಟವಾಗಿ ಸಿಕ್ಕಿತ್ತು ಎನ್ನಬಹುದು. ಅಮೇರಿಕಾ - ಇಸ್ರೇಲನ್ನು ಮೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭಾರತೀಯರ ಸ್ವಾಭಿಮಾನವನ್ನು ಒತ್ತೆ ಇಟ್ಟಿದ್ದಾರೆ. ಕಳೆದ 5 ವರ್ಷದಲ್ಲಿ ನರೇಂದ್ರ ಮೋದಿ ಅಮೇರಿಕಾ ಜೊತೆ ಮಾಡಿಕೊಂಡ ಒಪ್ಪಂದದಿಂದ ಭಾರತ ಹೊರಗೆ ಬರಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಅಮೇರಿಕಾ ಸಂದರ್ಭ ಸಿಕ್ಕಾಗಲೆಲ್ಲಾ ಭಾರತವನ್ನು ಅವಮಾನಿಸುತ್ತಿವೆ, ಅನ್ಯಾಯ ಎಸಗುತ್ತಿದೆ. ಆದರೆ ಮೋದಿಗೆ ಬುದ್ಧಿ ಬಂದಂತಿಲ್ಲ. ಪದೇ ಪದೇ ಅಮೇರಿಕಾದ ಜೊತೆ ಅಂಗಲಾಚುತ್ತಿದೆ. ಭಾರತ ಈಗ ಏಷ್ಯಾ ಖಂಡದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಏಕಾಂಗಿ ಯಾಗಿದೆ. ಹಾಗಾಗಿ ಸಾಮ್ರಾಜ್ಯಶಾಹಿಯನ್ನು ಸ್ಪಷ್ಟವಾಗಿ ವಿರೋಧಿಸುವ ಭಾರತದ ಜನಸಾಮಾನ್ಯರು ಯಾವ ನಿಲುವು ತಾಳಬೇಕು ಎಂಬುದಕ್ಕೆ ಕಾಲ ಸನ್ನಿಹಿತವಾಗಿದೆ. ಈ ಸಂದರ್ಭ ಜನ ಚಳುವಳಿ ಮಾಡುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಿವಸುಂದರ್ ಅಭಿಪ್ರಾಯಪಟ್ಟರು.

ಪ್ರಧಾನ ಭಾಷಣದ ಬಳಿಕ ಸಭಿಕರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಹೋರಾಟಗಾರ್ತಿ ಸ್ವರ್ಣಭಟ್ ಉಪಸ್ಥಿತರಿದ್ದರು. ಲೇಖಕ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News