ಬುದ್ಧನ ವೈಜ್ಞಾನಿಕ ಚಿಂತನೆ ಮಾನವಕುಲಕ್ಕೆ ದಾರಿದೀಪ: ಸಿಪಿಐ ಮಹಾದೇವ ದಿಡಿಮನಿ
ಸೇಡಂ: ಸಮಾಜದಲ್ಲಿ ಶಾಂತಿ, ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಭಗವಾನ್ ಬುದ್ಧರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಚಿಂತನೆಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ಸಿಪಿಐ ಮುಖಂಡ ಮಹಾದೇವ ದಿಡಿಮನಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನ ಸಭಾಂಗಣದಲ್ಲಿ ಗುರುವಾರ ಮಹಾಬೋಧಿ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯನು ದ್ವೇಷ, ಅಸಹಿಷ್ಣುತೆ ಮತ್ತು ಮೌಢ್ಯಗಳಿಂದ ದೂರವಿದ್ದು, ಶಾಂತಿ ಹಾಗೂ ಸಹಬಾಳ್ವೆಯ ಮಾರ್ಗದಲ್ಲಿ ನಡೆಯಬೇಕು. ವರ್ಗ ಮತ್ತು ಜಾತಿ ಭೇದಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದ್ದು, ಅವು ನಿರ್ಮೂಲನೆಯಾದಾಗ ಮಾತ್ರ ನಿಜವಾದ ಸಾಮಾಜಿಕ ಶಾಂತಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಭಗವಾನ್ ಬುದ್ಧರ ಶಾಂತಿ ಸಂದೇಶ ಹಾಗೂ ಮಾನವೀಯ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅಗತ್ಯವಿದೆ. ದೇವರ ಮೊರೆ ಹೋಗಿ ಅನಗತ್ಯ ವೆಚ್ಚ ಮಾಡುವ ಬದಲು ಬುದ್ಧರ ತತ್ವಗಳನ್ನು ಜೀವನದಲ್ಲಿ ಪಾಲಿಸಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದಿನ ಯುವಕರು ಉನ್ನತ ಶಿಕ್ಷಣ ಪಡೆದು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರು ತೋರಿದ ಮಾರ್ಗದಲ್ಲಿ ನಡೆದಾಗ ಸಮಾಜದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಭಗವಾನ್ ಬುದ್ಧ ಹಾಗೂ ಡಾ. ಅಂಬೇಡ್ಕರ್ ಜಯಂತಿಯನ್ನು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಿರುವುದು ಸಂತಸದ ವಿಷಯವಾಗಿದೆ. ಛಲವಾದಿ ಸಮಾಜದವರು ಒಗ್ಗೂಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಸಮಾಜದ ಏಕತೆ ಮತ್ತು ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಬೀದರದ ಅಣದೂರ ಬುದ್ಧ ವಿಹಾರದ ಪೂಜ್ಯ ಭಂತೇಜಿ ವರಜ್ಯೋತಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ್ ಪುಲಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅನುರಾಧ ಪಾಟೀಲ್, ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ. ಗೌತಮ್ ಕಟ್ಟಿಮನಿ, ಉಪನ್ಯಾಸಕ ಸುರೇಶ್ ಕಣೀಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಸುನೀಲಕುಮಾರ ಕೊಳ್ಳಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾರುತಿ ಹೋಳಗೋಳಕರ ಮಾತನಾಡಿದರು. ರೇವಣಸಿದ್ದಪ್ಪ ಸಿಂದೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಭಗವಾನ್ ಬುದ್ಧರ ಮೂರ್ತಿಗೆ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಹಾಗೂ ಪೂಜ್ಯ ಭಂತೇಜಿ ವರಜ್ಯೋತಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಕೋತ್ತಲ ಬಸವೇಶ್ವರ ದೇವಾಲಯದಿಂದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ಸರ್ಕಾರಿ ನೌಕರರ ಭವನದವರೆಗೆ ತೆರಳಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಛಲವಾದಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.