ಕೇಂದ್ರ ಸರಕಾರದ ವೈಫಲ್ಯದಿಂದ ವಿದ್ಯಾರ್ಥಿಗಳು ಬೀದಿಗೆ: ಪದ್ಮರಾಜ್

Update: 2026-07-24 12:52 IST

ಮಂಗಳೂರು, ಜು. 24: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ಕೇಂದ್ರ ಸರಕಾರದ ವೈಫಲ್ಯದಿಂದಾಗಿ ಇಂದು ದೇಶದೆಲ್ಲೆಡೆ ವಿದ್ಯಾರ್ಥಿಗಳು ರಸ್ತೆಗಿಳಿಯುವ ಪರಿಸ್ಥಿತಿ ಬಂದಿದೆ. ಪ್ರತಿಭಟನೆಯ ಸಂದರ್ಭ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ನಡೆಸಿಕೊಂಡ ರೀತಿ ಸರ್ವಾಧಿಕಾರಿ ಧೋರಣೆಯನ್ನು ತೋರಿಸಿದೆ. ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರಕಾರ ಉತ್ತರಿಸಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ನಾಚಿಕೆ, ಮಾನ-ಮರ್ಯಾದೆ ಇದ್ದಲ್ಲಿ ಘಟನೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು ಎಂದರು.

ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿ ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತೇ ಕಂಡಿದೆ. ಪ್ರತಿಭಟನೆಯಲ್ಲಿ ಬಿಜೆಪಿಯ ಗೂಂಡಾಗಳನ್ನು ಬಳಸಿದ್ದು, ಈ ದೃಶ್ಯಗಳು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಅಮೃತಸರದಲ್ಲಿ ನಡೆದ ಬ್ರಿಟಿಷರ ಹತ್ಯಾಕಾಂಡದ ಘಟನೆಗಳನ್ನು ನೆನಪಿಸಿವೆ. ಇವುಗಳನ್ನು ನೋಡುವಾಗಲಾದರೂ ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ ಎಂಬಂತೆ ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳಿಗೆ ವಿದೇಶಗಳಿಂದ ದುಡ್ಡು ಬರುತ್ತಿದೆ. ಭಯೋತ್ಪಾದಕರು ಸೇರಿದ್ದಾರೆ ಎಂಬೆಲ್ಲಾ ಆರೋಪ ಮಾಡುವಾಗ, ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆಯೇ, ಕತ್ತೆ ಕಾಯುತ್ತಿದೆಯೇ, ಗುಪ್ತಚರ ಇಲಾಖೆಗಳು ಕೇವಲ ವಿರೋಧ ಪಕ್ಷದವರನ್ನು ಹಿಮ್ಮೆಟ್ಟಿಸಲು ಮಾತ್ರವೇ ಎಂಬುದಕ್ಕೆ ಉತ್ತರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೆ ಮೌನವಾಗಿದ್ದ ಪ್ರಧಾನಿ ನಿನ್ನೆ ಟ್ವೀಟ್ ಮಾಡಿದ್ದು, ವಿದ್ಯಾರ್ಥಿಗಳು ಈ ದೇಶದ ಆಸ್ತಿ ಎಂದು ಹೇಳುವವರು ಯಾವ ರೀತಿ ನಿರ್ಮೂಲನೆ ಮಾಡುತ್ತಿದ್ದೀರಿ ಎಂಬುವುದು ದೆಹಲಿ ಘಟನೆಗಳಿಂದ ಸಾಬೀತಾಗಿದೆ. ಶಾಂತರೂಪವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಕಾನೂನು ರೀತಿಯಲ್ಲಿ ಹಿಮ್ಮೆಟ್ಟಿಸುವುದು ಸ್ವಾಭಾವಿಕ. ಆದರೆ 'ಬೇಟಿ ಬಚಾವೊ, ಬೇಟಿ ಪಢಾವೊ' ಎನ್ನುವ ನೀವು ವಿದ್ಯಾರ್ಥಿನಿಯರ ಬಟ್ಟೆಗಳನ್ನು ಹರಿದಿರುವುದು, ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣಗಳ ವೀಡಿಯೊ ತುಣುಕುಗಳಿಂದ ಸ್ಪಷ್ಟವಾಗಿದೆ. ವಿದ್ಯಾರ್ಥಿಗಳು ಅಲ್ಲಿ ಸೇನೆ, ಪೊಲೀಸರಲ್ಲಿ ವಿನಂತಿಸಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಯವರು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ, ಶಿಕ್ಷಣ ನೀತಿ ವಿರುದ್ಧ ಸಂವಾದ ನಡೆಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿ ನೀವು ಕಲಿಯಬೇಕಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ 22 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೇಂದ್ರ ಸರಕಾರದ ವೈಫಲ್ಯದ ಫಲ ಹಾಗೂ ಇದೊಂದು ಕೊಲೆ.

