Kalaburagi | ಜಾನಪದ ಸಂಸ್ಕೃತಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ: ಡಾ.ವಾಸುದೇವ ಸೇಡಂ
ಕಲಬುರಗಿ: ಜಾನಪದ ಸಂಸ್ಕೃತಿಯು ಅನುಭಾವದಿಂದ ಕೂಡಿದ್ದು, ಅದು ಜನರ ಜೀವನ ಪದ್ಧತಿ, ಸಂಸ್ಕಾರ, ಆಚಾರ-ವಿಚಾರ ಹಾಗೂ ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಜಾನಪದ ಸಾಹಿತಿ ಡಾ. ವಾಸುದೇವ ಸೇಡಂ ಎಚ್. ಅಭಿಪ್ರಾಯಪಟ್ಟರು.
ನಗರದ ಸ್ಟೇಡಿಯಂ ಬ್ಯಾಂಕ್ ಕಾಲನಿಯಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಜೋಗುಳ ಝೇಂಕಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಮಗು ಜನಿಸಿದ ಕ್ಷಣದಿಂದ ತೊಟ್ಟಿಲು ಆಚರಣೆ ಆರಂಭವಾಗಿ ಜೀವನದ ಕೊನೆಯ ಹಂತದವರೆಗೂ ಜಾನಪದ ಪದ್ಧತಿಗಳು ಮಾನವ ಬದುಕಿನೊಂದಿಗೆ ಬೆಸೆದುಕೊಂಡಿವೆ. ತಾನು, ತನ್ನವರು ಹಾಗೂ ಸಮಾಜ ಎಲ್ಲರೂ ಒಂದೇ ಎಂಬ ಭಾವನೆಯನ್ನು ಜಾನಪದ ಸಂಸ್ಕೃತಿ ಬೆಳೆಸುತ್ತದೆ” ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ನಿಂಗಪ್ಪ ಮಾತನಾಡಿ, “ಜಾನಪದವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆಯೇ. ವಿದೇಶಿ ಸಂಸ್ಕೃತಿ ನಮ್ಮ ಸಂಸ್ಕೃತಿಗೆ ಮಾರಕವಾಗುತ್ತಿದೆ. ಜಾನಪದ ಸಂಸ್ಕೃತಿಯಲ್ಲಿ ಉತ್ತಮ ಸಂಬಂಧಗಳು, ಗೌರವ ಹಾಗೂ ಮೌಲ್ಯಗಳಿಗೆ ಆದ್ಯತೆ ನೀಡಲಾಗುತ್ತದೆ” ಎಂದು ತಿಳಿಸಿದರು.
ದೇಶಿಯ ಸೊಗಡನ್ನು ಬಿಂಬಿಸುವ ಹಬ್ಬಗಳು ಮತ್ತು ಆಚರಣೆಗಳು ನಿರಂತರವಾಗಿ ನಡೆಯಬೇಕು. ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸದಸ್ಯ ಶಿವಶಂಕರ ಬಿ., ಜಾನಪದ ಕಲಾವಿದೆ ಮಹಾದೇವಿ ಎನ್.ಮುರಡಿ, ಪ್ರಮುಖರಾದ ಮಹಾಂತೇಶ ಬಿರಾದಾರ, ಮನೋಹರ ಗಾಯಕವಾಡ, ಎಂ.ಡಿ.ಬೋರೆ, ಮಲ್ಲಿಕಾರ್ಜುನ ಯಾಳವಾರ, ರವಿಚಂದ್ರ ಮಯೂರ, ಪ್ರಭುರಾಜ ಮಸ್ಕಿ, ಮಯೂರ ಯಾಳವಾರ, ಎಚ್.ಶಂಕರ, ಮರಲಿಂಗಪ್ಪ ಚಟ್ನಳ್ಳಿ, ಮಲ್ಲಿನಾಥ ಮುರಡಿ, ಜಯಶ್ರೀ, ರಮಾ ದರ್ಗಿ, ಚಂದ್ರಕಲಾ, ಭುವನೇಶ್ವರಿ, ಮಂಜುನಾಥ ಮುರಡಿ, ಸಾವಿತ್ರಿ, ಐಶ್ವರ್ಯ,ಲಕ್ಷ್ಮೀ, ಶರಣ್ ನಿರಗುಡಿ, ಶಿವಪುತ್ರಪ್ಪ ಸೇರಿದಂತೆ ಇನ್ನಿತರರಿದ್ದರು. ಹಿರಿಯ ಮಹಿಳೆಯರು ಜಾನಪದ ಗೀತೆಗಳನ್ನು ಹಾಡಿದರು. ನಂತರ ಅವರನ್ನು ಗೌರವಿಸಲಾಯಿತು.