Hubballi | ಐನೂರು ರೂ. ವಿಚಾರವಾಗಿ ಗಲಾಟೆ: ಆಟೊ ಚಾಲಕನ ಕೊಲೆ
ಈರಣ್ಣ ಹುರಕಡ್ಲಿ |ಶಶಿಧರ ಚನ್ನೊಜಿ
ಹುಬ್ಬಳ್ಳಿ: ಐನೂರು ರೂಪಾಯಿ ಸಾಲದ ವಿಚಾರವಾಗಿ ಇಬ್ಬರೊಳಗೆ ನಡೆದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹುಬ್ಬಳ್ಳಿ ನಗರ ಹೊರವಲಯದಲ್ಲಿ ನಡೆದಿದೆ.
ಹುಬ್ಬಳ್ಳಿ ನಗರದ ಯಲ್ಲಾಪುರ ಓಣಿ ನಿವಾಸಿ ಈರಣ್ಣ ಹುರಕಡ್ಲಿ (45) ಕೊಲೆಯಾದವರು. ಶಶಿಧರ ಚನ್ನೊಜಿ ಕೊಲೆ ಆರೋಪಿ.
ಜೂನ್ 25ರಂದು ಹುಬ್ಬಳ್ಳಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಆಟೋ ರಿಕ್ಷಾ ಚಾಲಕನಾಗಿದ್ದ ಈರಣ್ಣ ಅವರು ಶಶಿಧರ ಬಳಿ 500 ರೂ. ಸಾಲ ಪಡೆದಿದ್ದರು. ಇದೇ ವಿಚಾರವಾಗಿ ಇವರೊಳಗೆ ಜೂ.25ರಂದು ಗಲಾಟೆ ನಡೆದಿದೆ. ಈ ವೇಳೆ ಈರಣ್ಣರ ಮೇಲೆ ಶಶಿಧರ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಈರಣ್ಣರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ರವಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೆಂಡಿಗೇರಿ ಠಾಣಾ ಪೊಲೀಸರು ಆರೋಪಿ ಶಶಿಧರ್ ಚನ್ನೊಜಿಯನ್ನು ಬಂಧಿಸಿದ್ದಾರೆ.