2014ರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತ ನಡೆಸುತ್ತಿದೆ. ನೀಟ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಮಂಡಳಿ)ಯನ್ನು ಸ್ಥಾಪನೆ ಮಾಡಲಾಗಿದೆ. ಇದರ ಮೂಲಕ ಈವರೆಗೆ ನೀಟ್ ಸೇರಿದಂತೆ 152 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಪ್ರತಿಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವಾಗ ಸ್ವಾಯತ್ತ ಸಂಸ್ಥೆಯಾದ ಎನ್‌ಟಿಎಯ ವೈಫಲ್ಯ, ಹಗರಣಗಳ ಬಗ್ಗೆ ಮೇಲ್ವಿಚಾರಣೆ, ಆಗಿರುವ ಕ್ರಮ ಏನು ಎಂಬುದನ್ನು ಕೇಂದ್ರ ಸರಕಾರ ಉತ್ತರಿಸಬೇಕು ಎಂದು ಅವರು ಹೇಳಿದರು.

ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳನ್ನು ತಮ್ಮ ದಾಳವಾಗಿ ಉಪಯೋಗಿಸುತ್ತಾರೆ. ಆ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಪದ್ಮರಾಜ್, ಯಾವತ್ತೂ ರಾಜಕೀಯದ ಬಲಿಪಶು ಆಗಬೇಡಿ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಿ, ಟಿ. ಕೆ. ಸುಧೀರ್, ಜಯಶೀಲ ಅಡ್ಯಂತಾಯ, ಪ್ರೇಮನಾಥ್, ಸಮರ್ಥ ಭಟ್ ಉಪಸ್ಥಿತರಿದ್ದರು.

ಭಾರತ ದೇಶ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ನೆಲೆ ನಿಂತಿದೆ. ಅಯೋಧ್ಯೆ ಪವಿತ್ರ ರಾಮಜನ್ಮಭೂಮಿ. ಅಂತಹ ನಂಬಿಕೆಯ ಪ್ರಮುಖ ಕೇಂದ್ರವಾಗಿರುವ ರಾಮ ಮಂದಿರದ ಹೆಸರಿನಲ್ಲಿ ನಾನು ಚಿಕ್ಕವನಿದ್ದಾಗ ಒಂದು ಇಟ್ಟಿಗೆ ಮತ್ತು 1.25 ರೂ.ಗಳನ್ನು ದೇಶದ ಪ್ರತಿಯೊಂದು ಮನೆಗಳಿಂದಲೂ ಸಂಗ್ರಹಿಸಿರುವುದು ನೆನಪಿದೆ. ಅಯೋಧ್ಯೆಯಲ್ಲಿ ಟ್ರಸ್ಟ್‌ನವರು ಮಾಡಿರುವ ಕೋಟ್ಯಂತರ ರೂ. ಮೌಲ್ಯದ ಹಗರಣಗಳಿಗೆ ಎಸ್‌ಐಟಿ ರಚನೆ ಮಾಡಿದರಷ್ಟೇ ಸಾಲದು. ಜನರಿಂದ ಸಂಗ್ರಹಿಸಿದ ದೇಣಿಗೆಯ ಬಗ್ಗೆ ಆಡಿಟ್ ವರದಿಯನ್ನು ಜನರ ಮುಂದಿಡಬೇಕು ಎಂದು ಪದ್ಮರಾಜ್ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News